ವಿಶ್ವಾಸಮತ ಯಾಚನೆ ವಿಳಂಬ, ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪ
ಬೆಂಗಳೂರು, ಜುಲೈ 18: "ನಾವ್ಯಾರು ರಾಜೀನಾಮೆ, ಅನರ್ಹತೆ ಬಗ್ಗೆ ತಗಾದೆ ತೆಗೆದಿಲ್ಲ, ಅದು ಸ್ಪೀಕರ್ ಗೆ ಬಿಟ್ಟ ವಿಚಾರ, ಆದರೆ, ಪಾಯಿಂಟ್ ಆಫ್ ಆರ್ಡರ್ ಮೂಲಕ ಏನೇನೋ ಚರ್ಚೆ ಮಾಡುತ್ತಿರುವ ಕಾಂಗ್ರೆಸ್ ಶಾಸಕರು, ಉದ್ದೇಶಪೂರ್ವಕವಾಗಿ ವಿಶ್ವಾಸಮತ ಯಾಚನೆ ಅಜೆಂಡಾವನ್ನು ವಿಳಂಬ ಮಾಡುತ್ತಿದ್ದಾರೆ" ಎಂದು ಬಿಜೆಪಿ ಶಾಸಕ ಜಿ ಮಾಧುಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುತ್ತಾ? ಗೊಂದಲ, ದ್ವಂದ್ವ
ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಾಡಿದ ಬಳಿಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾಯಿಂಟ್ ಆಫ್ ಆರ್ಡರ್ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಇತಿಹಾಸ, ಕುತೂಹಲಕಾರಿ ಪಕ್ಷಾಂತರಗಳ ಬಗ್ಗೆ ಸುದೀರ್ಘವಾಗಿ ವಿವರಿಸಿ, ಸುಪ್ರೀಂಕೋರ್ಟಿನ ವಿಪ್ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದಾರೆ.
ನಂತರ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯ ಬಗ್ಗೆ ಪ್ರಸ್ತಾಪಿಸಿಲ್ಲ, ಇದರಿಂದ ಕ್ರಿಯಾಲೋಪವಾಗಿದೆ ಎಂದು ಶಾಸಕ ಜಿ ಮಾಧುಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. "ವಿಶ್ವಾಸಮತಯಾಚನೆ ಬಗ್ಗೆ ಚರ್ಚೆಯಾಗಬೇಕಿದೆ, ಚರ್ಚೆ ನಡುವೆ ಸದನದ ಕಲಾಪಕ್ಕೆ ಚ್ಯುತಿ ಬರುವಂಥ ವಿಷಯ, ಸಂದರ್ಭ ಎದುರಾದರೆ ಪಾಯಿಂಟ್ ಆಫ್ ಆರ್ಡರ್ ಮೂಲಕ ಆಕ್ಷೇಪ ವ್ಯಕ್ತಪಡಿಸಬಹುದು ಹಾಗೂ ಚರ್ಚೆ ಮುಂದುವರೆಸಬಹುದು" ಎಂದು ಹೇಳಿದ ಮಾಧುಸ್ವಾಮಿ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್, ಬಸವರಾಜ್ ಬೊಮ್ಮಾಯಿ ಅವರು ದನಿಗೂಡಿಸಿದರು. ಆಡಳಿತ ಪಕ್ಷದ ಧೊರಣೆ ಬಗ್ಗೆ ಮಾಜಿ ಸಿಎಂ ಜಗದೆಶ್ ಶೆಟ್ಟರ್ ಟೀಕಿಸಿದರು.