ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!
ಬೆಂಗಳೂರು, ಫೆಬ್ರವರಿ 24 : ಒಂದು ಕೊಲೆ, ಎರಡು ಆತ್ಮಹತ್ಯೆ ಪ್ರಕರಣದ ಬಳಿಕ ದಂತವೈದ್ಯ ಡಾ. ರೇವಂತ್ ಬದುಕಿನ ಪುಟ ದುರಂತ ಅಂತ್ಯವಾಗಿದೆ. ಕಡೂರಿನಲ್ಲಿ ಆರಂಭವಾದ ಈ ಕಥೆ ರಾಜರಾಜೇಶ್ವರಿ ನಗರದ ಮನೆಯಲ್ಲಿ ಹರ್ಷಿತಾ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಮತ್ತೊಂದು ತಿರುವು ಪಡೆದಿದೆ.
ಫೆಬ್ರವರಿ 17ರಂದು ಕಡೂರಿನಲ್ಲಿ ಡಾ. ರೇವಂತ್ ಪತ್ನಿ ಕವಿತಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊದಲು ಈ ಪ್ರಕರಣ ಇಷ್ಟೊಂದು ಆಯಾಮಗಳನ್ನು ಪಡೆದುಕೊಳ್ಳಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಹರ್ಷಿತಾ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಡಾ. ರೇವಂತ್ ಪತ್ನಿ ಕವಿತಾ ಕೊಲೆಯಾಗಿದ್ದಾರೆ. ರೈಲಿಗೆ ತಲೆಕೊಟ್ಟು ರೇವಂತ್ ಆತ್ಮಹತ್ಯೆ ಮಾಡಿಕೊಂಡರು. ಕವಿತಾರನ್ನು ರೇವಂತ್ ಹತ್ಯೆ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ.
ಕಡೂರು ಕವಿತಾಳನ್ನು ಕೊಂದಿದ್ದು ಆಕೆಯ ಗಂಡನೇ!
ಕವಿತಾ ಹತ್ಯೆ ಮಾಡಿ ಹರ್ಷಿತಾ ಜೊತೆಗೆ ಮುಂದಿನ ಜೀವನ ನಡೆಸುವ ಡಾ. ರೇವಂತ್ ಆಲೋಚನೆ ವಿಚಿತ್ರ ತಿರುವು ಪಡೆಯಿತು. ಒಟ್ಟು ಮೂರು ಸಾವಿನ ಬಳಿಕ ಡಾ. ರೇವಂತ್ ಮತ್ತು ಹರ್ಷಿತಾ ಮಕ್ಕಳು ಮಾತ್ರ ಅನಾಥರಾದರು.
ಕೊಲೆ ಪ್ರಕರಣ: ಡಾ.ರೇವಂತ್ ಆತ್ಮಹತ್ಯೆ ಸುದ್ದಿ ಕೇಳಿ ಪ್ರಿಯತಮೆ ಸೂಸೈಡ್
ಆಭರಣ ಕೊಡಿಸಿದ್ದ ಡಾ. ರೇವಂತ್
ಫೆಬ್ರವರಿ 17ರಂದು ಡಾ. ರೇವಂತ್ ಪತ್ನಿ ಕವಿತಾಳನ್ನು ಜ್ಯುವೆಲ್ಲರಿ ಶಾಪ್ಗೆ ಕರೆದುಕೊಂಡು ಹೋಗಿದ್ದರು. ಮಗಳ ಹುಟ್ಟುಹಬ್ಬಕ್ಕೆ ಆಭರಣ ಖರೀದಿ ಮಾಡಿದ್ದರು. ಮನೆಗೆ ಬಂದ ಬಳಿಕ ಇಂಜೆಕ್ಷನ್ ಕೊಟ್ಟು ಪತ್ನಿಯ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಕಾರು ಶೆಡ್ಗೆ ಎಳೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದರು. ನಂತರ ಮನೆಗೆ ಬಂದ ಮಗಳನ್ನು ಕರೆದುಕೊಂಡು ಕ್ಲಿನಿಕ್ಗೆ ಹೋಗಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತು
ಕ್ಲಿನಿಕ್ನಿಂದ ಮನೆಗೆ ಬಂದ ಡಾ. ರೇವಂತ್ ಪತ್ನಿಯನ್ನು ಯಾರೋ ಹತ್ಯೆ ಮಾಡಿ ಮನೆಯನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದಾಗ ಇಂಜೆಕ್ಷನ್ ನೀಡಿರುವ ಅಂಶ ಬೆಳಕಿಗೆ ಬಂದಿತ್ತು. ಇದರಲ್ಲಿ ರೇವಂತ್ ಕೈವಾಡ ಇರುವ ಬಗ್ಗೆ ಅನುಮಾನ ಬಂದ ಪೊಲೀಸರು ವಿಚಾರಣೆಗೆ ಆಗಮಿಸುವಂತೆ ಡಾ. ರೇವಂತ್ಗೆ ನೋಟಿಸ್ ನೀಡಿದ್ದರು.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಪೊಲೀಸರು ನೋಟಿಸ್ ನೀಡಿದ ಬಳಿಕ ಆತಂಕಗೊಂಡ ರೇವಂತ್ ಬಂಡಿಕೊಪ್ಪಳು ರೈಲ್ವೆ ಗೇಟ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದರು. ಆಗ ಪೊಲೀಸರಿಗೆ ಕವಿತಾ ಹತ್ಯೆ ಮಾಡಿರುವುದು ಖಚಿತವಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸರಿಗೆ ಹರ್ಷಿತಾ ಜೊತೆ ರೇವಂತ್ಗೆ ಅಕ್ರಮ ಸಂಬಂಧ ಇರುವ ವಿಚಾರ ತಿಳಿಯಿತು.
ಕವಿತಾಗೆ ವಿಚಾರ ತಿಳಿದಿತ್ತು
ಹರ್ಷಿತಾ ಕಡೂರಿನಲ್ಲಿ ಇರುವಾಗ ರೇವಂತ್ ಮನೆಯಲ್ಲಿ ಬಾಡಿಗೆಗೆ ಇದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ವಿವಾಹವಾಗಲು ಸಾಧ್ಯವಾಗಿರಲಿಲ್ಲ. ಹರ್ಷಿತಾ ವಿವಾಹದ ಬಳಿಕ ಬೆಂಗಳೂರಿಗೆ ಬಂದಿದ್ದರು. ರೇವಂತ್ ಹರ್ಷಿತಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ಕವಿತಾಗೆ ತಿಳಿದು ಆಕೆ ಗಲಾಟೆ ಮಾಡಿದ್ದಳು.
ಹರ್ಷಿತಾ ಆತ್ಮಹತ್ಯೆಗೆ ಶರಣು
ಡಾ. ರೇವಂತ್ ಆತ್ಮಹತ್ಯೆಯ ವಿಚಾರ ತಿಳಿದ ಹರ್ಷಿತಾ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಈ ವಿಚಾರ ಬಹಿರಂಗವಾಗಿದೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಪತಿಯಿಂದ ಕಿರುಕುಳ ಎಂದು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.