ಉಪ ಚುನಾವಣೆ: ಒಟ್ಟು 40 ಜನರಿಂದ ನಾಮಪತ್ರ ಸಲ್ಲಿಕೆ!
ಬೆಂಗಳೂರು, ಅ. 16: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಅ.16) ಕೊನೆಯ ದಿನವಾಗಿತ್ತು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 23 ಜನರು ನಾಮಪತ್ರ ಸಲ್ಲಿಸಿದ್ದಾರೆ. ಹಾಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ಜನರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಎಚ್. ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ ಪಕ್ಷದಿಂದ ಕೆ. ಕೃಷ್ಣಮೂರ್ತಿ, ಕರುನಾಡು ಪಾರ್ಟಿಯಿಂದ ಎಚ್ ಎಂ ಕಿಶೋರ್ ಗೌಡ ಹಾಗೂ ಎಚ್ ಎಂ ಬಾಬು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಅರವಿಂದ್ ಕೆ ಬಿಷ್ಟಪ್ಪನಾಯ್ಕನವರ್, ಆಲ್ ಇಂಡಿಯಾ ಜನರಕ್ಷಾ ಪಾರ್ಟಿಯಿಂದ ಸತೀಶ್ ರೆಡ್ಡಿ ಎಸ್, ಜೈ ವಿಜಯ ಭಾರತಿ ಪಾರ್ಟಿಯಿಂದ ಅಭಿಮಾನಿ ನರೇಂದ್ರ, ಅಖಿಲ ಭಾರತ ಹಿಂದು ಮಹಾಸಭಾ ಪಕ್ಷದಿಂದ ಶಿವಲಿಂಗಯ್ಯ ಸಿ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಎನ್ ಸಂಪತ್ತು ಹಾಗೂ 13 ಸ್ವತಂತ್ರ ಹುರಿಯಾಳುಗಳು ನಾಮಪತ್ರ ಸಲ್ಲಿಸಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿ.ಬಿ. ಜಯಚಂದ್ರ, ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಜೆಡಿಎಸ್ನಿಂದ ಅಮ್ಮಾಜಮ್ಮ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಓಬಳೇಶಪ್ಪ ಬಿ.ಟಿ, ರಾಷ್ಟ್ರೀಯ ಕಮ್ಯೂನಿಸ್ಟ್ ಪಾರ್ಟಿಯಿಂದ ಗಿರೀಶ್, ರಿಪಬ್ಲಿಕನ್ ಸೇನಾ ಪಕ್ಷದಿಂದ ಪ್ರೇಮಕ್ಕ, ರೈತ ಭಾರತ ಪಕ್ಷದಿಂದ ತಿಮ್ಮಕ್ಕ ಹಾಗೂ 10 ಸ್ವತಂತ್ರ ಹುರಿಯಾಳುಗಳು ನಾಮಪತ್ರ ಸಲ್ಲಿಸಿದ್ದಾರೆ.
Recommended Video
ನಾಳೆ (ಅ.17) ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 19 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.