ಯಕ್ಷಲೋಕದ ದಂತಕಥೆ 'ಚಿಟ್ಟಾಣಿ' ರಾಮಚಂದ್ರ ಹೆಗಡೆಗೆ ನುಡಿನಮನ
ಅಲ್ಪ ಕಾಲದ ಅಸೌಖ್ಯದಿಂದ ಮರಳಲಾರದ ಲೋಕಕೆ ಪಯಣಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಶಿವನ ಸಾಯುಜ್ಯದಲಿರಲಿ ಎಂಬ ಭಾರ ಹೃದಯದ ನುಡಿನಮನಗಳು. ಯಕ್ಷಲೋಕದ ದಂತಕಥೆ ಚಿಟ್ಟಾಣಿ. ಮಂಗಳವಾರ (ಅ 3) ವಿಧಿವಶರಾದರು.
ಯಕ್ಷಗಾನದ ಧ್ರುವತಾರೆ, ತುಂಬು ಜೀವನೋತ್ಸಾಹದ ಚಿಲುಮೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮರಳಿ ಬಾರದ ತಾರಾ ಲೋಕವ ಸೇರಿಹರು. ಅನಂತನಲ್ಲಿ ಅಂತರ್ಗತರಾಗಿಹರು. ಅವರ ಜೀವನಗಾಥೆಯ ಮೇಲೆ ಇಬ್ಬರು ಡಾಕ್ಟರೇಟು ಪದವಿ ಪಡೆದರು, ಅಂದರೆ ಈ ಮೇರು ವ್ಯಕ್ತಿತ್ವದ ಆಳ ಇಣುಕಲು ಸಾಧ್ಯವೇ?
ಅತ್ಯಂತ ಸರಳ ಮನಸ್ಸಿನ ಸಜ್ಜನರಾದ ಚಿಟ್ಟಾಣಿಯವರು ಶಾಲೆ ಕಲಿತುದು 2ನೆಯ ತನಕವಾದರೂ ಜೀವನದ ಕೊನೆ ತನಕವೂ ತಾನೋರ್ವ ವಿದ್ಯಾರ್ಥಿ, ಕಲಿಯುವುದು ಸದಾ ಇದೆಯೆಂದು ಹಾಗೇ ನಡೆದವರು. ಯಕ್ಷಗಾನ ಕಲೆಗೆ ಮೊದಲ ಪದ್ಮಶ್ರೀ ಪ್ರಶಸ್ತಿ ಬಂದುದು ಚಿಟ್ಟಾಣಿಯವರಿಗೆ. ಅಸಂಖ್ಯ ಪ್ರಶಸ್ತಿಗೆ ಭಾಜನರಾದರೂ ಬೀಗದೆ ಬಾಗಿ ನಡೆದ ಹೃದಯ ಧೀಮಂತರು ಚಿಟ್ಟಾಣಿಯವರು.
ಯಕ್ಷರಂಗಕ್ಕೆ ರಂಗುತಂದಿತ್ತ ಚಿಟ್ಟಾಣಿ: ಟ್ವಿಟ್ಟಿಗರ ಅಂತಿಮ ನಮನ
ಅವರ ಹೆಜ್ಜೆ-ಕುಣಿತ , ಬಡಗು ತಿಟ್ಟಿನ ಯಕ್ಷಗಾನದಲ್ಲಿ ಚಿಟ್ಟಾಣಿ ಕಲೆಯೆಂದೇ ಕರೆಯಿಸಿಕೊಳ್ಳುವಷ್ಟು ಭಿನ್ನ ಛಾಪು ಮೂಡಿಸಿರುವರು. ಶೃಂಗಾರ ಪಾತ್ರವೇ ಇರಲಿ, ರೌದ್ರ-ಭಯಾನಕ ಪಾತ್ರವೇ ಇರಲಿ, ಪಾತ್ರದೊಳಗೆ ಪರಕಾಯ ಪ್ರವೇಶದಿಂದ ತಾನೇ ಪಾತ್ರವಾಗಿ ಅಭಿನಯಿಸುವ ಕಲೆ ಚಿಟ್ಟಾಣಿಯವರ ಅಭಿಮಾನಿಗಳಿಗೆ ಅವಿಸ್ಮರಣೀಯ.
