ಬಿಜೆಪಿಯಲ್ಲಿ ಬಿರುಗಾಳಿ ಬೀಸುತ್ತಿರುವ ಯಡಿಯೂರಪ್ಪ ಕುರಿತಾದ ಅನಾಮಧೇಯ ಪತ್ರಗಳು
ಹುಟ್ಟು ಹೋರಾಟದಿಂದಲೇ ಈ ಹಂತಕ್ಕೆ ಬಂದು ನಿಂತಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇಂದು (ಫೆ 27) 77ನೇ ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಆಯೋಜಿಸುತ್ತಿರುವ ಅಭಿನಂದನಾ ಸಮಾರಂಭಕ್ಕೆ ಪಕ್ಷಾತೀತವಾಗಿ ಎಲ್ಲಾ ಮುಖಂಡರು ಆಗಮಿಸುತ್ತಿದ್ದಾರೆ.
ಮುಖ್ಯಮಂತ್ರಿ ಆದಾಗಿನಿಂದ ಯಡಿಯೂರಪ್ಪ ಅವರದ್ದು ತಂತಿಯ ಮೇಲಿನ ನಡಿಗೆ. ಹೈಕಮಾಂಡ್ ಸಂಪೂರ್ಣ ಬೆಂಬಲವಿಲ್ಲದಿದ್ದರೂ, ಪ್ರಮುಖವಾಗಿ ನೆರೆ ಪರಿಹಾರ ಮತ್ತು ಉಪಚುನಾವಣೆಯಲ್ಲಿ ಯಡಿಯೂರಪ್ಪ ತಮ್ಮ ಶಕ್ತಿಪ್ರದರ್ಶನ ಮಾಡಿದ್ದರು.
ಸಿಎಂ ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ, ಶುಭಕೋರಿದ ಪ್ರಧಾನಿ
ಇಷ್ಟೆಲ್ಲಾ ಪೀಠಿಕೆ ಏನಕ್ಕೆಂದರೆ, ಸದ್ಯ ಬಿಜೆಪಿಯೊಳಗೆ ಬಿರುಗಾಳಿ ಬೀಸುತ್ತಿರುವ ಅನಾಮಧೇಯ ಪತ್ರಗಳು. ಒಂದು ಯಡಿಯೂರಪ್ಪನವರ ವಿರುದ್ದವಾಗಿದ್ದರೆ, ಇನ್ನೊಂದು ಪರವಾಗಿದೆ. ಎರಡೂ ಪತ್ರಗಳು ಅಮಿತ್ ಶಾ ಬಾಗಿಲು ತಲುಪಿಯಾಗಿದೆ ಎಂದು ಹೇಳಲಾಗುತ್ತಿದೆ.
ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ವಿಜಯೇಂದ್ರ ಆಶಿಸಿದ್ದೇನು?
ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿನ ಆಂತರಿಕ ಭಿನ್ನಮತ ಸ್ಪೋಟಗೊಳ್ಳಲು ವೇದಿಕೆಯಾಗಲಿದೆಯೇ ಎನ್ನುವುದು ಬಿಜೆಪಿ ಮುಖಂಡರಿಂದ ಹಿಡಿದು, ಕಾರ್ಯಕರ್ತರಿಗೆ ಕಾಡುತ್ತಿರುವ ಆತಂಕ. ಆ ಅನಾಮಧೇಯ ಪತ್ರದಲ್ಲಿ ಅಂತದ್ದು ಏನಿದೆ? ಮುಂದೆ ಓದಿ..
ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಲೂ ಸಾಧ್ಯವಿಲ್ಲ
ಒಂದು ಪತ್ರ ಬಹಳ ಹಿಂದಿನಿಂದಲೂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿದೆ ಎನ್ನುವ ಸುದ್ದಿಯಿದೆ. ಅದರಲ್ಲಿ ಯಡಿಯೂರಪ್ಪ ಗೌರವಯುತವಾಗಿ ಸಿಎಂ ಹುದ್ದೆಯಿಂದ ಕೆಳಗೆ ಇಳಿಯಲಿ ಎಂದು ಬರೆದಿರುವ ಪತ್ರ ಇದಾಗಿತ್ತು. ಇದಕ್ಕೆ ಕೌಂಟರ್ ಎನ್ನುವಂತೆ, ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅವರ ಪರವಾಗಿ ಹರಿದಾಡುತ್ತಿರುವ ಲೇಟೆಸ್ಟ್ ಪತ್ರ.
ಯಡಿಯೂರಪ್ಪನವರಿಗೂ ವಯಸ್ಸಾಯಿತು
ಮೊದಲು ಹರಿದಾಡುತ್ತಿದ್ದ ಅನಾಮಧೇಯ ಪತ್ರದಲ್ಲಿನ ಒಟ್ಟಾರೆ ಸಾರಾಂಶ ಏನಂದರೆ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ನಿಸ್ಸಂಸಯವಾಗಿ ಯಡಿಯೂರಪ್ಪನವರೇ. ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ. ಅವರಿಗೂ ವಯಸ್ಸಾಯಿತು. ಆಡಳಿತ ಯಂತ್ರದ ಮೇಲಿನ ಅವರ ಹಿಡಿತ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.
ಬೇರೊಬ್ಬರು ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ
ಪರಿಸ್ಥಿತಿ ಹೀಗಿರುವಾಗ, ಬೇರೊಬ್ಬರು ಸೂಪರ್ ಸಿಎಂ ರೀತಿಯಲ್ಲಿ (ಪರೋಕ್ಷವಾಗಿ ವಿಜಯೇಂದ್ರ ಅವರನ್ನು ಉಲ್ಲೇಖಿಸಿದ್ದು) ವರ್ತಿಸುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ಘಟಕಕ್ಕೆ ಉತ್ತಮ ಬೆಳವಣಿಗೆಯಲ್ಲ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಪಕ್ಷಕ್ಕೆ ದೊಡ್ಡ ಪರಿಣಾಮವನ್ನು ಬೀರುವುದು ನಿಶ್ಚಿತ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎನ್ನುವ ಅನಾಮಧೇಯ ಪತ್ರ, 'ಬಿಜೆಪಿ ನಿಷ್ಟಾವಂತರು' ಎನ್ನುವ ಹೆಸರಿನಲ್ಲಿ ಓಡಾಡುತ್ತಿತ್ತಂತೆ.
ಜೇಟ್ಲಿ, ಸುಷ್ಮಾ ಸ್ವರಾಜ್ ಸೇವೆಯನ್ನು ನಮ್ಮ ಪಕ್ಷ ಪಡೆದುಕೊಂಡಿರಲಿಲ್ಲವೇ
ಈಗ ಇನ್ನೊಂದು ಅನಾಮಧೇಯ ಪತ್ರ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಅದರಲ್ಲಿ, ಯಡಿಯೂರಪ್ಪನವರ ಹೊರತಾದ ಬಿಜೆಪಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಕೆಲವೇ ಕೆಲವರು ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವಯಸ್ಸಿನಲ್ಲೂ ಅವರು ಚುರುಕಾಗಿದ್ದಾರೆ ಎನ್ನುವುದಕ್ಕೆ ಅವರ ದೈನಂದಿನ ಚಟುವಟಿಕೆಗಳೇ ಸಾಕ್ಷಿ. ಈ ಹಿಂದೆ ಅನಾರೋಗ್ಯ ಪೀಡಿತರಾಗಿದ್ದರೂ ಕೇಂದ್ರದಲ್ಲಿ ಇವರುಗಳ (ಜೇಟ್ಲಿ, ಸುಷ್ಮಾ ಸ್ವರಾಜ್) ಸೇವೆಯನ್ನು ನಮ್ಮ ಪಕ್ಷ ಪಡೆದುಕೊಂಡಿರಲಿಲ್ಲವೇ.
ಸಮುದಾಯದವರು ಬಿಜೆಪಿಯಿಂದ ದೂರವಾಗುವುದು ನಿಶ್ಚಿತ
ಯಡಿಯೂರಪ್ಪನವರು ಇಲ್ಲದಿದ್ದರೆ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ದೂರವಾಗುವುದು ನಿಶ್ಚಿತ. ವಯಸ್ಸು ಅವರ ಸಾಧನೆಗೆ ಅಡ್ಡಿಯಾಗುತ್ತಿಲ್ಲ ಎನ್ನುವುದು ಪಕ್ಷದೊಳಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿ ಬಿಜೆಪಿಯಲ್ಲಿ ಯಾರು ಎನ್ನುವ ಸಾರಾಂಶವಿರುವ, ಇನ್ನೊಂದು ಅನಾಮಧೇಯ ಪತ್ರ, ಬಿಜೆಪಿ ವರಿಷ್ಠರ ಅಂಗಣದಲ್ಲಿ ಸದ್ದು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಮುಂದೆ ಏನಾಗುತ್ತದೋ?