ಬದಲಾದ ನಿಯತ್ತು, ನನ್ನ ಎದೆಬಗೆದರೆ ಸಿದ್ದರಾಮಯ್ಯ ಕಾಣಿಸುವುದಿಲ್ಲ: ಎಂಟಿಬಿ ನಾಗರಾಜ್
ಬೆಂಗಳೂರು, ಜುಲೈ 27: ಕೆಲವೇ ಕೆಲವು ತಿಂಗಳ ಹಿಂದೆ, ನನಗೆ ಸಿದ್ದರಾಮಯ್ಯನವರ ಮೇಲೆ ಎಷ್ಟು ಅಭಿಮಾನವಿದೆ ಅಂದರೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಈಗ ತಮ್ಮ ಮಾತನ್ನು ಬದಲಾಯಿಸಿದ್ದಾರೆ.
ಈಗ ನನ್ನ ಎದೆ ಬಗೆದರೆ ದೇವರು ಕಾಣಿಸುತ್ತಾರೆ ಎಂದಿರುವ ಎಂಟಿಬಿ, ನಾನು ಅವರೆನ್ನೆಲ್ಲಾ ಬಿಟ್ಟು ಬೆಂಗಳೂರಿನಿಂದ ಬಂದಾಯಿತಲ್ಲ ಎಂದಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಒಂದು ತಿಂಗಳ ಹಿಂದೆನೇ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಅತೃಪ್ತ ಶಾಸಕರ ಫೋನ್ ಕರೆ: ಯಡಿಯೂರಪ್ಪಗೆ ಆತಂಕ
ನನಗೆ ಯಾವುದೇ ಮಂತ್ರಿ ಪದವಿಯ ಆಸೆಯಿಲ್ಲ, ರಾಜಕೀಯ ನಿವೃತ್ತಿ ಪಡೆಯಲು ನಾನು ಆಲೋಚಿಸುತ್ತಿದ್ದೇನೆ ಎಂದು ಹೇಳಿರುವ ನಾಗರಾಜ್, ನಮಗೆ ಯಾರಿಂದಲೂ ದೂರವಾಣಿ ಕರೆಬಂದಿಲ್ಲ, ನಾವು ಯಾರನ್ನೂ ಸಂಪರ್ಕಿಸಲು ಹೋಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅತೃಪ್ತರಲ್ಲಿ ಇಬ್ಬರು ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದಾರೆ ಎನ್ನುವುದು ಶುದ್ದಸುಳ್ಳು. ಫೋನ್ ಮಾಡಿದ್ದೇ ಆಗಿದ್ದಲ್ಲಿ, ಯಾವ ನಂಬರ್ ನಿಂದ ಫೋನ್ ಬಂತು ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಎಂಟಿಬಿ ನಾಗರಾಜ್ ಚಾಲೆಂಜ್ ಮಾಡಿದ್ದಾರೆ.
ನಮ್ಮನ್ನು ಬೆದರಿಸಲು ಈ ತಂತ್ರವನ್ನು ಬಳಸಲಾಗುತ್ತಿದೆ ಎನ್ನುವುದು ನಾವು ಬಲ್ಲೆವು ಎಂದಿರುವ ಎಂಟಿಬಿ, ನಾವೆಲ್ಲಾ ಹದಿನೈದು ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಯಡಿಯೂರಪ್ಪ ಹೇಳಿಕೆಗೆ ಎಚ್ ಡಿ ದೇವೇಗೌಡರ ಸ್ವಾಗತ
ಅತೃಪ್ತರಲ್ಲಿ ಇಬ್ಬರು ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದಾರೆಂದು ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ್ ಹೇಳಿದ್ದರು. ಇದಕ್ಕೆ ಹೌದು ಎಂದು ಸಿದ್ದರಾಮಯ್ಯನವರೂ ಪ್ರತಿಕ್ರಿಯಿಸಿದ್ದರು.