ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ನೌಕರರ ಪ್ಲಾನ್
ಬೆಂಗಳೂರು, ಫೆಬ್ರವರಿ 25 : ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ತಲ್ಲಣವಾಗಿತ್ತು. ಸರ್ಕಾರಕ್ಕೂ ನುಂಗುಲಾರದ ಬಿಸಿ ತುಪ್ಪವಾಗಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಾರಿಗೆ ನೌಕರರ ಬೇಡಿಕೆ ಮೂರು ತಿಂಗಳ ಒಳಗೆ ಈಡೇರಿಸುವ ಭರವಸೆ ನೀಡಿದ್ದರು. ಈಗಾಗಲೇ 75 ದಿನಗಳು ಕಳೆದಿವೆ. ಒಂದು ಬೇಡಿಕೆಯೂ ಈಡೇರಿಲ್ಲ. ಹೀಗಾಗಿ ಉಳಿದ 15 ದಿನದಲ್ಲಿ ಬೇಡಿಕೆ ಈಡೇರದಿದ್ದರೆ ಮಾರ್ಚ್ 15 ರ ನಂತರ ಬಸ್ ಸಂಚಾರ ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ.
ಸಾರಿಗೆ ನೌಕರರ ಮಹತ್ವದ ಬೇಡಿಕೆಗಳು :
ಎರಡು ತಿಂಗಳ ಹಿಂದೆ ರಾಜ್ಯದ ಸಾರಿಗೆ ನೌಕರರು ಬೀದಿಗೆ ಇಳಿದಿದ್ದರು. ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಇಡೀ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಪರದಾಡಿದ್ದರು. ಕ್ಷಣ ಕ್ಷಣಕ್ಕೂ ಸರ್ಕಾರಕ್ಕೆ ತಲೆ ಬಿಸಿ ಶುರುವಾಗಿತ್ತು. ಈ ಅವಧಿಯಲ್ಲಿ ಮುಷ್ಕರ ನಿರತ ಸಾರಿಗೆ ನೌಕರರ ಬಳಿ ಸರ್ಕಾರ ಮಾತುಕತೆ ನಡೆಸಿತು. ಅದರ ಪ್ರಕಾರ ಕೋವಿಡ್ ನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಬೇಕು. ಅಂತರ ನಿಗಮ ವರ್ಗಾವಣೆಗೆ ಅವಕಾಶ ನೀಡಬೇಕು. ತರಬೇತಿ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸಬೇಕು. ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಲು ಕಮಿಟಿ ರಚನೆ ಮಾಡಬೇಕು. ಆರನೇ ವೇತನ ಆಯೋಗದ ಅನ್ವಯ ವೇತನ ನೀಡಬೇಕು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಉಚಿತ ಅರೋಗ್ಯ ಸೌಲಭ್ಯ ಕಲ್ಪಿಸಬೇಕು. ಸಾರಿಗೆ ನಿಗಮದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಗೆ ಎನ್ಆರ್ಎಂಎಸ್ ವ್ಯವಸ್ಥೆ ಜಾರಿಗೆ ತರಬೇಕೆಂಬ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿತ್ತು. ಮೂರು ತಿಂಗಳಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಸಾರಿಗೆ ನೌಕರರ ಸಂಧಾನ ಯಶಸ್ವಿ ಬಳಿಕ ರಾಜ್ಯದಲ್ಲಿ ಬಸ್ ಸಂಚಾರ ಪುನರಾರಂಭವಾಗಿತ್ತು.
