ಪ್ರೊ. ವೈ.ಎನ್. ಸಿದ್ದೇಗೌಡರ ಅಮೂಲ್ಯ ಸೇವೆಗೆ ಚಾಣಕ್ಯ ಪ್ರಶಸ್ತಿ ನೀಡಿ ಸನ್ಮಾನ
ಬೆಂಗಳೂರು, ಸೆ. 18: ತುಮಕೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಅವರಿಗೆ ಗೋವಾದ ಪ್ರತಿಷ್ಠಿತ ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ ಲಭಿಸಿದೆ. ಪ್ರೊ. ವೈ.ಎಸ್. ಸಿದ್ದೇಗೌಡರು 39 ವರ್ಷ ಬೋಧನೆ ಮತ್ತು ಆಡಳಿತದಲ್ಲಿ ತೋರಿದ ಉತ್ಕೃಷ್ಟ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗೋವಾದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಗೋವಾದ ರಾಜ್ಯಪಾಲ ಶಶಿಧರನ್ ಪಿಳ್ಳೈ ಅವರು ಪ್ರೊ. ಸಿದ್ದೇಗೌಡ ಅವರಿಗೆ ಗೋವಾದ ಪ್ರತಿಷ್ಟಿತ ಪಿಆರ್ಸಿಐ ಮೆರಿಟೋರಿಯಸ್ ಸಂಸ್ಥೆ ಕೊಡುವ ಚಾಣಕ್ಯ ಪ್ರಶಸ್ತಿಯನ್ನು ನೀಡಿದರು.
ವೈ.ಎಸ್. ಸಿದ್ದೇಗೌಡರು ಪ್ರಸ್ತುತ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿದ್ದೇಗೌಡರು ಈ ಹಿಂದೆ ಮೈಸೂರು ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಮೂಲಕ ದೇಶವ್ಯಾಪ್ತಿಯಲ್ಲಿ ಹೆಸರು ಮಾಡಿದ್ದಾರೆ. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆ ವಿಶ್ವ ವಿದ್ಯಾಲಯ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ಸಂಸ್ಕೃತ ವಿದ್ಯಾಲಯ ಕುಲ ಸಚಿವರಾಗಿ ಹೊಸ ದಿಕ್ಕು ನೀಡುವ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ದೇಗೌಡರು ಗುರುತಿಸಿಕೊಂಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅಮೂಲ್ಯ ಕೊಡುಗೆ: ರಾಜ್ಯದಲ್ಲಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಸಮಾಜ ಶಾಸ್ತ್ರ ಪಠ್ಯಕ್ರಮ ಸಮಿತಿಯ ಅಧ್ಯಕ್ಷರಾಗಿ ಕಾಲಮಿತಿಯೊಳಗೆ ಸಮಾಜಶಾಸ್ತ್ರದ ಪಠ್ಯವನ್ನು ಸಿದ್ಧಪಡಿಸಿದ್ದಾರೆ. ಮಾತ್ರವಲ್ಲ ಕೇವಲ ಅಧ್ಯಯನಕ್ಕೆ ಸೀಮಿತವಾಗಿದ್ದ ಪಠ್ಯ ಕ್ರಮದ ಜಾಗದಲ್ಲಿ ಅಧ್ಯಯನ, ಸಂಶೋಧನೆಗೆ ಒತ್ತು ಕೊಟ್ಟು ಪಠ್ಯವನ್ನು ರೂಪಿಸಿದ್ದಾರೆ. ಈ ಮೂಲಕ ಸಮಾಜ ಶಾಸ್ತ್ರ ಅಧ್ಯಯನದಿಂದಲೂ ವಿದ್ಯಾರ್ಥಿಗಳು ಹೊಸ ಬದುಕು ಕಟ್ಟಿಕೊಡಲು ಪದವಿ ಹಂತದಲ್ಲಿಯೇ ಹೊಸ ಬುನಾದಿ ಹಾಕಿದ್ದಾರೆ.
