ಕರ್ನಾಟಕ ಜನತೆ ಪರವಾಗಿ ಮೋದಿ- ಅಮಿತ್ ಶಾಗೆ ಕೃತಜ್ಞತೆ ಅರ್ಪಿಸಿದ ಬಿಎಸ್ ವೈ
ಬೆಂಗಳೂರು, ಅಕ್ಟೋಬರ್ 4: ಕೇಂದ್ರ ಸರ್ಕಾರದಿಂದ ಕರ್ನಾಟಕ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು ಮಂಜೂರು ಮಾಡಲಾಗಿದೆ. ಕರ್ನಾಟಕ ಸರ್ಕಾರ ಅಂದಾಜು ಮಾಡಿದ್ದು ಮೂವತ್ತೆಂಟು ಸಾವಿರ ಕೋಟಿಗೂ ಹೆಚ್ಚು ಹಾನಿ. ಕೇಂದ್ರ ಸರ್ಕಾರದ ಬಳಿ ಕೇಳಿದ ಪರಿಹಾರ ಮೂರು ಸಾವಿರದ ನಾನೂರು ಕೋಟಿ. ಶುಕ್ರವಾರದಂದು ಸುದ್ದಿ ಬಂದಿದೆ; ಕರ್ನಾಟಕಕ್ಕೆ ಸಾವಿರದಿನ್ನೂರು ಕೋಟಿ ಬಿಡುಗಡೆ ಮಾಡಲು ಕೇಂದ್ರ ಒಪ್ಪಿದೆ.
ಫುಲ್ಲು ಡಲ್ ಆಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಿಕ್ಕಾಪಟ್ಟೆ ಸಿಟ್ಟಾಗಿದ್ದ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡರು ಸಟಕ್ಕನೆ ಟ್ವೀಟ್ ಮಾಡಿದ್ದಾರೆ. ಹಣ ಬಿಡುಗಡೆ ಆಗಲಿದೆ ಎಂಬ ಸುದ್ದಿಯಿಂದಲೇ ಪುಳಕಿತರಾಗಿದ್ದಾರೆ. 'ಸದ್ಯ ಬಿಡುಗಡೆ ಮಾಡಲು ಒಪ್ಪಿದ್ದೇವೆ' ಅಂತಾದರೂ ಹೇಳಿದರಲ್ಲಾ ಎಂಬ ಸಂತೋಷ ಹಾಗೂ ಸಮಾಧಾನ ಇಬ್ಬರಲ್ಲೂ ಇರಬಹುದು.
ಕರ್ನಾಟಕ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ 1200 ಕೋಟಿ ಮಂಜೂರು
ಆದರೆ, ಈ ಘೋಷಣೆಯಿಂದಲೂ ಸಮಾಧಾನ, ಸಂತೃಪ್ತಿ ಆಗದ ಜನರಿರಬಹುದು. ಇಷ್ಟು ಹಣಕ್ಕೆ ಇಷ್ಟೆಲ್ಲ ಮಾಡಿದರಾ? ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರೆಲ್ಲ ಬಂದು ಹೋದರಾ ಅಂತ ಅನಿಸಿದ್ದಿರಬಹುದು. ಆದ್ದರಿಂದ ಆಯ್ದ 5 ಪ್ರತಿಕ್ರಿಯೆಗಳನ್ನು, ಅಂದರೆ ಕೇಂದ್ರ ಸರ್ಕಾರದ ಘೋಷಣೆ ನಂತರ ಬಂದ ಪ್ರತಿಕ್ರಿಯೆ ನಿಮ್ಮೆದುರು ಇಡಲಾಗಿದೆ.
ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕಾಗಿ 1200 ಕೋಟಿ ರುಪಾಯಿ ಮುಂಗಡ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೀ, ಗೃಹ ಸಚಿವ ಅಮಿತ್ ಶ್ ಜೀ ಅವರಿಗೆ ಕರ್ನಾಟಕ ಜನತೆಯ ಪರವಾಗಿ ಕೃತಜ್ಞತೆ ಅರ್ಪಿಸುತ್ತಿದ್ದೇನೆ.
ಡಿ. ವಿ. ಸದಾನಂದ ಗೌಡ, ಕೇಂದ್ರ ಸಚಿವ
ಕರ್ನಾಟಕಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮುಂಗಡವಾಗಿ ನಮ್ಮ ಸರ್ಕಾರ (ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ) 1200 ಕೋಟಿ ರುಪಾಯಿ ಬಿಡುಗಡೆ ಮಾಡಿದೆ.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
1200 ಕೋಟಿ ರುಪಾಯಿ ಮುಂಗಡವಾಗಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀಗೆ ಧನ್ಯವಾದ ಅರ್ಪಿಸುತ್ತೀನಿ. ಇದರಿಂದ ರಾಜ್ಯದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ.
ಎಚ್. ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಪ್ರತಿಭಟನೆ, ಒತ್ತಾಯಗಳಿಗೆ ಮಣಿದು, ಅಳೆದು ತೂಗಿ ಕೇಂದ್ರ ಸರ್ಕಾರ 1200 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.
ರಕ್ಷಿತ್ ಶಿವರಾಂ
ಕರ್ನಾಟಕದಲ್ಲಿ ಇರುವ ಬಿಜೆಪಿ ಸರ್ಕಾರ ಅಂದಾಜು ಮಾಡಿದ ಹಾನಿ ಪ್ರಮಾಣ 35,000 ಕೋಟಿ
ವಾಸ್ತವದಲ್ಲಿ ಆಗಿರುವ ಹಾನಿ 1 ಲಕ್ಷ ಕೋಟಿಗೂ ಹೆಚ್ಚು
ನೆರೆ ಸಂತ್ರಸ್ತ ಜಿಲ್ಲೆಗಳು 15
ಕೇಂದ್ರದಿಂದ ಮಂಜೂರಾದ ಮೊತ್ತ 1,200 ಕೋಟಿ
ಪ್ರತಿ ಜಿಲ್ಲೆಗೆ ದೊರೆಯಬಹುದಾದ ಅಂದಾಜು ಮೊತ್ತ 80 ಕೋಟಿ
ಎಂಟು ತಾಲೂಕು ಇರಬಹುದಾದ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ದೊರೆಯಬಹುದಾದ ಮೊತ್ತ ತಲಾ 10 ಕೋಟಿ
ಇನ್ನು ಪಂಚಾಯಿತಿ ಮಟ್ಟಕ್ಕೆ ಬಂದರೆ ಕಡ್ಲೇಕಾಯಿ ಬೀಜ ಸಿಕ್ಕಂಗೆ ಆಗುತ್ತೆ.