ನಾಯಕ ಪಾತ್ರಕ್ಕಿಂತ ಹೆಚ್ಚು ಖಳನಾಯಕ ಪಾತ್ರದಲ್ಲೇ ಮಿಂಚಿದ ಚಿಟ್ಟಾಣಿಯವರ ಕೀಚಕ, ಭಸ್ಮಾಸುರ, ರಮಣೀಯ ರಾವಣ, ದುಷ್ಟಬುದ್ಧಿ, ಕೌರವ, ಪಾತ್ರಗಳು ಕಲಾದೇವತೆಗೆ ಆತ್ಮಪೂಜೆಯೇ ಹೌದು! ಇವರಿಗೆ ಅರಸಿ ಬಂದ ಪ್ರಶಸ್ತಿಗಳಿಗೂ ಲೆಕ್ಕವಿಲ್ಲ.
ತಮ್ಮ 14ನೆಯ ವಯಸ್ಸಿಗೆ ಪ್ರಥಮ ಪಾತ್ರವಾಗಿ ಶ್ರೀಕೃಷ್ಣ ಪಾರಿಜಾತದ ಅಗ್ನಿಯಾಗಿ ಅಭಿನಯಿಸಿದ ಚಿಟ್ಟಾಣಿಯವರು ತನ್ನ ಪ್ರಾಯವನ್ನು ಅಲ್ಲಿಯೇ ನಿಲ್ಲಿಸಿ ಯಕ್ಷರಂಗರಲ್ಲಿ 64ವರ್ಷಗಳ ಅನುಭವ ಹಾಗೂ ಅಪಾರ ಅಭಿಮಾನೀ ಬಳಗವನ್ನು ಸಂಪಾದಿಸಿದರು. ಮುಂದೆ ಓದಿ..
ವಶೀಲಿ ಪ್ರಶಸ್ತಿಗಳ ಹಿಂಬಾಲಿಸದ ಚಿಟ್ಟಾಣಿ
ವ್ಯಾವಹಾರಿಕ ಜೀವನಶೈಲಿಯ ಅನುಸರಿಸದೆ, ವಶೀಲಿ ಪ್ರಶಸ್ತಿಗಳ ಹಿಂಬಾಲಿಸದೆ, ರಂಗದಲ್ಲಿ ಖಳನಾಗಿಯೂ ನಿಜ ಜೀವನದಲ್ಲಿ ನಾಯಕನಾಗಿ ಬಾಳುವುದು ಹೇಗೆಂದು ತೋರಿಸಿಕೊಟ್ಟವರು. ತುಂಬು ಸಂಸಾರವ ಸಲಹಿದ ಚಿಟ್ಟಾಣಿಯವರು ಸದಾ ಜೀವನೋತ್ಸಾಹದ ಬುಗ್ಗೆ.
ಬಾಲ್ಯದಲ್ಲೇ ಯಕ್ಷಗಾನದ ಗೀಳು
ತಮ್ಮ 14ನೆಯ ವಯಸ್ಸಿಗೆ ಪ್ರಥಮ ಪಾತ್ರವಾಗಿ ಶ್ರೀಕೃಷ್ಣ ಪಾರಿಜಾತದ ಅಗ್ನಿಯಾಗಿ ಅಭಿನಯಿಸಿದ ಚಿಟ್ಟಾಣಿಯವರು ತನ್ನ ಪ್ರಾಯವನ್ನು ಅಲ್ಲಿಯೇ ನಿಲ್ಲಿಸಿ ಯಕ್ಷರಂಗರಲ್ಲಿ 64ವರ್ಷಗಳ ಅನುಭವ ಹಾಗೂ ಅಪಾರ ಅಭಿಮಾನೀ ಬಳಗವನ್ನು ಸಂಪಾದಿಸಿದರು.
ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ಜೋಳಿಗೆ ಹಿಡಿದು ಗೋವಿಗಾಗಿ ಭಿಕ್ಷಾಟನೆ
ಶ್ರೀರಾಮಚಂದ್ರಾಪುರಮಠದ "ಗೋಪ್ರಾಣಭಿಕ್ಷಾ ಆಂದೋಲನ"ದ ಭಾಗವಾಗಿ ಸ್ವತಃ ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ಜೋಳಿಗೆ ಹಿಡಿದು ಗೋವಿಗಾಗಿ ಭಿಕ್ಷಾಟನೆ ಮಾಡಿದ ಹೃದಯಶ್ರೀಮಂತರೂ ಹೌದು. ಕ್ರೌರ್ಯದ BeefFest ಗೆ ವಾತ್ಸಲ್ಯದ ಪ್ರತ್ಯುತ್ತರವಾದ #MilkFest ಅನ್ನು ಸ್ವತಃ ಹಸುವಿನ ಹಾಲು ಕರೆದು ಉದ್ಘಾಟನೆ ನಡೆಸಿದ್ದು ತೀರಾ ಇತ್ತೀಚಿನ ಅಂದರೆ ಜೂನ್ ತಿಂಗಳಲ್ಲಿ.
ಹದಿಹರೆಯದವರನ್ನೂ ನಾಚಿಸುವ ಚಿಟ್ಟಾಣಿ ಉಲ್ಲಾಸ
ಹದಿಹರೆಯದವರನ್ನೂ ನಾಚಿಸುವ ಅವರ ಉಲ್ಲಾಸವ ತೀರಾ ಸಮೀಪದಲ್ಲಿ ಕಾಣಲು ಸಿಕ್ಕಿದ್ದು ನನ್ನ ಸೌಭಾಗ್ಯ. ಅಂದು ಹಾಲುಹಬ್ಬ ಕಾರ್ಯಕ್ರಮ ಮುಗಿಸಿ ಬಸ್ ಸ್ಟಾಪ್ ಗೆ ತಮ್ಮ ಕಾರಿನಲ್ಲಿಯೇ ಬಿಡುತ್ತೇನೆ ಎಂದು, ನಮ್ಮ ಕೈಲಿದ್ದ ಲಗ್ಗೇಜು ಬ್ಯಾಗ್ ಗಳಲ್ಲಿ ಕೆಲವನ್ನು ತಾನೇ ಹಿಡಿದುಕೊಂಡು ನಮಗೆ ಕೂರಲು ಸ್ಥಳಾವಕಾಶ ಕಲ್ಪಿಸಿದ್ದಲ್ಲದೇ ತಮ್ಮ ಜೀವನಾನುಭವದ ಅಮೃತಸಿಂಚನ ನಮಗಾಗಿಸಿದರು.
ಭಾರ ಹೃದಯದ ನುಡಿನಮನಗಳು
ಅವರ ಆಶೀರ್ವಾದ ಪಡೆಯಲು ಕಾಲಿಗೆರಗಿದಾಗ ಆ ಮಹಾನುಭಾವರು ಮಾಡಿದ ಆಶೀರ್ವಾದ ಅವರ ಜೀವನ ಶೈಲಿಯೇ ಆಗಿತ್ತು- "ಏನೇ ಮಾಡಿ, ಸಂಪೂರ್ಣ ಶ್ರದ್ಧೆಯಿಂದ ಮಾಡಿ; ನಿಮ್ಮ ಕೈಯ ದೇವರು ಬಿಡಲಾರ" ಎಂಬ ಅದ್ಭುತ ಆಶೀರ್ವಾದ. ಅದೇ ಕಡೆಯ ಭೇಟಿಯಾಗಿತ್ತು ಎಂಬುದು ಅರಗಿಸಲಾರದ ವಿಷಯ. ಅಲ್ಪ ಕಾಲದ ಅಸೌಖ್ಯದಿಂದ ಮರಳಲಾರದ ಲೋಕಕೆ ಪಯಣಿಸಿದ ಚಿಟ್ಟಾಣಿಯವರು ಶಿವನ ಸಾಯುಜ್ಯದಲಿರಲಿ ಎಂಬ ಭಾರ ಹೃದಯದ ನುಡಿನಮನಗಳು.