ಮೋದಿ ಪ್ರಶಂಸೆಗೆ ಪಾತ್ರವಾದ ಯಡಿಯೂರಪ್ಪ ಸರಕಾರದ ಈ ನಿರ್ಧಾರ
ಬೆಂಗಳೂರು, ಆ 31: ಯಡಿಯೂರಪ್ಪ ಸರಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ, ಟ್ವಿಟ್ಟರ್ ನಲ್ಲಿ ಹೊಗಳಿದ್ದಾರೆ. ಅದಕ್ಕೆ ಕಾರಣ, ಕೊಪ್ಪಳದಲ್ಲಿ ತಲೆ ಎತ್ತಲಿರುವ ಬೊಂಬೆ ತಯಾರಿಕಾ ಕ್ಲಸ್ಟರ್.
Recommended Video
ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಬಗ್ಗೆ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಗೊಂಬೆ ಮತ್ತು ಮುಧೋಳ್ ತಳಿಗಳ ಬಗ್ಗೆ ಪ್ರಸ್ತಾವಿಸಿದ್ದರು. ಇದನ್ನು ಉಲ್ಲೇಖಿಸಿ, ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದರು.
ಕೊಪ್ಪಳದಲ್ಲಿ ಸ್ಥಾಪನೆಯಾಗಲಿದೆ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್
ಇದನ್ನು ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿರುವ ಪ್ರಧಾನಿ ಮೋದಿ, "ಭಾರತವನ್ನು ಆಟಿಕೆ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಕರೆಗೆ ರಾಜ್ಯಗಳು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ" ಎಂದು ಪ್ರಧಾನಿ, ಯಡಿಯೂರಪ್ಪನವರಿಗೆ ಶಹಬ್ಬಾಸ್ ಗಿರಿಯನ್ನು ನೀಡಿದ್ದಾರೆ.
"ಕ್ಲಸ್ಟರ್ ನಿರ್ಮಾಣ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಪ್ರಯತ್ನವಾಗಿತ್ತು. ಆಗಿನ ಕೈಗಾರಿಕಾ ಸಚಿವರಾಗಿದ್ದ ಕೆ.ಜೆ.ಜಾರ್ಜ್ ತೆಗೆದುಕೊಂಡಿದ್ದ ನಿರ್ಧಾರವಾಗಿತ್ತು. ಬಿಜೆಪಿಯವರು ಈಗ ಇದನ್ನು ತಮ್ಮ ಸಾಧನೆಯಿದು ಎಂದು ಬಿಂಬಿಸುತ್ತಿದ್ದಾರೆ"ಎನ್ನುವ ಪ್ರತಿಕ್ರಿಯೆ ಮೋದಿ ಟ್ವೀಟಿಗೆ ಬಂದಿದೆ.
"ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಯೋಜನೆಯಡಿ ಕೊಪ್ಪಳದಲ್ಲಿ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್ ತಲೆ ಎತ್ತಲಿದೆ"ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದರು.
Happy to see the states responding enthusiastically to the clarion call of making India a toy production hub. https://t.co/tlgB209M6X
— Narendra Modi (@narendramodi) August 30, 2020
"ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ #VocalForLocal ಪರಿಕಲ್ಪನೆಗೆ ಅನುಗುಣವಾಗಿ, ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ದೇಶ-ವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು" ಎಂದು ಯಡಿಯೂರಪ್ಪ ತಿಳಿಸಿದ್ದರು.