ಸಿದ್ದರಾಮಯ್ಯಗೆ ಅತೃಪ್ತ ಶಾಸಕರ ಫೋನ್ ಕರೆ: ಯಡಿಯೂರಪ್ಪಗೆ ಆತಂಕ
Recommended Video
ಬೆಂಗಳೂರು, ಜುಲೈ 27: ಮುಂಬೈನಲ್ಲಿ ನೆಲೆಸಿರುವ ಅತೃಪ್ತ ಶಾಸಕರಲ್ಲಿ ಕೆಲವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಇಬ್ಬರು ಶಾಸಕರು ಕರೆ ಮಾಡಿ, ಅನರ್ಹತೆ ವಿಷಯವಾಗಿ ಮಾತನಾಡಿದರು' ಎಂದು ಹೇಳಿದ್ದಾರೆ. ಆದರೆ ಶಾಸಕರಿಬ್ಬರು ಯಾರು ಎಂದು ಹೇಳಲು ನಿರಾಕರಿಸಿದರು.
ಕರೆ ಮಾಡಿದ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಅವರು ಮಾಡದೇ ಇದ್ದಿರಲಾರರು ಎಂದೇ ನಂಬಲಾಗುತ್ತಿದ್ದು, ಸಿದ್ದರಾಮಯ್ಯ ಅವರ ಕರೆಗೆ ಓಗೊಟ್ಟು ಅತೃಪ್ತ ಶಾಸಕರು ನಿರ್ಣಯ ಬದಲಿಸಿದರೆ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಲಿದೆ.
ಜುಲೈ 29ರಂದು ವಿಶ್ವಾಸಮತಯಾಚನೆ : ಯಡಿಯೂರಪ್ಪ
ಸೋಮವಾರ ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಮಾಡಬೇಕಿದ್ದು, ಮುಂಬೈನಲ್ಲಿರುವ ಶಾಸಕರಲ್ಲಿ ಕೆಲವರು ಪಕ್ಷ ಸದನಕ್ಕೆ ಹಾಜರಾಗಿ ವಿಶ್ವಾಸಮತಕ್ಕೆ ವಿರುದ್ಧ ಮತಚಲಾಯಿಸಿದರೆ ಯಡಿಯೂರಪ್ಪ ಅವರ ಸರ್ಕಾರ ರಚನೆ ಕನಸು ಛಿದ್ರವಾಗಲಿದೆ.
ಯಶಸ್ವಿಯಾದ ಅನರ್ಹತೆಯ ಅಸ್ತ್ರ
ಕಾಂಗ್ರೆಸ್-ಜೆಡಿಎಸ್ ಪ್ರಯೋಗಿಸಿದ ಅನರ್ಹತೆಯ ಅಸ್ತ್ರ ಯಶಸ್ವಿಯಾಗಿದ್ದಕ್ಕೆ ಇಂದು ಸಿದ್ದರಾಮಯ್ಯ ಅವರಿಗೆ ಬಂದ ಕರೆ ಉದಾಹರಣೆಯಾಗಿದ್ದು, ಮೂವರು ಶಾಸಕರು ಅನರ್ಹರಾಗಿರುವುದು ಉಳಿದ ಅತೃಪ್ತ ಶಾಸಕರಲ್ಲಿ ಅನರ್ಹತೆಯ ಭೀತಿಯನ್ನು ಹುಟ್ಟಿಸಿದೆ. ಹಾಗಾಗಿ ಅವರು ತಮ್ಮ ನಿರ್ಣಯ ಬದಲಾಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅನರ್ಹರಾಗಿರದ ಶಾಸಕರಿಂದಲೇ ಕರೆ ಶಂಕೆ
ಪ್ರಸ್ತುತ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಶಾಸಕರು ಅನರ್ಹತೆ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಹಾಗಾಗಿ ಆ ಶಾಸಕರು ಈಗಾಗಲೇ ಅನರ್ಹಗೊಂಡಿರುವ ಶಾಸಕರಲ್ಲವೆಂದು ಅಂದಾಜಿಸಬಹುದು. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಅವರು ಈಗಾಗಲೇ ಅನರ್ಹಗೊಂಡಿದ್ದಾರೆ.
ಸಿದ್ದರಾಮಯ್ಯ ಸಂಪರ್ಕದಲ್ಲಿ ಇಬ್ಬರು ಅತೃಪ್ತರು: ಎಂಬಿ ಪಾಟೀಲ
ಇಬ್ಬರು ಅತೃಪ್ತರು ಸಿದ್ದರಾಮಯ್ಯ ಸಂಪರ್ಕದಲ್ಲಿ: ಎಂಬಿ ಪಾಟೀಲ್
ಇಂದು ಬೆಳಿಗ್ಗೆಯಷ್ಟೆ ಎಂ.ಬಿ.ಪಾಟೀಲ್ ಅವರು ಇದೇ ವಿಷಯವಾಗಿ ಮಾತನಾಡಿ, 'ಇಬ್ಬರು ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ' ಎಂದಿದ್ದರು. ಮುಂದುವರೆದು, 'ಸಿದ್ದರಾಮಯ್ಯ ಅವರು ಅವರ ಕರೆಗಳನ್ನು ಸ್ವೀಕರಿಸುತ್ತಿಲ್ಲ' ಎಂದಿದ್ದರು.
ಅತೃಪ್ತರ ನಿರ್ಧಾರದ ಮೇಲೆ ಯಡಿಯೂರಪ್ಪ ಭವಿಷ್ಯ ನಿರ್ಧಾರ
ಯಡಿಯೂರಪ್ಪ ಅವರು ಜುಲೈ 29 ರಂದು ವಿಶ್ವಾಸಮತ ಯಾಚನೆ ಮಾಡುವುದಾಗಿ ಈಗಾಲಗೇ ಘೋಷಿಸಿದ್ದಾರೆ. ಮುಂಬೈನಲ್ಲಿರುವ ಅತೃಪ್ತ ಶಾಸಕರ ನಿರ್ಧಾರದ ಮೇಲೆ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರೆಯುತ್ತಾರೆಯೋ ಇಲ್ಲವೋ ಎಂಬುದು ನಿರ್ಧಾರವಾಗಿದೆ.