ಬಾಗಲಕೋಟೆ : ಉಮಾಶ್ರೀ ತವರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ!
ಬಾಗಲಕೋಟೆ, ಮಾರ್ಚ್ 08 : ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ತೇರದಾಳ. ಕ್ಷೇತ್ರದ ಹಾಲಿ ಶಾಸಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ತದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಚಿತ್ರನಟಿ ಉಮಾಶ್ರೀ ಅವರ ರಾಜಕೀಯ ಜೀವನಕ್ಕೆ ತಿರುವು ನೀಡಿದ ಕ್ಷೇತ್ರ ತೇರದಾಳ. ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದು ಸವಧಿ ಅವರ ಕ್ಷೇತ್ರವೂ ಇದಾಗಿದೆ. ಕಳೆದ ಚುನಾವಣೆಯಲ್ಲಿ ಉಮಾಶ್ರೀ ಅವರು ಜಯಗಳಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹೊಸ ಪಕ್ಷದ ಪುಳಕ : ಬಿಜೆಪಿ, ಕಾಂಗ್ರೆಸ್ಸಿಗೆ ನಡುಕ?
ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಜೆಡಿಎಸ್ ಚುನಾವಣೆ ಸಿದ್ಧತೆ ಆರಂಭಿಸಿದೆ. ತೇರದಾಳ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಬಿಜೆಪಿಯಿಂದ ಸಿದ್ದು ಸವಧಿ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕರೆ ಉಮಾಶ್ರೀ ಸ್ಪರ್ಧೆ ಖಚಿತ.
ತೇರದಾಳ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ. ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ಸ್ಪರ್ಧೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಹೆಚ್ಚು ಶ್ರಮ ಹಾಕಿದರೆ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಸುದ್ದಿ ಹಬ್ಬಿದೆ...
ಉಮಾಶ್ರೀ ಅವರ ಹಾದಿ ಕಠಿಣ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರ ಈ ಬಾರಿ ಚುನಾವಣೆ ಗೆಲುವು ಸುಲಭದ ಹಾದಿಯಲ್ಲ. ಉಮಾಶ್ರೀ ಅವರು ಕ್ಷೇತ್ರದ ಜನರ ಕೈಗೆ ಸುಲಭವಾಗಿ ಸಿಗುತ್ತಿಲ್ಲ ಎಂಬ ಆರೋಪವಿದೆ. ಅವರು ಕ್ಷೇತ್ರದವರಲ್ಲ, ವಲಸಿಗರು ಎಂಬ ಅಂಶವೂ ಚುನಾವಣೆಯಲ್ಲಿ ಪ್ರಭಾವ ಬೀರಬಹುದಾಗಿದೆ.
2013ರ ಚುನಾವಣೆಯಲ್ಲಿ ಉಮಾಶ್ರೀ ಅವರು 70,189 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ, ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.
ಪ್ರೊ.ಬಸವರಾಜ್ ಕೊಣ್ಣೂರು
ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪ್ರೊ.ಬಸವರಾಜ್ ಕೊಣ್ಣೂರು ಅವರು ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ರಂಗನಗೌಡ ಶಿವನಗೌಡ ಪಾಟೀಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 5,282 ಮತಗಳನ್ನು ಪಡೆದಿದ್ದರು.
ಪ್ರೊ.ಬಸವರಾಜ್ ಕೊಣ್ಣೂರು ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಈಗ ರಾಜಕೀಯಕ್ಕೆ ಧಮುಕಿದ್ದಾರೆ. ಅವರು ತೇರದಾಳ ಕ್ಷೇತ್ರದವರೇ ಎಂಬುದು ಚುನಾವಣೆಯಲ್ಲಿ ಸಹಾಯಕವಾಗಬಹುದಾಗಿದೆ.
ಸಿದ್ದು ಸವದಿ
ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದು ಸವದಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬಹುದು. ಕಳೆದ ಬಾರಿಯೂ ಅವರು ಚುನಾವಣೆಗೆ ಸ್ಪರ್ಧಿಸಿ 67,590 ಮತಗಳನ್ನು ಪಡೆದಿದ್ದರು. ಕಳೆದ ಚುನಾವಣೆಯಲ್ಲಿ 3 ಸಾವಿರ ಮತಗಳ ಅಂತರದಿಂದ ಅವರು ಸೋಲು ಕಂಡಿದ್ದರು.
ಬಿ.ಎಸ್.ಯಡಿಯೂರಪ್ಪ ಅವರ ವರ್ಚಸ್ಸು, ಕಳೆದ ಬಾರಿಯ ಸೋಲಿನ ಅನುಕಂಪದ ಅಲೆ ಕೆಲಸ ಮಾಡಿದರೆ ಸಿದ್ದು ಸವದಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಬಹುದಾಗಿದೆ.
ಕಳೆದ ಬಾರಿ ಗೆದ್ದವರು, ಸೋತವರು
2013ರ ಚುನಾವಣೆಯಲ್ಲಿ ಉಮಾಶ್ರೀ ಅವರು 70,189 ಮತಗಳನ್ನು ಪಡೆದು ಜಯಗಳಿಸಿದ್ದರು. ನಂತರ ಸಿದ್ದರಾಮಯ್ಯ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನವೂ ಸಿಕ್ಕಿತು.
ಬಿಜೆಪಿಯ ಸಿದ್ದು ಸವದಿ ಅವರು 67,590 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು. ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜ್ ಈರಪ್ಪ ಬಾಳಿಕಾಯಿ 5,558ಮತಗಳನ್ನು ಪಡೆದು 3ನೇ ಸ್ಥಾನ ಗಳಿಸಿದ್ದರು.