ಸಾರಿಗೆ ನೌಕರರ ಮುಷ್ಕರ: ಜಿಲ್ಲೆಗಳ ಅಪ್ಡೇಟ್ಸ್
ಬೆಳಗಾವಿ, ಡಿಸೆಂಬರ್ 11: ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಎಲ್ಲಾ ಸಾರಿಗೆ ನಿಗಮಗಳ ಚಾಲಕರು, ನಿರ್ವಾಹಕರು ಮುಷ್ಕರ ಹಮ್ಮಿಕೊಂಡಿದ್ದಾರೆ. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರು ಜಿಲ್ಲೆ ಬೆಳಗಾವಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ ತೀವ್ರಗೊಂಡಿದೆ.
ಬೆಳಗಾವಿ ವರದಿ:
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ, ಬೆಳಗಾವಿ ಜಿಲ್ಲೆಯಲ್ಲಿ ಬಸ್ ನಿಲ್ಲಿಸಿ ದಿಢೀರ್ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ಮುಂದಾಗಿದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನೌಕರರ ಪ್ರತಿಭಟನೆ ಆರಂಭವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೇರೆ ಕಡೆಗಳಿಗೆ ಸಂಚರಿಸುತ್ತಿದ್ದ ಬಸ್ಗಳನ್ನು ದಿಢೀರ್ ನಿಲ್ಲಿಸಲಾಗಿದೆ. ಸಾರಿಗೆ ಸಿಬ್ಬಂದಿಯೇ ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ.
ಸರ್ಕಾರಿ ನೌಕರರೆಂಬ ಮಾನ್ಯತೆಗೆ ಆಗ್ರಹಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಒಮ್ಮೆಲೆ ಬಸ್ ಸಂಚಾರ ಬಂದ್ ಆಗಿದ್ದರಿಂದ ದೂರದ ಊರುಗಳಿಂದ ಬಸ್ ನಿಲ್ದಾಣಕ್ಕೆ ಆಗಮಿಸಿದ ನೂರಾರು ಪ್ರಯಾಣಿಕರು ಪರದಾಟ ನಡೆಸಬೇಕಾಯಿತು. ಪ್ರತಿಭಟನೆಯಲ್ಲಿ ನೂರಾರು ಚಾಲಕರು, ನಿರ್ವಾಹಕರಿಂದ ಭಾಗಿಯಾಗಿದ್ದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಘೋಷಣೆ ಕೂಗಿದರು.
ಚಿಕ್ಕಮಗಳೂರು ವರದಿ:
ಕಾಫಿನಾಡು ಚಿಕ್ಕಮಗಳೂರಿಗೂ ಬಸ್ ಬಂದ್ ತಟ್ಟಿದ್ದು, ಕೆ.ಎಸ್.ಆರ್.ಟಿ.ಸಿ ಚಾಲಕರು, ನಿರ್ವಾಹಕರು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದಾರೆ. ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಧರಣಿ ಮಾಡುತ್ತಿದ್ದಾರೆ.
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಇಂದು ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದು, ಸೂಕ್ತ ಸ್ಪಂದನೆ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.
ಸಾರಿಗೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಚಾಲಕ ಹಾಗೂ ಕಂಡಕ್ಟರ್ ಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಕಡೆ ಪ್ರತಿಭಟನೆ ಆರಂಭವಾದ ಹಿನ್ನೆಲೆ ಕಡೂರಿನಲ್ಲಿ ಚಾಲಕ ಬಸ್ ನಿಲ್ಲಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು, ಎಲ್ಲಿಂದ ಕರೆದುಕೊಂಡು ಬಂದ್ರೋ ಅಲ್ಲಿಗೆ ವಾಪಸ್ಸು ಬಿಡಿ ಎಂದು ಆಗ್ರಹಿಸಿದ್ದಾರೆ.
ಕಾರವಾರ ವರದಿ:
ಪ್ರತಿಭಟನಾನಿರತ ಸಾರಿಗೆ ನೌಕರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಬಸ್ ಸಂಚಾರ ಸ್ಥಗಿತಗೊಳಿಸಿ ಸಾರಿಗೆ ನೌಕರರು ಮುಷ್ಕರ ಹೂಡಿದ್ದಾರೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲೆಯಿಂದಲೂ ಅನೇಕರು ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು.
ರಾಮನಗರ ವರದಿ:
ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರನ್ನು ಬಂಧಿಸಿದ ಪೊಲೀಸರ ವರ್ತನೆ ಖಂಡಿಸಿ, ರಾಮನಗರ ಮತ್ತು ಬಿಡದಿಯಲ್ಲಿ ಬಸ್ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮೈಸೂರು
ವರದಿ:
ಮೈಸೂರಿನಲ್ಲಿ
ಸಾರಿಗೆ
ನೌಕರರ
ಪ್ರತಿಭಟನೆಯಿಂದಾಗಿ
ಎಚ್.ಡಿ.ಕೋಟೆ
ತಾಲ್ಲೂಕಿನಲ್ಲಿ
ಬಸ್
ಸಂಚಾರ
ಸಂಪೂರ್ಣ
ಬಂದ್
ಆಗಿದೆ.
ಸಾರಿಗೆ
ನೌಕರರ
ಮುಷ್ಕರದಿಂದಾಗಿ
ಗ್ರಾಮಾಂತರ
ಭಾಗಕ್ಕೂ
ಬಂದ್
ಬಿಸಿ
ತಟ್ಟಿದೆ.
Recommended Video
ಹಂತ ಹಂತವಾಗಿ ಸಾರಿಗೆ ಸಿಬ್ಬಂದಿ ಬಸ್ ನಿಲ್ಲಿಸುತ್ತಿದ್ದು, ಅಧಿಕಾರಿಗಳ ಮಾತಿಗೂ ಕೇರ್ ಮಾಡದೆ ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದಾರೆ. ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದು, ಸತತ ಎರಡು ಗಂಟೆಗಳಿಂದ ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಯಾವುದೇ ಬಸ್ ಗಳು ಸಂಚರಿಸುತ್ತಿಲ್ಲ.