ರಾಯಚೂರು ಜಿಲ್ಲೆಯ ಇಬ್ಬರು ಹಾಲಿ ಜೆಡಿಎಸ್ ಶಾಸಕರು ಬಿಜೆಪಿಯತ್ತ?
ರಾಯಚೂರು, ಜನವರಿ 10: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಗರಿಗೆದರಿದೆ. ಒಂದು ಕಡೆ ಬಿಜೆಪಿ ಅಪರೇಷನ್ ಕಮಲ, ಮತ್ತೊಂದೆಡೆ ಅಪರೇಷನ್ ಕಾಂಗ್ರೆಸ್ ನಡೆಯುತ್ತಿರುವುದರಿಂದ ಯಾರು ಯಾವ ಪಕ್ಷದತ್ತ ಗುಳೆ ಹೋಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್ ಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದೆ ಎನ್ನುವ ಸುದ್ದಿ ಜೆಡಿಎಸ್ ಅಂಗಳದಲ್ಲಿ ಸುಳಿದಾಡುತ್ತಿದೆ. ಇದರಿಂದ ಇವರಿಬ್ಬರು ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆದರೆ, ಬಿಜೆಪಿಯಿಂದ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ. ಹೀಗಾಗಿ ಇಬ್ಬರು ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಆಪರೇಷನ್ ಕಮಲ, 7 ಜೆಡಿಎಸ್ ಶಾಸಕರು ಬಿಜೆಪಿಗೆ?
ರಾಯಚೂರು ಜಿಲ್ಲೆಯ ಚುನಾವಣೆ ಉಸ್ತುವಾರಿ ಶರವಣ ಅವರು ಇತ್ತೀಚೆಗೆ ಜಿಲ್ಲೆಯಲ್ಲಿ ಮನೆ-ಮನೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಕ್ಷ ಸಂಘಟನೆ ಬಗ್ಗೆ ಸರಣಿ ಸಭೆಗಳನ್ನು ನಡೆಸಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚಿಸಿದರು. ಆದರೆ, ಇಷ್ಟೆಲ್ಲ ಆದರೂ ಜೆಡಿಎಸ್ ನ ಹಾಲಿ ಶಾಸಕರು ವಜ್ಜಲ್ ಹಾಗೂ ಶಿವರಾಜ್ ಪಾರೀಲ್ ನಮಗೆ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ದೂರು ಉಳಿದಿದ್ದರು. ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನ ಗುರುತಿಸಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೇ ಹೇಳಿರುವುದರಿಂದ ಈ ಇಬ್ಬರು ಶಾಸಕರು ಜೆಡಿಎಸ್ ನಿಂದ ಹೊರನಡೆಯುತ್ತಿರುವುದು ಖಚಿತವಾಗಿದೆ.
ಪಕ್ಷ ಸಂಘಟನೆಯಿಂದ ದೂರ ಉಳಿದ ಈ ಇಬ್ಬರು ಶಾಸಕರು
ಈಗಾಗಲೇ ಪಕ್ಷ ಸಂಘಟನೆಯಿಂದ ದೂರ ಉಳಿದಿರುವ ಈ ಇಬ್ಬರು ಶಾಸಕರು ಬಿಜೆಪಿ ಟಿಕೆಟ್ ಗಾಗಿ ನಡೆಸಿರುವ ಪ್ರಯತ್ನ ಗುಟ್ಟಾಗಿಯೇನು ಉಳಿದಿಲ್ಲ. ರಾಯಚೂರು ಜಿಲ್ಲೆಯ ಉಸ್ತುವಾರಿಯಾಗಿರುವ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸಿ ಅಭ್ಯರ್ಥಿಗಳ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಇವರಿಬ್ಬರು ಹಾಲಿ ಶಾಸಕರು ಸುಳಿದಿಲ್ಲದಿರುವುದು ಎಲ್ಲವೂ ಸರಿ ಇಲ್ಲ ಎನ್ನುವುದು ತೋರಿಸುತ್ತಿದೆ.
ರಾಯಚೂರು ಜಿಲ್ಲೆಯ 6 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು
ರಾಯಚೂರು ನಗರ ಕ್ಷೇತ್ರಕ್ಕೆ ಮಹಾಂತೇಶ್ ಪಾಟೀಲ್, ದೇವದುರ್ಗಕ್ಕೆ ಕರಿಯಮ್ಮ ನಾಯಕ್, ಲಿಂಗಸುಗೂರಿಗೆ ಹನುಮಂತಪ್ಪ ಆಲ್ಕೋಡ್, ಮಾನ್ವಿಗೆ ರಾಜಾ ವೆಂಕಟಪ್ಪ ನಾಯಕ್, ಸಿಂಧನೂರಿಗೆ ವೆಂಕಟರಾವ್ ನಾಡಗೌಡ ಸ್ಪರ್ಧಿಸುವುದು ಖಚಿತವಾಗಿದೆ. ಮಸ್ಕಿ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪರ್ಯಾಯ ಅಭ್ಯರ್ಥಿಗಳನ್ನ ಹುಡುಕಿಕೊಂಡ ಜೆಡಿಎಸ್
ಮುಂದಿನ ಚುನಾವಣೆಗೆ ಈ ಇಬ್ಬರು ಶಾಸಕರು ಪಕ್ಷ ತೊರೆಯಲು ಸಜ್ಜಾಗಿದ್ದು, ಇದನ್ನ ಮೊದಲೇ ಅರಿತಿರುವ ಜೆಡಿಎಸ್ ಹೈಕಮಾಂಡ್, ಪರ್ಯಾಯ ಅಭ್ಯರ್ಥಿಗಳನ್ನ ಸಿದ್ಧಮಾಡಿಕೊಂಡಿದೆ. ಡಾ. ಶಿವರಾಜ್ ಪಾಟೀಲ್ ಜಾಗಕ್ಕೆ ಮಹಾಂತೇಶ್ ಪಾಟೀಲ್ ಅತ್ತನೂರು, ಲಿಂಗಸೂರಿಗೆ ವಜ್ಜಲ್ ಬದಲಿಗೆ ಹನುಮಂತಪ್ಪ ಆಲ್ಕೋಡ್ ಅವರನ್ನು ಕಣ್ಣಕ್ಕಿಳಿಸಲು ತೀರ್ಮಾನಿಸಿದೆ.
ಅತಂತ್ರ ಸ್ಥಿತಿಯಲ್ಲಿ ಇಬ್ಬರು ಶಾಸಕರು
ಬಿಜೆಪಿಯಿಂದ ಜೆಡಿಎಸ್ ಗೆ ಬಂದಿದ್ದ ಮಾನಪ್ಪ ವಜ್ಜಲ್ ಗೆ ಪುನಃ ಬಿಜೆಪಿ ಟಿಕೆಟ್ ನೀಡುತ್ತಾ, ಜೆಡಿಎಸ್ ನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾದ ಶಿವರಾಜ್ ಪಾಟೀಲ್ ಗೆ ಬಿಜೆಪಿಯಿಂದ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ. ಹೀಗಾಗಿ ಇಬ್ಬರು ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದು, ಕಮಲದ ಟಿಕೆಟ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.