ಭಾರೀ ಮಳೆಗೆ ಹೈರಾಣಾದ ಮಲೆನಾಡ ಜನ, ಶೃಂಗೇರಿಯಲ್ಲಿ ತುಂಗೆಯ ರೌದ್ರ ನರ್ತನ
Recommended Video
ಚಿಕ್ಕಮಗಳೂರು, ಆಗಸ್ಟ್.14: ಮಲೆನಾಡಿನಲ್ಲಿ ಮಳೆಯ ಅಬ್ಬರ ಇಂದು ಮಂಗಳವಾರವೂ ಮುಂದುವರೆದಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಪ್ಯಾರಲಲ್ ರಸ್ತೆ, ಗಾಂಧಿ ಮೈದಾನ ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಇಡೀ ರಾತ್ರಿ ವರುಣ ಸುರಿದ ಪರಿಣಾಮ ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರನಾರಾಯಣ ದೇವಾಲಯ ಮುಳುಗಡೆಯಾಗಿದೆ. ಹಾಗೆಯೇ ಶೃಂಗೇರಿಯ ಕೆರೆಕಟ್ಟೆ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಎರಡು ತಿಂಗಳಿಂದ ಸುರಿಯುತ್ತಿರೋ ಮಳೆಗೆ ಜನ ಹೈರಾಣಗಿದ್ದಾರೆ.
ಸಿಎಂ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲು ತಡೆ ನೀಡಿದ ಮಹಾಮಳೆ
ಎರಡು ದಶಕದ ಬಳಿಕ ಸುರಿಯುತ್ತಿರೋ ಭಾರಿ ಮಳೆಗೆ ಜನ ಕಂಗಾಲಾಗಿದ್ದು, ಮಳೆ ನಿಲ್ಲಲ್ಲೆಂದು ವರುಣನಲ್ಲಿ ಪ್ರಾರ್ಥನೆ ಮಾಡುವ ಪರಿಸ್ಥಿತಿ ಬಂದೊದಗಿದೆ. ಚಿಕ್ಕಮಗಳೂರಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಜಿಲ್ಲೆಯ ಐದು ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಮಂಗಳವಾರ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ನೀಡಿದ್ದಾರೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ ಭಾಗದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಉಳಿದಂತೆ ಕಡೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ.
ಮಹಾಮಳೆಗೆ ಕೊಚ್ಚಿ ಹೋದ ಹಸು
ಎನ್.ಆರ್.ಪುರ ತಾಲೂಕಿನ ನೇರಲೆಕೊಪ್ಪ, ಹಾಲಂದೂರು ಮಾರ್ಗದ ಬಣಗಿಹಳ್ಳದಲ್ಲಿ ಸೇತುವೆ ಮೇಲೆ ಹಸು ಸಂಚರಿಸುವಾಗ ಕೊಚ್ಚಿ ಹೋಗಿದೆ. ಸೇತುವೆಗೆ ಯಾವುದೇ ತಡೆಗೋಡೆ ಇಲ್ಲವಾಗಿದ್ದು, ಸೇತುವೆ ಮೇಲೆ ಎರಡು ಅಡಿ ಹರಿಯುತ್ತಿದ್ದರಿಂದ ಈ ಅನಾಹುತ ಸಂಭವಿಸಿದೆ. ಕಳೆದ ವಾರವೂ ಎರಡು ಹಸುಗಳು ಕೊಚ್ಚಿ ಹೋಗಿದ್ದ ಘಟನೆ ನಡೆದಿತ್ತು.
ವರ್ಷಕ್ಕೊಮ್ಮೆ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಅಭಿಷೇಕ ಮಾಡುವ ನದಿ
ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಕಳೆದ ಆರು ದಿನದಿಂದ ಕಾಫಿನಾಡಲ್ಲಿ ಮುಂದುವರೆದ ಮಳೆಯ ಆರ್ಭಟಕ್ಕೆ ಜನ ಹೈರಾಣಗಿದ್ದಾರೆ. ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕುದುರೆಮುಖ, ಕಳಸ, ಬಾಳೆಹೊನ್ನೂರಿನಲ್ಲಿ ರಾತ್ರಿ ಸಹ ಭಾರಿ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದ ಭದ್ರಾ, ತುಂಗಾ, ಹೇಮಾವತಿ ನದಿ ಹಾಗೂ ಹಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
ರಸ್ತೆ ಸಂಚಾರ ಸಂಪೂರ್ಣ ಬಂದ್
ಮಲೆನಾಡಿನಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಬಳಿ ರಾಜ್ಯ ಹೆದ್ದಾರಿ ಮುಳುಗಡೆಯಾಗಿದೆ. ರಸ್ತೆಯ ಮೇಲೆ ತುಂಗಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಸ್ತೆ ಸಂಪರ್ಕವಿಲ್ಲದೆ ವಾಹನ ಸವಾರರು ಪರದಾಡುತ್ತಿದ್ದಾರೆ.
ತುಂಗೆಯ ರೌದ್ರ ನರ್ತನ
ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿದ್ದು, ಗಾಂಧಿ ಮೈದಾನ, ವಾಹನ ನಿಲುಗಡೆ ಪ್ರದೇಶ, ಕಪ್ಪೆ ಶಂಕರ ದೇವಾಲಯ ,ಪ್ಯಾರರಲ್ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಸಿಗರು, ಸ್ಥಳೀಯರು ಕಂಗಾಲಾಗಿದ್ದಾರೆ.
ತುಂಗಾ ನದಿ ತೀರದಲ್ಲಿರುವ ಶೃಂಗೇರಿಯ ಶಾರದಾಂಬೆ ದೇವಾಲಯದ ಮೆಟ್ಟಿಲಿನವರೆಗೂ ತುಂಗೆ ಹರಿಯುತ್ತಿದ್ದು, ನದಿ ತೀರಕ್ಕೆ ತೆರಳದಂತೆ ದೇವಾಲಯ ಆಡಳಿತ ಮಂಡಳಿ, ಪೊಲೀಸರು ಮನವಿ ಮಾಡುತ್ತಿದ್ದಾರೆ.
ಮರ ಬಿದ್ದು ಸಂಚಾರ ಅಸ್ತವ್ಯಸ್ತ
ಮಲೆನಾಡಿನಲ್ಲಿ ಮಳೆಯ ಅಬ್ಬರ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೃಹತ್ ಮರ ಬಿದ್ದು ಬೆಂಗಳೂರು_ಹೊನ್ನಾವರ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ತರೀಕೆರೆ ತಾಲೂಕಿನ ಗಂಟೆಗಣಿವೆ ಬಳಿ ಈ ಘಟನೆ ಸಂಭವಿಸಿದೆ. ಸುಮಾರು ಒಂದು ಕಿಮೀ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬೃಹತ್ ಮರ ತೆರವು ಗೊಳಿಸಲು ಅಧಿಕಾರಿಗಳ ಪರದಾಡುತ್ತಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.