39 ವರ್ಷಗಳ ಅಮೂಲ್ಯ ಸೇವೆ
147 ಸಂಶೋಧನಾ ವರದಿ ಪ್ರಕಟ: ವೈ.ಎನ್. ಸಿದ್ದೇಗೌಡ ಅವರು ಕಳೆದ 39 ವರ್ಷ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈವರೆಗೂ 147 ಸಂಶೋಧನೆ ಆಧಾರಿತ ಲೇಖನ ಬರೆದಿದ್ದು, ಆರು ಪುಸ್ತಕ ಬರೆದಿದ್ದಾರೆ. ಬರೋಬ್ಬರಿ ಹದಿನೇಳು ಸಂಶೋಧನಾ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಿದ್ದಾರೆ.
ಸುಮಾರು 26 ಮಂದಿ ಪಿಚ್ ಡಿ ಡಾಕ್ಟರೇಟ್ ಪದವಿ ಪಡೆಯಲು ಗುರುಗಳಾಗಿ ಜ್ಞನವನ್ನು ಧಾರೆ ಎರೆದಿದ್ದಾರೆ. ಅಂತಾರಾಷ್ಟ್ರಯ ಮಟ್ಟದ ಜರ್ನಲ್ ಗಳ ಸಂಪಾದಕರಾಗಿ ಸೇವೆ ಮಾಡಿದ್ದು, ಪ್ರಸ್ತುತ ತುಮಕೂರು ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಜಿಸ್ಟ್ರಾರ್ ಆಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ್ದು, ಶೈಕಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ತುಮಕೂರು ವಿವಿಗೆ ಹೊಸ ಕಾಯಕಲ್ಪ : ತನ್ನ ಅನುಭವ ಹಾಗೂ ಜ್ಞಾನದಿಂದ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಮಹಿಳಾ ಅಧ್ಯಯನ, ಸಮಾಜ ಕಾರ್ಯ, ಹಾಗು ಪತ್ರಿಕೋದ್ಯಮ ವಿಭಾಗದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕಲೋನಲ್, ಕಲೋನಲ್ ಕಮಾಂಡಂಟ್ ಆಫ್ ನ್ಯಾಷನಲ್ ಕ್ರೆಡಿಟ್ ಕಾರ್ಪ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದಾರೆ.
ಇದಲ್ಲದೇ "The Most Dedicated Vice Chancellor." ಎಂಬ ಪ್ರಶಸ್ತಿಯನ್ನು ಸಿದ್ದೇಗೌಡರು ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ತುಮಕೂರು ವಿಶ್ವ ವಿದ್ಯಾಲಯವನ್ನು ಮಾದರಿ ವಿಶ್ವ ವಿದ್ಯಾಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದ್ದಾರೆ.
ವಿವಿಗೆ ಇನ್ಕ್ಯುಬ್ ಸೆಂಟರ್ : ಪ್ರಸಕ್ತ ಸಾಲಿನಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಈ ಯೋಜನೆಯನ್ನ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ಕ್ಯುಬ್ ಸೆಂಟರ್ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ.
ಪ್ರಸಕ್ತ ಸಾಲಿನ ಪಠ್ಯಕ್ರಮದಲ್ಲಿ ಅಧ್ಯಯನ, ಸಂಶೋಧನೆಗೆ ಹಾಗೂ ದಾಖಲೆಗಳ ಸಂಗ್ರಹಣಾ ಕಲೆಗೆ ಹೆಚ್ಚು ಒತ್ತು ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಮನಸು ಮಾಡಿದರೆ, ವಿದ್ಯಾಭ್ಯಾಸದಿಂದಲೇ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಅಗತ್ಯ ವೇದಿಕೆಯನ್ನು ಸಿದ್ದೇಗೌಡರು ಕಲ್ಪಿಸಿದ್ದಾರೆ. ಈ ಮೂಲಕ ರಾಜ್ಯದ ಪ್ರಾಧ್ಯಾಪಕ ವರ್ಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
Recommended Video