ಸುಪ್ರೀಂ ತೀರ್ಪು; ಅನರ್ಹರಿಗೆ ಸಂತೋಷ, ಸವದಿಗೆ ಸಂಕಷ್ಟ!
ಬೆಂಗಳೂರು, ನವೆಂಬರ್ 13 : ಬುಧವಾರ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅನರ್ಹ ಶಾಸಕರಿಗೆ ಸಂತೋಷ ತಂದಿದೆ. ಆದರೆ, ರಾಜ್ಯದ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಸಂಕಷ್ಟ ಎದುರಾಗಿದೆ.
ಹೌದು, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಉಪ ಮುಖ್ಯಮಂತ್ರಿ ಹುದ್ದೆ ಲಕ್ಷ್ಮಣ ಸವದಿಗೆ ಒಲಿದು ಬಂದಿತ್ತು. ಇದನ್ನು ನೋಡಿ ಹುಬ್ಬೇರಿಸಿದವರೇ ಅಧಿಕ. ಈಗ ಉಪ ಚುನಾವಣೆ ಟಿಕೆಟ್ ಲಕ್ಷ್ಮಣ ಸವದಿ ಕೈ ತಪ್ಪುವ ಭೀತಿ ಎದುರಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದೆ. ಇದರಲ್ಲಿ ಮಹೇಶ್ ಕುಮಟಳ್ಳಿ ಪ್ರತಿನಿಧಿಸುವ ಅಥಣಿ ಕ್ಷೇತ್ರವೂ ಒಂದು. ಇದು ಲಕ್ಷ್ಮಣ ಸವದಿ ತವರು ಕ್ಷೇತ್ರವೂ ಹೌದು. ಇದೇ ವಿಚಾರ ಈಗ ಚರ್ಚೆಯ ವಸ್ತುವಾಗಿದೆ.
ಇನ್ನೊಮ್ಮೆ ಲಕ್ಷ್ಮಣ ಸವದಿ ಸೋತರೆ ರಾಜ್ಯದ ಮುಖ್ಯಮಂತ್ರಿ!
ಮಹೇಶ್ ಕುಮಟಳ್ಳಿ 2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸೋಲಿಸಿದ್ದರು. ಆದರೆ, ಮಹೇಶ್ ಕುಮಟಳ್ಳಿ ಅನರ್ಹರಾದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾದರು. ಈಗ ಅಥಣಿ ಕ್ಷೇತ್ರದ ಟಿಕೆಟ್ ಯಾರಿಗೆ? ಎಂಬುದು ಪ್ರಶ್ನೆಯಾಗಿದೆ.
ಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯ
ಕೈ ತಪ್ಪಿತು ಉಪ ಚುನಾವಣೆ ಟಿಕೆಟ್?
ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಮಹೇಶ್ ಕುಮಟಳ್ಳಿ ಅಥಣಿ ಕ್ಷೇತ್ರದ ಉಪ ಚುನಾವಣಾ ಕಣಕ್ಕಿಳಿಯಬಹುದಾಗಿದೆ. ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಉಪ ಚುನಾವಣೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಯಡಿಯೂರಪ್ಪ ಹೇಳುವುದೇನು?
ಲಕ್ಷ್ಮಣ ಸವದಿಗೆ ಉಪ ಚುನಾವಣೆ ಟಿಕೆಟ್ ಕೊಡುವ ವಿಚಾರದಲ್ಲಿ ಯಡಿಯೂರಪ್ಪ ಸ್ಪಷ್ಟ ಸೂಚನೆಯೊಂದನ್ನು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಒಪ್ಪಿಗೆ ನೀಡಿದರೆ ಮಾತ್ರ ಟಿಕೆಟ್ ಕೊಡುವೆ ಎಂಬುದು ಅವರ ಸಂದೇಶ. ಇದೇ ಈಗ ಲಕ್ಷ್ಮಣ ಸವದಿಗೆ ಹಿನ್ನಡೆ ಉಂಟು ಮಾಡುತ್ತಿದೆ.
ಪರಿಷತ್ ಸ್ಥಾನವೂ ಇಲ್ಲ
2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಸಚಿವರಾದ ಆರು ತಿಂಗಳಿನಲ್ಲಿ ವಿಧಾನಸಭೆ ಅಥವ ವಿಧಾನ ಪರಿಷತ್ನಿಂದ ಆರಿಸಿ ಬರಬೇಕು. ಆದರೆ, ಈಗ ಪರಿಷತ್ ಸ್ಥಾನವೂ ಇಲ್ಲ, ಉಪ ಚುನಾವಣೆ ಟಿಕೆಟ್ ಸಹ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹೇಶ್ ಕುಮಟಳ್ಳಿ ವಿರುದ್ಧ ಸೋಲು
ಅಥಣಿಯಲ್ಲಿ ಕಳೆದ ಚುನಾವಣೆಯಲ್ಲಿ 79,763 ಮತಗಳನ್ನು ಪಡೆದು ಲಕ್ಷ್ಮಣ ಸವದಿ ಸೋತಿದ್ದರು. ಮಹೇಶ್ ಕುಮಟಳ್ಳಿ ಅನರ್ಹಗೊಂಡ ಬಳಿಕ ಉಪ ಚುನಾವಣೆ ಟಿಕೆಟ್ ಸವದಿಗೆ ಸಿಕ್ಕಿತು ಎಂಬ ಸುದ್ದಿ ಹಬ್ಬಿತು. ಈಗ ಸುಪ್ರೀಂ ಆದೇಶದಿಂದಾಗಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಸಂತಸವಾಗಿದೆ. ಆದರೆ, ಲಕ್ಷ್ಮಣ ಸವದಿಗೆ ಸಂಕಷ್ಟ ಉಂಟಾಗಿದೆ.