ದಸರಾ ಹಬ್ಬದೊಳಗೆ ಸಾರಿಗೆ ನೌಕರರ ವೇತನ: ಶ್ರೀರಾಮುಲು
ಬೆಂಗಳೂರು, ಅ.6: ರಾಜ್ಯ ಸರಾರಿಗೆ ನಿಗಮಗಳ ನೌಕರರ ವೇತನವನ್ನು ದಸರಾ ಹಬ್ಬದೊಳಗೆ ಪಾವತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ನೌರರ ವೇತನ ವಿಳಂಬ ಆಗಿರುವ ಕಾರಣ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಬುಧವಾರ ಸರಣಿ ಟ್ವೀಟ್ಗಳ ಮೂಲ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
"ಕರೋನಾ ಮಹಾಮಾರಿಯಿಂದ ತತ್ತರಿಸಿರುವ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರ್ಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎಂಬ ಮಾಹಿತಿ ನನಗೆ ಬಂದಿದೆ. ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು ಪ್ರತಿ ತಿಂಗಳು ಸಕಾಲ ವೇತನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಟ್ಯಾಗ್ ಮಾಡಿ ಅವರು ಮಂಗಳವಾರ ಸರಣಿ ಟ್ವೀಟ್ಗಳನ್ನು ಮಾಡಿದ್ದರು.
ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ-ತಾಯಿ ಸ್ಥಾನದಲ್ಲಿ ಇರುವ ಸರ್ಕಾರ ಕ್ಷಮಿಸಿ ಔದಾರ್ಯ ತೋರುವ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು ಮಹಾಮಾರಿ ಕೊರೋನಾವನ್ನೂ ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಅವರಿಗೆ ವೇತನ ನೀಡಬೇಕು ಎಂದು ಟ್ವೀಟ್ಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರು.
ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ್ದ ಸಚಿವ ಶ್ರೀರಾಮುಲು, "ಸಾರಿಗೆ ನೌಕರರ ವೇತನವನ್ನು ದಸರಾ ಹಬ್ಬದೊಳಗೆ ಬಿಡುಗಡೆ ಮಾಡಲಾಗುವುದು. ವೇತನ ಸಂಬಂಧ ಸಾರಿಗೆ ನೌಕರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು" ಎಂದು ಹೇಳಿದರು.
ಆರ್ಎಸ್ಎಸ್ ಬಗ್ಗೆ ತಪ್ಪು ಮಾಹಿತಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆರ್ಎಸ್ಎಸ್ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರು ಒಂದು ಬಲಿಷ್ಠ ಸಂಘಟನೆಯ ಬಗ್ಗೆ ತಪ್ಪು ಮಾಹಿತಿಗಳನ್ನೇ ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಐಎಎಸ್ ಮತ್ತು ಐಪಿಎಸ್ನಲ್ಲಿ ಆರ್ಎಸ್ಎಸ್ ಗೆ ಸೇರಿದವರು ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ, ಐಎಎಸ್ ಮತ್ತು ಐಪಿಎಸ್ ನೇಮಕಾತಿ ಯುಪಿಎಎಸ್ಸಿ ಮೂಲಕ ನಡೆಯುತ್ತದೆ. ಆರ್ಎಸ್ಎಸ್ ಮೂಲಕ ಅಲ್ಲ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಕುಮಾರಸ್ವಾಮಿಗೆ ಇದು ಗೊತ್ತಿರಬೇಕಿತ್ತು ಎಂದು ಹೇಳಿದರು.
ಮಾಜಿ ಪ್ರಧಾನಿಗಳಾದ ದೇವೇಗೌಡ ಅವರು ಕುಮಾರಸ್ವಾಮಿಗೆ ಉತ್ತಮ ಸಂಸ್ಕಾರ ಕಲಿಸಿದ್ದಾರೆ. ಕುಮಾರಸ್ವಾಮಿ ಅವರು ನನಗೂ ಒಳ್ಳೆಯ ಸ್ನೇಹಿತರು. ಅವರ ಬಗ್ಗೆ ಗೌರವ ಇದೆ. ಆದರೆ, ಯಾರೋ ನೀಡಿರುವ ತಪ್ಪು ಮಾಹಿತಿಗಳನ್ನು ಈ ರೀತಿ ಪ್ರಚಾರ ಮಾಡಬಾರದು. ಇದು ಅವರ ಘನತೆಗೆ ಒಳ್ಳೆಯದಲ್ಲ ಎಂದು ಶ್ರೀರಾಮುಲು ತಿರುಗೇಟು ನೀಡಿದರು.
Recommended Video