ಲಾಕ್ಡೌನ್ ನೆಪ: NWKRTC ಸಿಬ್ಬಂದಿಗೆ ಇನ್ನೂ ಆಗಿಲ್ಲ ಮೇ ತಿಂಗಳ ಸಂಬಳ
ಬೆಂಗಳೂರು, ಜೂ. 24: ಇಂತಿಷ್ಟು ಆದಾಯ ತಂದರೆ ಮಾತ್ರ ಹಾಜರಾತಿ ಕೊಡಲಾಗುವುದು ಎಂದು ಸುತ್ತೋಲೆ ಹೊರಡಿಸಿದ್ದ ಕೆಎಸ್ಆರ್ಟಿಸಿ ಅಧಿಕಾರಿ ವರ್ಗಾವಣೆ ಯಾಗಿದ್ದಾರೆ. ಅದರ ಬೆನ್ನಲ್ಲೆ ಸಾರಿಗೆ ಸಿಬ್ಬಂದಿಯ ಮತ್ತೊಂದು ಸಂಕಷ್ಟ ಹೊರೆಗ ಬಂದಿದೆ. ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳ ಚಾಲಕರು ಹಾಗೂ ನಿರ್ವಾಹಕರಿಂದ ಆಯಾ ಘಟಕ ವ್ಯವಸ್ಥಾಪಕರು(ಡಿಪೋ ಮ್ಯಾನೇಜರ್)ಗಳು ಒತ್ತಾಯ ಪೂರ್ವಕವಾಗಿ ರಜೆ ಬರೆಯಿಸಿಕೊಳ್ಳುತ್ತಿದ್ದಾರೆ. ಆ ರಜೆಯನ್ನು ಲಾಕ್ಡೌನ್ ಸಂದರ್ಭಕ್ಕೆ ಸರಿದೂಗಿಸುತ್ತಿದ್ದಾರೆ ಎಂದು ಸಿಬ್ಬಂದಿ ದೂರಿದ್ದಾರೆ.
Recommended Video
ಹೀಗೆ ರಜೆ ಬರೆಯಿಸಿಕೊಂಡರೂ ಕೂಡ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ (NWKRTC) ಚಾಲಕರು ಹಾಗೂ ನಿರ್ವಾಹಕರಿಗೆ ಮೇ ತಿಂಗಳ ವೇತನ ಇನ್ನೂ ಬಾಕಿಯಿದೆ. ಇದಕ್ಕೂ ಕೂಡ ಲಾಕ್ಡೌನ್ ನೆಪವನ್ನೇ ವಾಯುವ್ಯ ಸಾರಿಗೆ ನಿಗಮಗದ ಅಧಿಕಾರಿಗಳು ಕೊಡುತ್ತಿದ್ದಾರೆ.
ಸಿಬ್ಬಂದಿ ರಜೆಗೆ ಕತ್ತರಿ
ಲಾಕ್ಡೌನ್ ನೆಪವನ್ನು ಮುಂದು ಮಾಡಿ ಕೆಎಸ್ಆರ್ಟಿಸಿ ನಾಲ್ಕೂ ನಿಗಮಗಳ ಡ್ರೈವರ್ ಹಾಗೂ ಕಂಡಕ್ಟರ್ಗಳ ರಜೆಗಳಿಗೆ ಕತ್ತರಿ ಹಾಕಲಾಗಿದೆ. ಮಾರ್ಚ್ 24 ರಿಂದ ಮೇ 18ರ ವರೆಗೆ ಒತ್ತಾಯ ಪೂರ್ವಕವಾಗಿ ರಜೆ ಚೀಟಿಗೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ.
ಒನ್ಇಂಡಿಯಾ Impact: ಸಾರಿಗೆ ಇಲಾಖೆ ಅಧಿಕಾರಿ ವರ್ಗಾವಣೆ
ಸಾಂದರ್ಭಿಕ, ಇಎಲ್, ಸಿಎಲ್ ಸೇರಿದಂತೆ ಎಲ್ಲ ರೀತಿಯ ರಜೆಗಳನ್ನು ಸಿಬ್ಬಂದಿ ಖಾತೆಯಿಂದ ಲಾಕ್ಡೌನ್ ಅವಧಿಗೆ ಹೊಂದಿಸಲಾಗುತ್ತಿದೆ. ಕಳೆದ ಮಾರ್ಚ್ 24 ರಂದು ಏಕಾಏಕಿ ದೇಶಾದ್ಯಂತ ಪ್ರಧಾನಿ ಮೋದಿ ಲಾಕ್ಡೌನ್ ಜಾರಿ ಮಾಡಿದ್ದರು. ಅದಾದ ಬಳಿಕ ಮೇ 18ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಆದರೆ ರಸ್ತೆಗೆ ಇಳಿದಿದ್ದು ಕೆಲವೇ ಕೆಲವು ಬಸ್ಗಳು ಮಾತ್ರ. ಆದರೂ ಇಡೀ ದಿನ ಬಸ್ ಡಿಪೋದಲ್ಲಿ ಡ್ರೈವರ್ ಹಾಗೂ ಕಂಟಕ್ಟರ್ಗಳು ಕಾಲ ಕಳೆದಿದ್ದಾರೆ. ಆಗ ಹಾಜರಾತಿ ಪುಸ್ತಕಕ್ಕೆ ಪ್ರತಿ ದಿನವೂ ಸಹಿ ಮಾಡಿದ್ದಾರೆ.
