ಕೊಪ್ಪಳ ಆಟಿಕೆ ಕ್ಲಸ್ಟರ್ ಕುಮಾರಸ್ವಾಮಿ ಯೋಜನೆ, ಬಿಎಸ್ವೈ ಅವರದ್ದಲ್ಲ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 1: ಕೊಪ್ಪಳದಲ್ಲಿ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್ ಸ್ಥಾಪನೆಯ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದು ಬಿಜೆಪಿಯ ಯೋಜನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಪಾದಿಸಿದ್ದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶುರುವಾದ ಪ್ರಕ್ರಿಯೆ ಇದು ಎಂದು ಹೇಳಿಕೊಂಡಿವೆ. ಇದು ತಮ್ಮ ತಂದೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಯೋಜನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Recommended Video
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಬಿ.ಎಸ್. ಯಡಿಯೂರಪ್ಪ, ಪ್ರಧಾನಿಯವರ ವೋಕಲ್ ಫಾರ್ ಲೋಕಲ್ ಮತ್ತು ಆಟಿಕೆ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದ ಸಲುವಾಗಿ ಭಾರತದ ಅತಿ ದೊಡ್ಡ ಆಟಿಕೆ ತಯಾರಿಕೆ ಕ್ಲಸ್ಟರ್ಅನ್ನು ಕೊಪ್ಪಳದಲ್ಲಿ ಆರಂಭಿಸಲಾಗುತ್ತಿದೆ. 400 ಎಕರೆಗಳ ವಿಶೇಷ ಆರ್ಥಿಕ ವಲಯವು ಅತ್ಯುನ್ನತ ಮೂಲಸೌಕರ್ಯಗಳೊಂದಿಗೆ ಕೆಲಸ ಮಾಡಲಿದ್ದು, ಐದು ವರ್ಷಗಳಲ್ಲಿ 40,000 ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಹೇಳಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದರು.
ಮೋದಿ ಪ್ರಶಂಸೆಗೆ ಪಾತ್ರವಾದ ಯಡಿಯೂರಪ್ಪ ಸರಕಾರದ ಈ ನಿರ್ಧಾರ
ಆದರೆ ಯಡಿಯೂರಪ್ಪ ಅವರ ಟ್ವೀಟ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದು ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಯೋಜನೆ. ಅದನ್ನು ಯಡಿಯೂರಪ್ಪ ತಮ್ಮ ಸರ್ಕಾರದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಲಾಗಿದೆ. ಮುಂದೆ ಓದಿ...
ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್
ಮೋದಿಯವರ ವೋಕಲ್ ಫಾರ್ ಲೋಕಲ್ಗೆ ಬಲ ನೀಡಲು ಭಾರತದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರನ್ನು ಕೊಪ್ಪಳದಲ್ಲಿ ಪ್ರಾರಂಭಿಸುತ್ತಿರುವುದಾಗಿ ಇತ್ತೀಚೆಗೆ ಯಡಿಯೂರಪ್ಪ ಅವರು ಹೇಳಿಕೊಂಡಿದ್ದಾರೆ. ಭಾರತವನ್ನು ಆಟಿಕೆ ಉತ್ಪಾದನೆಯ ಕೇಂದ್ರಬಿಂದುವನ್ನಾಗಿ ಮಾಡಲು ನೀಡಿದ್ದ ಕರೆಗೆ ಓಗೊಟ್ಟು ಮಾಡಿರುವ ಕೆಲಸವೆಂಬಂತೆ ಪ್ರಧಾನಿಗಳು ಇದನ್ನು ಹೇಳಿಕೊಂಡಿದ್ದಾರೆ ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ.
ಕುಮಾರಣ್ಣ ಅನುದಾನ ನೀಡಿದ್ದರು
ಆದರೆ ಇದು ವಾಸ್ತವವನ್ನು ಮರೆಮಾಚುವ ಕೆಲಸ ಎಂದು ನನ್ನ ಭಾವನೆ. ವಾಸ್ತವವೇನೆಂದರೆ 2018ರಲ್ಲಿ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕನಸಿನ ಕೂಸಾಗಿದ್ದ 'ಕಾಂಪಿಟ್ ವಿತ್ ಚೀನಾ' ಪರಿಕಲ್ಪನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು 500 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸ್ಥಾಪನೆಯಾಗಲಿದೆ ಬೃಹತ್ ಗೊಂಬೆ ತಯಾರಿಕಾ ಕ್ಲಸ್ಟರ್
2000 ಕೋಟಿ ರೂ ಅನುದಾನ
2019ರಲ್ಲಿ 2000 ಕೋಟಿ ರೂ ಅನುದಾನ ಒದಗಿಸಲು ನಿರ್ಧರಿಸಲಾಗಿತ್ತು. ಉತ್ಪಾದನಾ ವಲಯವನ್ನು ಉತ್ತೇಜಿಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ, 9 ಜಿಲ್ಲೆಗಳಲ್ಲಿ ಕನಿಷ್ಠ 9 ಲಕ್ಷ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಅಸಮತೋಲನ ನಿವಾರಿಸುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯರಿಗೆ ಉದ್ಯೋಗ
ಕೊಪ್ಪಳದಲ್ಲಿ ಆಟಿಕೆ, ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ತುಮಕೂರಿನಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಉಪಕರಣ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಮೈತ್ರಿ ಸರ್ಕಾರ ಮುಂದಾಗಿತ್ತು ಎಂದಿದ್ದಾರೆ.
ಮಾತೃ ಜಿಲ್ಲೆಗಳಲ್ಲೇ ಕೆಲಸ ಸಿಗುವಂತಾಗಲಿ
ಇದರ ಭಾಗವಾಗಿ ಪ್ರಾರಂಭವಾಗುತ್ತಿರುವ ಕೊಪ್ಪಳ ಆಟಿಕೆ ತಯಾರಿಕಾ ಕ್ಲಸ್ಟರ್ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಕ್ಕಾಗಿ ಕೊಪ್ಪಳದ ಯುವ ಜನತೆ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗಲಿ ಈ ಮೂಲಕ ತಮ್ಮ ಮಾತೃ ಜಿಲ್ಲೆಗಳಲ್ಲೇ ಯುವಕರಿಗೆ ಕೆಲಸ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.