ತಿ.ನರಸೀಪುರದಲ್ಲಿ ಶಂಕರ್, ಸುನೀಲ್ ನಡುವೆ ಜಿದ್ದಾಜಿದ್ದಿ
ಮೈಸೂರು, ಮಾರ್ಚ್ 11 : ಮೈಸೂರು ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಇದೀಗ ತಿ. ನರಸೀಪುರ ವಿಧಾನಸಭಾ ಕ್ಷೇತ್ರದತ್ತ ಎಲ್ಲರ ಚಿತ್ತಹರಿಯುತ್ತಿದ್ದು, ಕುತೂಹಲ ಮನೆ ಮಾಡಿದೆ. ಈಗಾಗಲೇ ಈ ಕ್ಷೇತ್ರ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರದ್ದಾಗಿದ್ದು, ಮುಂದಿನ ಚುನಾವಣೆಗೆ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
ಹಾಗೆ ನೋಡಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಗೆಲ್ಲಬಹುದಾದ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಟ್ಟಣದಲ್ಲಿ ನಡೆದ ಪಕ್ಷ ಸಂಘಟನಾ ಕಾರ್ಯಕ್ರಮದಲ್ಲಿ ಎಸ್. ಶಂಕರ್ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಅವರೇ ಪಕ್ಷದ ಅಭ್ಯರ್ಥಿ ಎಂಬ ಸುಳಿವು ನೀಡಿದ್ದಾರೆ.
ಮೈಸೂರು: ಚುನಾವಣೆಯಲ್ಲಿ ನಡೆಯುತ್ತಾ ಮಹಿಳಾ ಅಭ್ಯರ್ಥಿಗಳ ದರ್ಬಾರ್?!
ಕಾಂಗ್ರೆಸ್ ಪಕ್ಷದಿಂದ ಸಚಿವ ಮಹದೇವಪ್ಪ ಅಥವಾ ಅವರ ಪುತ್ರ ಸುನೀಲ್ ಬೋಸ್ಗೆ ಟಿಕೆಟ್ ಖಚಿತವಾಗಿದ್ದು, ಜೆಡಿಎಸ್ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಎಂ. ಅಶ್ವಿನ್ ಕುಮಾರ್ಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ.
ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಭಾರತೀಶಂಕರ್, ಜಿ.ಪಂ.ಸದಸ್ಯ ಪುಟ್ಟಬಸವಯ್ಯ ಅವರು ಇದೀಗ ದಿಢೀರ್ ಆಗಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಸ್. ಶಂಕರ್ ಅವರಿಗೆ ಟಿಕೆಟ್ ನೀಡುವ ಸುಳಿವು ನೀಡಿದ್ದರಿಂದ ಭ್ರಮನಿರಸನರಾಗಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವರ ಪ್ರಕಾರ ಎಸ್. ಶಂಕರ್ ರಾಜಕೀಯದಲ್ಲಿ ಅನನುಭವಿಯಾದರೂ ಚಾಣಾಕ್ಷ ನಡೆ ಇಡುವುದರಲ್ಲಿ ಎತ್ತಿದ ಕೈಯಾದ್ದರಿಂದ ಇತರೆ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಪೈಪೋಟಿ ನೀಡುತ್ತಾರೆಂಬುದು ಕೆಲವರ ಅಭಿಪ್ರಾಯ.
ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ
ಈ ಮೊದಲು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದ ಮಾಜಿ ಶಾಸಕ ಭಾರತೀಶಂಕರ್ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗಲಿದೆ ಎಂಬುದು ಅನೇಕರ ಮತ್ತು ಅವರ ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಆದರೆ ಎಸ್. ಶಂಕರ್ ಅವರ ಚಟುವಟಿಕೆ ಗಮನಿಸಿದ ಯಡಿಯೂರಪ್ಪ ಅವರನ್ನೇ ಏಕಾಏಕಿ ಅಭ್ಯರ್ಥಿಯಾಗಿಸಿರುವುದು ಹಲವರ ಅಚ್ಚರಿಗೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಶಂಕರ್ಗೆ ವರದಾನವಾಗಲಿದೆ. ರಾಜಕೀಯದಲ್ಲಿ ನೈಪುಣ್ಯತೆ ಹೊಂದಿರುವ ಮಾಜಿ ಶಾಸಕ ಕೆ.ಎಂ. ಚಿಕ್ಕಮಾದನಾಯಕರವರ ಬೆಂಬಲ ಸಹ ಇಲ್ಲಿ ಶಂಕರ್ಗೆ ಮತಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಬನ್ನೂರು ಗ್ರಾಮದಲ್ಲಿ ಒಕ್ಕಲಿಗ ಹಾಗೂ ನಾಯಕ ಜನಾಂಗದ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಂತೆಯೇ ಒಕ್ಕಲಿಗ ಮತಗಳನ್ನು ಸುನೀತಾ ವೀರಪ್ಪಗೌಡ, ನಾಯಕ ಜನಾಂಗದ ಮತಗಳನ್ನು ಚಿಕ್ಕಮಾದನಾಯಕರು ಬಿಜೆಪಿ ಪಕ್ಷದೆಡೆಗೆ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.
ಇದೆಲ್ಲದರ ನಡುವೆ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು ಹೊಸ ಮುಖಗಳಿಗೆ ಮನ್ನಣೆ ನೀಡಲು ಮುಂದಾಗಿರುವುದು, ಸಚಿವ ಮಹದೇವಪ್ಪ ಕ್ಷೇತ್ರದ ಜನತೆಗೆ ಗಗನ ಕುಸುಮವಾಗಿದೆ. ಸುನೀಲ್ ಬೋಸ್ ಮರಳುದಂಧೆಯಲ್ಲಿ ಸಿಲುಕಿ ನ್ಯಾಯಾಲಯದ ನಿಂದನೆಗೆ ಗುರಿಯಾಗಿರುವುದರಿಂದ ಮಹದೇವಪ್ಪ ಅಥವಾ ಸುನೀಲ್ ಬೋಸ್ಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಇನ್ನು ಜೆಡಿಎಸ್ ಪಕ್ಷದ ಅಶ್ವಿನ್ ಕುಮಾರ್ ಜಿ.ಪಂ. ಸದಸ್ಯರಾಗಿ ಕ್ಷೇತ್ರದ ಪರಿಚಯ ಹೊಂದಿದ್ದರಾದರೂ ಶಂಕರ್ಗೆ ಬೆನ್ನೆಲುಬಾಗಿ ಘಟಾನುಘಟಿ ರಾಜಕಾರಣಿಗಳು ನಿಲ್ಲುವುದರಿಂದ ಅಶ್ವಿನ್ ಶ್ರಮಕ್ಕೆ ಪ್ರತಿಫಲ ದೊರಕುವುದು ಕನಸಿನ ಮಾತೇ ಸರಿ. ಇಲ್ಲಿ ಅಶ್ವಿನ್ ರಿಗೆ ಸ್ವಪಕ್ಷದ ಕಾರ್ಯಕರ್ತರೇ ಟಾಂಗ್ ನೀಡುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ.
ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಹದೇವಪ್ಪ ಚಿತ್ತ ನಂಜನಗೂಡಿನ ಮೇಲೆ?!
ರಾಜಕೀಯದಲ್ಲಿ ಚಾಣಾಕ್ಷರಾಗಿರುವ ಸಚಿವ ಮಹದೇವಪ್ಪ ತಾವೇ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತಾರೋ ಅಥವಾ ಪುತ್ರ ಸುನೀಲ್ ಬೋಸ್ರನ್ನು ಅಖಾಡಕ್ಕೆ ಇಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಹಲವರ ವಿರೋಧದ ನಡುವೆಯೂ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣಾ ಕಣದಲ್ಲಿರುವ ಅಶ್ವಿನ್ ಕುಮಾರ್, ತಮ್ಮ ಮೇಲೆ ನಂಬಿಕೆ ಇರಿಸಿ ಟಿಕೆಟ್ ನೀಡಿದ ಕುಮಾರಸ್ವಾಮಿ ಯವರಿಗೆ ಗೆಲುವಿನ ಉಡುಗೊರೆ ನೀಡುವರೇ ಎಂಬುದನ್ನೂ ಕಾದು ನೋಡಬೇಕಿದೆ.