ಅದೇ ಆಟ, ಆದೇ ನಾಟಕ :
ಇನ್ನು ಸರ್ಕಾರಕ್ಕೆ ನೀಡಿದ್ದ ಮೂರು ತಿಂಗಳ ಗಡುವು ಮುಗಿದಿದೆ. ಆದರೆ ಈವರೆಗೂ ಒಂದು ಬೇಡಿಕೆ ಕೂಡ ಸಾರಿಗೆ ನಿಗಮಗಳು ಈಡೇರಿಸಿಲ್ಲ. ಸಂಧಾನ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರ ಶೇಖರ್, ನೌಕರರ ಮುಖಂಡ ಆನಂದ್ ಮತ್ತಿತರರಿಗೆ ನೌಕರರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಕಿ ಇರುವ ಹದಿನೈದು ದಿನದಲ್ಲಿ ಗರಿಷ್ಠ ಬೇಡಿಕೆ ಈಡೇರದಿದ್ದರೆ ಮತ್ತೆ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ನೌಕರರು ಬೀದಿಗೆ ಇಳಿಯಲು ತೀರ್ಮಾನಿಸಿದ್ದಾರೆ. ಸರ್ಕಾರ ಸಂಧಾನದ ಹೆಸರಿನಲ್ಲಿ ನಾಟಕ ಆಡಿತೇ ಎಂಬುದು ನೌಕರರ ಮಟ್ಟದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಮಾರ್ಚ್ 16 ರಿಂದ ಮುಷ್ಕರ ಅನಿವಾರ್ಯ :
ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ನೌಕರರ ಮುಖಂಡ ಆನಂದ್, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗುರುವಾರ ಸುದ್ದಿಗೋಷ್ಠಿ ನಡೆಸಿದರು. ಸಾರಿಗೆ ನೌಕರರ ಮಂದಿನ ಹೋರಾಟದ ರೂಪರೇಷಗಳ ಬಗ್ಗೆ ಸ್ಪಷ್ಟಪಡಿಸಿದರು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಬಿಟ್ಟು ಉಳಿದ 9 ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು. ಮೂರು ತಿಂಗಳ ಕಾಲವಕಾಶ ಕೇಳಿತ್ತು. ಅದಕ್ಕೆ ಸಾರಿಗೆ ನೌಕರರ ಮುಖಂಡರು ಒಪ್ಪಿದ್ದೆವು. ಅವಧಿ ಮುಗಿಯಿತು. ನೌಕರರ ಬೇಡಿಕೆಗಳ ಪೈಕಿ ನಾಲ್ಕು ಬೇಡಿಕೆ ಈಡೇರಿಸುವ ಬಗ್ಗೆ ಸಾರಿಗೆ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶಿಸಿತ್ತು. ಒಂದು ಬೇಡಿಕೆ ಕೂಡ ಈವರೆಗೂ ಈಡೇರಿಸಿಲ್ಲ. ಮಾರ್ಚ್ 15 ಕ್ಕೆ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿಯಲಿದ್ದು, ಇದರೊಳಗೆ ನೌಕರರ ಬೇಡಿಕೆ ಈಡೇರದಿದ್ದರೆ, ಮಾರ್ಚ್ 16 ರಿಂದ ಸಾರಿಗೆ ನೌಕರರು ಮತ್ತೆ ಮುಷ್ಕರ ಮಾಡಲಿದ್ದೇವೆ ಎಂದು ಸಾರಿಗೆ ನೌಕರರ ಮುಖಂಡ ಆನಂದ್ ತಿಳಿಸಿದ್ದಾರೆ. ಸರ್ಕಾರಕ್ಕೆ ಮತ್ತೊಮ್ಮೆ ನೆನಪು ಮಾಡುತ್ತಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಈ ಭಾರಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗವುದು ಎಂದು ಅವರು ಹೇಳಿದರು.
ನ್ಯಾಯ ಕೇಳುವ ಹಕ್ಕುನನಗಿದೆ :
ಸಾರಿಗೆ ನೌಕರರಿಗೂ ರೈತ ಮುಖಂಡ ಹೋಡಿಹಳ್ಳಿ ಚಂದ್ರಶೇಖರ್ ಗೂ ಸಂಬಂಧವಿಲ್ಲ ಎಂಬ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಇದೇ ವೇಳೆ ಉತ್ತರ ನೀಡಿದರು. ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಹೋರಾಟಗಾರನಾಗಿ ನೌಕರರ ಸಮಸ್ಯೆ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿದೆ. ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾವೇರಿ ಹೋರಾಟ ಮಾಡುವಾಗ ಜಲ ತಜ್ಞರು ಹೋರಾಟದಲ್ಲಿದ್ದರು. ಹಾಗಂತ ಅವರಿಗೂ, ಸಮಸ್ಯೆಗೂ ಸಂಬಂಧವಿಲ್ಲ ಎಂದು ಹೇಳಲಿಕ್ಕೆ ಸಾಧ್ಯವೇ ? ಇದರಲ್ಲಿ ಸರ್ಕಾರದ ದುರ್ಬಲತೆ ಕಾಣುತ್ತಿದೆ ಎಂದು ಸಾರಿಗೆ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.