ಡ್ಯೂಟಿ ಬಿದ್ದವರಿಗೆ ಮಾತ್ರ ಹಾಜರಾತಿ
ರಾಜ್ಯಾದ್ಯಂತ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು 24 ಸಾವಿರಕ್ಕೂ ಅಧಿಕ ಬಸ್ಗಳಿವೆ. ಅದಕ್ಕೆ ತಕ್ಕಂತೆ ಸಿಬ್ಬಂದಿಯೂ ಇದ್ದಾರೆ. ಈಗಲೂ ಕೂಡ ಕೇವಲ ಅರ್ಧದಷ್ಟು ಬಸ್ಗಳು ಮಾತ್ರ ರಸ್ತೆಗೆ ಇಳಿದಿವೆ.
ಲಾಕ್ಡೌನ್ ತೆರುವಾದ ಬಳಿಕ ಮೇ 18 ರಿಂದ ಆಯಾ ಬಸ್ ಘಟಕ(ಡಿಪೋ)ಗಳಲ್ಲಿಯೇ ಚಾಲಕರು ಹಾಗೂ ನಿರ್ವಾಹಕರ ಹಾಜರಾಗಿದ್ದಾರೆ. ಅದಕ್ಕೆ ಹಾಜರಾತಿ ಪುಸ್ತಕದಲ್ಲಿ ಸಹಿಯನ್ನೂ ಮಾಡಿದ್ದಾರೆ. ಆದರೂ ಲಾಕ್ಡೌನ್ ದಿನಗಳಿಗೆ ರಜೆಗಳನ್ನು ಬರೆಯಿಸಿಕೊಳ್ಳಲಾಗಿದೆ. ಜೊತೆಗೆ ಲಾಕ್ಡೌನ್ ತೆರುವಾದ ನಂತರ ಡಿಪೋಗಳಲ್ಲಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದರೂ ಅದನ್ನು ಪರಿಗಣನೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಸಂಪೂರ್ಣ ರಜೆಗಳನ್ನು ಸಿಬ್ಬಂದಿ ಕಳೆದುಕೊಂಡಿದ್ದು ಮುಂದೆ ವೈಯಕ್ತಿಕ ಸಮಸ್ಯೆಗಳಿಂದ ರಜೆ ಹಾಕಿದಲ್ಲಿ ವೇತನಕ್ಕೆ ಕತ್ತರಿ ಬೇಳಲಿದೆ.
55 ವರ್ಷ ಮೀರಿದವರಿಗೂ ಗೈರು ಹಾಜರಿ
ಇನ್ನು ಸಾರಿಗೆ ನಿಗಮಗಳಲ್ಲಿ 55 ವರ್ಷ ಮೀರಿದ ಹಾಗೂ ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದ ಸಿಬ್ಬಂದಿಗೆ ಮನೆಯಲ್ಲಿರುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ (KSRTC MD) ಶಿವಯೋಗಿ ಕಳಸದ ಅವರು ಸೂಚಿಸಿದ್ದರು. ಆದರೆ ಇದೀಗ ಅವರಿಗೆ ಹಾಜರಾತಿ ಕೊಡದೇ ಗೈರು ಹಾಜರು ಎಂದು ತೋರಿಸಲಾಗಿದೆ.
ಜೂನ್ 25ರಿಂದ 8 ಮಾರ್ಗದಲ್ಲಿ ಕೆಎಸ್ಆರ್ಟಿಸಿ ಎಸಿ ಬಸ್ ಸಂಚಾರ
ಆ ದಿನಗಳಿಗೆ ರಜೆಗಳನ್ನು ಹೊಂದಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿದ್ದ ಸಿಬ್ಬಂದಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೆಲ್ಲವನ್ನೂ ಮಾಡುತ್ತಿರುವುದು ಡಿಪೋ ಮ್ಯಾನೇಜರ್ಗಳು ಎಂಬುದು ಸಿಬ್ಬಂದಿ ಅಳಲು.
ವಾಯುವ್ಯ ನಿಗಮದ ಸಿಬ್ಬಂದಿಗೆ ವೇತನವಿಲ್ಲ
ಇನ್ನು ಹೀಗೆ ರಜೆಯನ್ನೂ ಬರೆಯಿಸಿಕೊಂಡ ಮೇಲೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಚಾಲಕರು, ನಿರ್ವಾಹಕರಿಗೆ ಮೇ ತಿಂಗಳಿನ ವೇತನವನ್ನು ಪಾವತಿ ಮಾಡಲಾಗಿಲ್ಲ.
ಇವತ್ತು ಆಗಲೇ ದಿನಾಂಕ ಜೂನ್ 24, ಆದರೂ ವಾಯುವ್ಯ ಸಾರಿಗೆ ಸಿಬ್ಬಂದಿಗೆ ವೇತನ ಪಾವತಿ ಆಗಿಲ್ಲ. ಉಳಿದ ನಿಗಮಗಳ ಸಿಬ್ಬಂದಿಗೆ ಕಳೆದ ಜೂ. 20ರಂದು ವೇತನ ಹಾಕಲಾಗಿದೆ ಎನ್ನಲಾಗಿದೆ. ಆದರೆ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿಗೆ ಮಾತ್ರ ಈವರೆಗೂ ಸಂಬಳ ಪಾವತಿ ಆಗಿಲ್ಲ. ವಿಪರ್ಯಾಸ ಎಂದರೆ ಈವರೆಗೆ ಪೇ ಸ್ಲಿಪ್ನ್ನು ಕೂಡ ಕೊಡಲಾಗಿಲ್ಲ ಎಂಬುದು ಆ ನಿಗಮದ ಚಾಲಕರು ಹಾಗೂ ನಿರ್ವಾಹಕರ ಆರೋಪ. ಈ ಬಗ್ಗೆ ಸಾರಿಗೆ ನಿಗಮದ ಎಂಡಿ ಶಿಯೋಗಿ ಕಳಸದ ಅವರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಿದೆ.