ಖಾತೆ ಬದಲಾವಣೆಗೆ ವಿನೂತನ ಪ್ರಯತ್ನ ಆರಂಭಿಸಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್?
ಬೆಂಗಳೂರು, ಆ. 28: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅಸಮಾಧಾನ ತಾತ್ಕಾಲಿಕವಾಗಿ ತಣಿದಂತಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಸಂಧಾನದಿಂದ ಸುಮ್ಮನಾಗಿದ್ದ ಸಚಿವ ಸಿಂಗ್, ಇದೀಗ ತಮ್ಮ ಇಲಾಖೆಯ ಕಾರ್ಯ ಚಟುವಟಿಕೆ ಆರಂಭಿಸಿದ್ದಾರೆ. ಆದರೂ ಖಾತೆ ಬದಲಾವಣೆ ಪ್ರಯತ್ನವನ್ನು ಮಾತ್ರ ಕೈಬಿಟ್ಟಿಲ್ಲ.
ತಮಗೆ ಪ್ರವಾಸೋದ್ಯಮ ಇಲಾಖೆಯೆ ಬೇಡ ಎಂದಿದ್ದ ಆನಂದ್ ಸಿಂಗ್ ಈಗ ಅದೇ ಇಲಾಖೆಯಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಹಿಂದೆ 20:20 ಮೈತ್ರಿ ಸರ್ಕಾರದಲ್ಲಿ ಗಣಿದಣಿ ಜನಾರ್ಧನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸಿಗರಿಗೆ ವಿಶೇಷ ಸೌಲಭ್ಯ ಒದಗಿಸಲು ಮುಂದಾಗಿದ್ದರು, ಆದರೆ ಅದಾಗಿರಲಿಲ್ಲ. ನೆನಗುದಿಗೆ ಬಿದ್ದಿದ್ದ ಆ ಯೋಜನೆಯನ್ನು ಇದೀಗ ಮತ್ತೆ ನೂತನ ಸಚಿವ ಆನಂದ್ ಸಿಂಗ್ ಜಾರಿಗೆ ತರುತ್ತಿದ್ದಾರೆ.
ಖಾತೆ ಬದಲಾವಣೆ ಕುರಿತು ಹೈಕಮಾಂಡ್ ಭೇಟಿ ಮಾಡುವುದಾಗಿ ಆನಂದ್ ಸಿಂಗ್ ಈ ಮೊದಲು ಹೇಳಿದ್ದರು. ಆದರೆ ಹೈಕಮಾಂಡ್ ಖಡಕ್ ಎಚ್ಚರಿಕೆ ಬಳಿಕ, ಕೊಟ್ಟಿರುವ ಇಲಾಖೆಯಲ್ಲಿಯೇ ಸಾಧನೆ ಮಾಡಿ ಆ ಮೂಲಕ ಖಾತೆ ಬದಲಾವಣೆ ಪ್ರಯತ್ನ ಮುಂದುವರೆಸಲು ಆನಂದ್ ಸಿಂಗ್ ಮುಂದಾಗಿದ್ದಾರೆ. ಅಷ್ಟಕ್ಕೂ ಆನಂದ್ ಸಿಂಗ್ ಪ್ರವಾಸಿಗರಿಗೆ ಕೊಡುತ್ತಿರುವ ಹೊಸ ಸೌಲಭ್ಯ ಏನು? ಪ್ರವಾಸೋದ್ಯಮ ಇಲಾಖೆಯಲ್ಲಿ ಸಾಧನೆ ಮಾಡಿದ್ರೆ ಖಾತೆ ಬದಲಾವಣೆ ಹೇಗೆ ಆಗುತ್ತದೆ? ಮುಂದಿದೆ ಮಾಹಿತಿ!
ಕ್ಯಾಬ್ ಜೊತೆಗೆ ಹೆಲಿಕ್ಯಾಪ್ಟರ್!
ಪ್ರವಾಸೋದ್ಯಮ ನಿಗಮದಲ್ಲಿ ಪ್ರವಾಸಿಗರ ಸಂಚಾರಕ್ಕೆೆ ಇನ್ನು ಮುಂದೆ ಕ್ಯಾಬ್ ಜೊತೆಗೆ ಹೆಲಿಕ್ಯಾಪ್ಟರ್ ಸೌಲಭ್ಯ ಕೂಡ ಸಿಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ, "ಪ್ರವಾಸಿಗರಿಗೆ ಇನ್ನುಮುಂದೆ ಕ್ಯಾಬ್ ಮಾತ್ರ ಇರಲ್ಲ. ಜೊತೆಗೆ ಹೆಲಿಕಾಪ್ಟರ್ ಕೂಡ ಬರಲಿದೆ. ಅದರೊಂದಿಗೆ ನಂದಿ ಬೆಟ್ಟ ಹಾಗೂ ಕೆಮ್ಮಣ್ಣು ಗುಂಡಿ ಪ್ರವಾಸಿ ತಾಣಗಳಲ್ಲಿ ಜಂಗಲ್ ಲಾಡ್ಜ್ನಿಂದ ಅಭಿವೃದ್ಧಿ ಮಾಡಲಾಗುವುದು" ಎಂದು ಹೊಸ ಯೋಜನೆ ಜಾರಿಗೆ ತರುವುದನ್ನು ಸಚಿವರು ತಿಳಿಸಿದ್ದಾರೆ.
ವಿಶ್ವವಿಖ್ಯಾತ ಹಂಪಿಗೆ ಹೊಸ ಕೊಡುಗೆ!
"ಸಂಸ್ಕೃತಿ ಅತಿಥಿ ದೇವೋಭವ ಎಂಬ ರೀತಿಯ ಬದುಕು ನಮ್ಮದು. ವಿಜಯನಗರ ಜಿಲ್ಲೆಯ ಕಮಾಲಪುರದ ಕೆರೆಗೆ ರೇಹಿಂಗ್ ಬೋಟ್ ಯೋಜನೆ ರೂಪಿಸಲು ಸೂಚನೆ ನೀಡಿದ್ದೇವೆ. ವಿಶ್ವ ವಿಖ್ಯಾತ ಹಂಪಿಗೆ ಎರಡು ಡಬಲ್ ಡೆಕ್ಕರ್ ಬಸ್ ಶೀಘ್ರವಾಗಿ ಬರಲಿದೆ. ಆಲಮಟ್ಟಿ, ವಿಜಯಪುರ ಹಾಗೂ ಬಿಆರ್ ಹಿಲ್ಸ್ನಲ್ಲಿ ಪ್ರವಾಸೋದ್ಯಮ ನಿಗಮದಿಂದ ಹೊಸ ಹೋಟೆಲ್ ನಿರ್ಮಾಣ ಮಾಡಲಾಗಿದೆ" ಎಂದು ಇದೇ ವೇಳೆ ಸಚಿವ ಆನಂದ್ ಸಿಂಗ್ ವಿವರಿಸಿದರು.
ಇಲಾಖೆ ಆದಾಯ ಹೆಚ್ಚುಸಲು ಹೊಸ ಪ್ರಯತ್ನ!
"ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಕೆಲಸ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ಉತ್ತಮ ಸೌಲಭ್ಯ ನೀಡಿದರೆ ಹೆಚ್ಚೆಚ್ಚು ಜನರು ಪ್ರವಾಸಕ್ಕೆ ಬರುತ್ತಾರೆ. ಜನರು ಬರುವುದರೊಂದಿಗೆ ಇಲಾಖೆ ಆದಾಯ ಕೂಡ ಹೆಚ್ಚಾಗುತ್ತದೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಜೊತೆಗೆ, "ಜಂಗಲ್ ಲಾಡ್ಜ್ನಲ್ಲಿ ಆಟ ಅಥವಾ ವಿವಿಧ ಚಟುವಟಿಕೆಯಲ್ಲಿ ಕಟ್ಟಿನಿಟ್ಟಿನ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Recommended Video
ಇಲಾಖೆ ಆಸ್ತಿ ಬಗ್ಗೆ ಹೆಚ್ಚಿನ ಗಮನ ಕೊಡಿ
ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಸೂಚನೆಯನ್ನು ಸಚಿವ ಆನಂದ್ ಸಿಂಗ್ ಕೊಟ್ಟಿದ್ದು, ಪ್ರವಾಸೋದ್ಯಮ ಇಲಾಖೆ ಹಾಗೂ ಜೆಎಲ್ಆರ್ ಆಸ್ತಿಗಳ ಕಡತ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.
ಹಲವು ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಇಲಾಖೆಯ ಆಸ್ತಿಗಳನ್ನು ಅತಕ್ರಮಣ ಮಾಡಲಾಗಿದೆ. ಜೊತೆಗೆ ಐಹೊಳೆ, ಪಟ್ಟದಕಲ್ಲುಗಳಂತಹ ವಿಶ್ವವಿಖ್ಯಾತ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಜನರನ್ನು ಸ್ಥಳಾಂತರ ಮಾಡಬೇಕಿದೆ. ಆ ಮೂಲಕ ಜನರ ಹಿತ ಕಾಯುವುದೂ ಸೇರಿದಂತೆ ಐತಿಹಾಸಿಕ ಸ್ಥಳಗಳ ರಕ್ಷಣೆಯನ್ನು ಇಲಾಖೆ ಮಾಡಬೇಕಿದೆ. ಆ ಕುರಿತೂ ಇಲಾಖೆ ಸಚಿವ ಆನಂದ್ ಸಿಂಗ್ ಗಮನ ಹರಿಸಲಿ. ಹೆಲಿಕ್ಯಾಪ್ಟರ್ ಒದಗಿಸುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಪ್ರವಾಸೋದ್ಯಮ ಇಲಾಖೆ ಕೊಡಲಿ ಎಂಬುದು ಆ ಪ್ರದೇಶಗಳಲ್ಲಿ ವಾಸವಾಗಿರುವ ಜನರ ಒತ್ತಾಸೆಯಾಗಿದೆ.