ಇಂದೂ ಮುಂದುವರಿದ ಸಿದ್ದು-ಬಿಎಸ್ ವೈ ಟ್ವಿಟ್ಟರ್ ವಾರ್!
Recommended Video
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಡುವಿನ ಟ್ವಿಟ್ಟರ್ ಸಮರ ಇನ್ನೂ ನಿಂತಿಲ್ಲ. ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರದ ಘಟಾನುಘಟಿ ನಾಯಕರೆಲ್ಲ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಯ್ತು. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಬಂದು ಹೋಗಿದ್ದಾಯ್ತು. ಕೇಂದ್ರದ ನಾಯಕರ ಭೇಟಿ ಕರ್ನಾತಕದ ನಾಯಕರ ಹಗ್ಗಜಗ್ಗಾಟಕ್ಕೆ ವೇದಿಗೆ ಕಲ್ಪಿಸಿದೆ!
ಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆ
ರಾಹುಲ್ ಗಾಂಧಿಯವರು ಮಾಂಸ ತಿಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂಬಲ್ಲಿಂದ ಹಿಡಿದು, ಮಹದಾಯಿಯಂಥ ಗಂಭೀರ ವಿಚಾರಗಳ ಬಗ್ಗೆ ನಿನ್ನೆ(ಫೆ.13) ಟ್ವೀಟ್ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಮಾಂಸ ಸೇವಿಸಿದ್ದು ಸುಳ್ಳು!
"ಬಿಜೆಪಿಯವರು ಆರೋಪ ಮಾಡಿರುವಂತೆ ರಾಹುಲ್ ಗಾಂಧಿಯವರು ದೇವಾಲಯಕ್ಕೆ ಹೋಗುವ ಮೊದಲು ಮಾಂಸದ ಆಹಾರ ಸೇವನೆ ಮಾಡಿಯೇ ಇಲ್ಲ. ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಇಂತಹ ಸುಳ್ಳು ಆರೋಪಗಳೇ ಅವರ ಬಂಡವಾಳ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.
ಮೋದಿ ಸೂಕ್ತ ದಾಖಲೆ ನೀಡಲಿ
"ಪ್ರಧಾನಿ ನರೇಂದ್ರ ಮೋದಿ ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ, ಅದರಿಂದ ನಮಗೇನೂ ತೊಂದರೆ ಇಲ್ಲ. ಅವರದ್ದೂ ಒಂದು ರಾಜಕೀಯ ಪಕ್ಷ, ಹೀಗಾಗಿ ಬರುತ್ತಾರೆ. ಕಳೆದ ಬಾರಿ ಬಂದಾಗ ನಮ್ಮದು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಮತ್ತೆ ರಾಜ್ಯಕ್ಕೆ ಬಂದಾಗ ಅದಕ್ಕೆ ಸೂಕ್ತ ದಾಖಲೆ ಬಿಡುಗಡೆ ಮಾಡಲಿ" ಎಂದೂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ!
ಬಿಜೆಪಿ ನಾಯಕರು ಭಯಭೀತರಾಗಿದ್ದಾರೆ!
"ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಎರಡನೇ ರಾಜ್ಯ ಪ್ರವಾಸ ಮುಂಬೈ-ಕರ್ನಾಟಕ ಭಾಗದಲ್ಲಿ ಫೆಬ್ರವರಿ 24ರಿಂದ ಮೂರು ದಿನ ನಡೆಯಲಿದೆ. ಗುಜರಾತ್ ವಿಜಯ ಯಾತ್ರೆ ಕರ್ನಾಟಕದಲ್ಲಿಯೂ ಮುಂದುವರಿಯಲಿದೆ. ಇದರಿಂದ ಬಿಜೆಪಿ ನಾಯಕರು ಭಯಭೀತರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ ಸಿದ್ದರಾಮಯ್ಯ.
ಮಹದಾಯಿ ಕುರಿತು ಪ್ರತಿಕ್ರಿಯೆ
"ಮಹಾದಾಯಿ ವಿಚಾರದಲ್ಲಿ ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿರುವುದು ನಮ್ಮ ನೈತಿಕ ವಿಜಯ. ನಾವು ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆಯೂ ಆಗಿಲ್ಲ ಎಂದು ನಾವು ಮೊದಲೇ ಹೇಳಿದ್ದೆವು. ಈಗ ಬೇರೆ ದಾರಿ ಇಲ್ಲದೆ ಅವರಾಗಿಯೇ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದ್ದಾರೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.