ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ
ಮಡಿಕೇರಿ, ಅ.7 : ಅತ್ತ ಐತಿಹಾಸಿಕ ಮೈಸೂರು ದಸರಾ ಪ್ರಾರಂಭವಾಗುತ್ತಿದ್ದಂತೆ, ಇತ್ತ ಮಡಿಕೇರಿಯ ದಸರಾಕ್ಕೂ ಚಾಲನೆ ದೊರೆತಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭವಾಗುದರೊಂದಿಗೆ ಹತ್ತುದಿನಗಳ ಉತ್ಸವ ಪ್ರಾರಂಭವಾಯಿತು.
ಶನಿವಾರ ಪಂಪಿನಕೆರೆಯಲ್ಲಿ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಹತ್ತು ದಿನಗಳ ಉತ್ಸವಕ್ಕೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಕಾರ್ಯಧ್ಯಕ್ಷರಾದ ಕೆ.ಎಂ.ಬಿ.ಗಣೇಶ್ ಅವರು ಚಾಲನೆ ನೀಡಿದರು. ಈ ಮೂಲಕ ಮಡಿಕೇರಿ ದಸರಾಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.
ಮೊಗೆರಾ ಸಮಾಜ, ದಲಿತ ಸಂಘ ಮತ್ತು ಆಟೋ ಚಾಲಕರ ಸಂಘದವರು ಬೃಹತ್ ದಸರಾ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಎಸ್ಪಿ ಎಂ.ಎನ್.ಅನುಚೇತ್, ಪೌರಾಯುಕ್ತ ಎನ್.ಎಂ.ಶಶಿಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು. (ಚಿತ್ರಗಳಲ್ಲಿ ಮಡಿಕೇರಿ ದಸರಾ)
ಕರಗದ ಮೂಲಕ ದಸರಾ ಉದ್ಘಾಟನೆ
ಶನಿವಾರ ಮಧ್ಯಾಹ್ನ ನಾಲ್ಕು ಶಕ್ತಿ ದೇವತೆಗಳ ಕರಗ ಹೊರುವ ಪಿ.ಪಿ. ರಮೇಶ್, ಉಮೇಶ್, ಕೋಟೆ ಮಾರಿಯಮ್ಮ ದೇವಾಲಯದ ಅನೀಶ್, ಹಾಗೂ ಕಂಚಿ ಕಾಮಾಕ್ಷಿ ದೇವಾಲಯದ ನವೀನ್ ಮಧುರಯ್ಯ ದೇವತೆಗಳ ಮುಖವಾಡದೊಂದಿಗೆ ಪಂಪಿನಕೆರೆಗೆ ಆಗಮಿಸಿದ್ದರು.
ಸಾಂಪ್ರದಾಯಿಕ ಪೂಜೆ
ಕರಗಗಳ ಅಲಂಕಾರ ಮುಗಿದ ಬಳಿಕ ಸಂಜೆ 5.30ರ ಸುಮಾರಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಪಂಪು ಕೆರೆ ಆವರಣದಿಂದ ಹೊರ ಬಂದ ನಾಲ್ಕು ಕರಗಗಳಿಗೆ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ನಗರ ಪ್ರದಕ್ಷಿಣೆ
ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಎ.ವಿ ಶಾಲೆ ಬಳಿಯ ಬನ್ನಿಮಂಟಪಕ್ಕೆ ತೆರಳಿ, ಅಲ್ಲಿಂದ ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರ ತಲುಪಿದವು, ಕರಗಗಳಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ಮರಳಿದವು.
ನಾಲ್ಕು ಶಕ್ತಿ ದೇವತೆಗಳು
ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಮಹೋತ್ಸವದ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಜನರಿಂದ ಭಕ್ತಿಯ ನಮನ
ನಾಲ್ಕು ಶಕ್ತಿ ದೇವತೆಗಳ ಕರಗ ಸಾಗುವ ದಾರಿಯಲ್ಲಿ ಸಾರ್ವಜನಿಕರು ಭಕ್ತಿ ಪೂರ್ವಕವಾಗಿ ದೇವಿಗೆ ಪೂಜೆ ಸಲ್ಲಿಸಿದರು. ಈ ಮೂಲಕ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಂಡರು.