6ನೇ ವೇತನ ಆಯೋಗದಂತೆ ವೇತನ ನೀಡಿದ್ರೆ 1 ಗಂಟೆಯಲ್ಲಿ ಮುಷ್ಕರ ವಾಪಸ್
ಬೆಂಗಳೂರು, ಏಪ್ರಿಲ್ 07: ನಾವು ಯಾವುದೇ ಕಾರಣಕ್ಕೂ ಈ ಸಲ ಪ್ರತಿಭಟನೆ ಕೈ ಬಿಡುವುದಿಲ್ಲ. ಸರ್ಕಾರದ ತಂತ್ರಗಳಿಗೆ ಮಣಿಯುವುದಿಲ್ಲ. ಆರನೇ ವೇತನ ಆಯೋಗದ ಶಿಫಾರಸಿನಂತೆ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ ಒಂದು ತಾಸಿನಲ್ಲಿ ಮುಷ್ಕರ ಕೈ ಬಿಡುತ್ತೇವೆ ಎಂದು ಕೆಎಸ್ಆರ್ ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಆರ್. ಹೇಳಿದ್ದಾರೆ.
ಸರ್ಕಾರದ ಮನವಿಗೆ ಸ್ಪಂದಿಸಿ ಈ ಹಿಂದೆ ಹೋರಾಟ ಕೈ ಬಿಟ್ಟಿದ್ದೆವು. ಸರ್ಕಾರ ಕೊಟ್ಟ ಭರವಸೆ ಈಡೇರಿಸಲಿಲ್ಲ. ಈ ಭಾರಿ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಲೇಬೇಕು. ಅಲ್ಲಿಯ ವರೆಗೂ ಹೋರಾಟ ನಡೆಸುತ್ತೇವೆ. ನಮಗೂ ಹೋರಾಟ ನಡೆಸಿ ಜನರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಆದರೆ, ನೌಕರರ ಕಷ್ಟವನ್ನು ಇಲಾಖೆ ಅರ್ಥ ಮಾಡಿಕೊಳ್ಳುತ್ತಿಲ್ಲ. ನೌಕರರ ಬಹುದಿನಗಳ ಬೇಡಿಕೆ ಈಡೇರಿಸದೇ ನಾನಾ ತಂತ್ರ ಅನುಸರಿಸಿ ಹೋರಾಟವನ್ನು ಹತ್ತಿಕ್ಕುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ಈ ಸಲ ಯಾವ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಚಂಧ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ನೋ ವರ್ಕ್ ನೋ ಪೇ : ಸಾರಿಗೆ ನೌಕರರಿಗೆ ಟಾಂಗ್ ಕೊಟ್ಟ ಸರ್ಕಾರ
ರಸ್ತೆಗೆ ಇಳಿದ ಸ್ವಂತ ವಾಹನ: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಪ್ರಯಾಣಿಕರ ಸ್ವಂತ ವಾಹನ ಇಳಿದಿವೆ. ಬಿಎಂಟಿಸಿ ಬಸ್ಗಳು ಇಲ್ಲದಿದ್ದರೂ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಮುಷ್ಕರ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವರು ಸ್ವಂತ ವಾಹನ ಮೊರೆ ಹೋಗಿದ್ದಾರೆ.
ಚಾಮರಾಜಪೇಟೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕೋರಮಂಗಲ ಮತ್ತಿತರ ರಸ್ತೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಕೇವಲ ಬೆರಳೆಣಿಕೆಯಷ್ಟು ಖಾಸಗಿ ಬಸ್ ಗಳು ಮಾತ್ರ ಪ್ರಯಾಣಿಸುತ್ತಿವೆ. ಬಸ್ ಗಳನ್ನೇ ನಂಬಿಕೊಂಡಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನೊಂದೆಡೆ ಖಾಸಗಿ ವಾಹನಗಳು ರಸ್ತೆಗೆ ಇಳಿದರೂ ಪ್ರಯಾಣಿಕರು ಮುಖ ಮಾಡುತ್ತಿಲ್ಲ. ಇನ್ನೊಂದಡೆ ಸೀಟು ತುಂಬುವ ವರೆಗೂ ಖಾಸಗಿ ಬಸ್ಗಳು ಕಾಯುತ್ತಿದ್ದು, ಇದರಿಂದ ಪ್ರಯಾಣಿಕರೇ ಸಿಟ್ಟಿಗೆದ್ದು ಇಳಿದು ಹೊರ ನಡೆಯುತ್ತಿದ್ದಾರೆ.
ಆಟೋ ಕ್ಯಾಬ್ ಗಳಿಗೆ ಹಬ್ಬ: ಬಸ್ಗಳು ಬಂದ್ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ಗಳಿಗೆ ಯುಗಾದಿ ಹಬ್ಬ. ಆಟೋ ಚಾಲಕರಂತೂ ದುಬಾರಿ ಸುಲಿಗೆಗೆ ಇಳಿದರೆ, ದುಪ್ಪಟ್ಟು ದರ ವಿಧಿಸಿ ಖಾಸಗಿ ಕ್ಯಾಬ್ಗಳು ಸಹ ಇದರ ಲಾಭ ಪಡೆದುಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ. ಮುಷ್ಕರ ಇರುವಷ್ಟು ದಿನ ಒಂದಷ್ಟು ವಸೂಲಿ ಮಾಡುವ ಕಾರ್ಯದಲ್ಲಿ ಆಟೋಗಳು ನಿರತವಾಗಿವೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ, ಸುಲಿಗೆ ಕಾರ್ಯ ಮಾತ್ರ ನಿಲ್ಲಲಿಲ್ಲ.
Recommended Video