ಶಿರಾದಲ್ಲಿ ಟಿ.ಬಿ.ಜಯಚಂದ್ರಗೆ 7ನೇ ಗೆಲುವು ಸಿಗುವುದೇ?
ತುಮಕೂರು, ಫೆಬ್ರವರಿ 04 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದಲ್ಲಿ 7ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ತವರು ಕ್ಷೇತ್ರವಾದ ತುಮಕೂರು ಜಿಲ್ಲೆಗೆ ಸೇರುತ್ತದೆ ಶಿರಾ ವಿಧಾನಸಭಾ ಕ್ಷೇತ್ರ.
ಆರು ಬಾರಿ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅವರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಕಾಂಗ್ರೆಸ್ನ ಕೆಲವು ನಾಯಕರು ಜೆಡಿಎಸ್ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳಿವೆ. ಇದು ನಿಜವಾದರೆ ಚುನಾವಣೆಯಲ್ಲಿ ಸಂಕಷ್ಟ ತಪ್ಪಿದ್ದಲ್ಲ.
ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!
ಕುಂಚಿಟಿಗ ಒಕ್ಕಲಿಗರು ಮತ್ತು ಎಸ್ಸಿ, ಎಸ್ಟಿ, ಯಾದವರು, ಮುಸ್ಲಿಂಮರು ಕ್ಷೇತ್ರದ ಶಾಸಕರು ಯಾರಾಗಬೇಕು ಎಂದು ನಿರ್ಧರಿಸಲಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಜಯಚಂದ್ರ ಗೆಲುವು ಸುಲಭವಾಗಲಿದೆ.
ತುಮಕೂರು ಬಿಜೆಪಿ ಭಿನ್ನಮತಕ್ಕೆ ಸಂಧಾನ ಸೂತ್ರ ಸಿದ್ಧ!
2013 ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್ನಿಂದ ಬಿ.ಸತ್ಯನಾರಾಯಣ ಮತ್ತು ಬಿಜೆಪಿಯಿಂದ ಬಿ.ಕೆ.ಮಂಜುನಾಥ್ ಅವರು ಅಭ್ಯರ್ಥಿಗಳಾಗಿದ್ದರು. ಈ ಬಾರಿಯೂ ಮೂವರ ನಡುವೆಯೇ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಶಿರಾ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಸೇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ತವರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಅವರು ಶ್ರಮ ವಹಿಸಲಿದ್ದಾರೆ.
ಹಲವು ಕೆಲಸ ಮಾಡಿದ್ದಾರೆ
ಟಿ.ಬಿ.ಜಯಚಂದ್ರ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೇಮಾವತಿ ನದಿ ನೀರನ್ನು ಮೂದಲೂರು ಕೆರೆಗೆ ಹರಿಸಿದ್ದಾರೆ. ಹಲವಾರು ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ.
ಜನರ ಕೈಗೆ ಸಿಗುವುದಿಲ್ಲ
6 ಬಾರಿ ಶಾಸಕರಾದರೂ, ಸಾಕಷ್ಟು ಕೆಲಸ ಮಾಡಿದರೂ ಸಚಿವ ಟಿ.ಬಿ.ಜಯಚಂದ್ರ ಅವರು ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪವಿದೆ. ಆದರೆ, ಈಗ ಸಚಿವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಮನೆ-ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಬೂತ್ ಮಟ್ಟದಲ್ಲಿ ಬಲಿಷ್ಠವಾಗಿದ್ದಾರೆ
ಕಳೆದ ಚುನಾವಣೆಯಲ್ಲಿ 59,408 ಮತಗಳನ್ನು ಪಡೆದಿದ್ದ ಬಿ.ಸತ್ಯನಾರಾಯಣ ಅವರು ಐದು ವರ್ಷಗಳಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ಈ ಬಾರಿಯೂ ಅವರಿಗೆ ಟಿಕೆಟ್ ಖಚಿತ.
ಬಿಜೆಪಿ ಟಿಕೆಟ್ಗೆ ಹೆಚ್ಚು ಆಕಾಂಕ್ಷಿಗಳು
ಕಳೆದ ಬಾರಿ ಬಿ.ಕೆ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪರಿವರ್ತನಾ ಯಾತ್ರೆ ಮುಗಿದ ಬಳಿಕ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎಸ್.ಆರ್.ಗೌಡ, ಸಿ.ಎಂ.ನಾಗರಾಜ್, ಮಾಲಿ ಸಿ.ಗೌಡ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಮಾಲಿ ಸಿ.ಎಲ್.ಗೌಡ ಅವರು ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. [ಚಿತ್ರ : ಮಂಜುನಾಥ್]
6 ನೇ ಬಾರಿಗೆ ಜಯಚಂದ್ರ ಗೆಲುವು
2013ರ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಅವರು 74,089 ಮತಗಳನ್ನು ಪಡೆದು 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್ನ ಬಿ.ಸತ್ಯನಾರಾಯಣ ಅವರು 59,408 ಮತಗಳನ್ನು ಪಡೆದಿದ್ದರು. ಬಿಜೆಪಿಯ ಬಿ.ಕೆ.ಮಂಜುನಾಥ್ ಅವರು 18,884 ಮತ ಪಡೆದಿದ್ದರು.