ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸೂಚ್ಯಂಕ ಶೇ. 2.23 ಮಾತ್ರ: ಸುರೇಶ್ ಕುಮಾರ್
ಬೆಂಗಳೂರು, ಏ. 15: ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ 279 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5 ರ ಮಾಹಿತಿಯಂತೆ 12 ಜನ ಸಾವನ್ನಪ್ಪಿದ್ದು, 80 ಜನ ಗುಣಮುಖರಾಗಿ ಹಿಂತಿರುಗಿದ್ದಾರೆಂದು ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಹಿತಿ ಕೊಟ್ಟಿರುವ ಅವರು, ಉಳಿದ 187 ಪ್ರಕರಣಗಳಲ್ಲಿ 184 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆಯೆಂಬ ಮಾಹಿತಿ ನೀಡಿದ ಸಚಿವರು 03 ಜನರನ್ನು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.
ನಿನ್ನೆ ಸಂಜೆ 5 ಯಿಂದ ಇವತ್ತಿನವರೆಗೆ ಒಟ್ಟಾರೆ 19 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ, ರಾಜ್ಯಾದ್ಯಂತ ಒಟ್ಟು 13,182 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ ಎಂದು ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಾಸಿಟಿವ್ ಸೂಚ್ಯಂಕ ಕೇವಲ ಶೇ. 2.23 ಮಾತ್ರ
ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 12,483 ಮಾದರಿಗಳ ಪೈಕಿ 279 ಮಾದರಿಗಳು ಖಚಿತಗೊಂಡಿದ್ದು, ಪಾಸಿಟಿವ್ ಸೂಚ್ಯಂಕ ಕೇವಲ ಶೇಕಡಾ 2.23ರಷ್ಟು ಮಾತ್ರವಿದೆ. ಇದೇ ರೀತಿ ಗುಜರಾತ್ ರಾಜ್ಯದಲ್ಲಿ 4.63%, ಮಹಾರಾಷ್ಟ್ರದಲ್ಲಿ 6.7%, ಕೇರಳ ರಾಜ್ಯದಲ್ಲಿ 2.73% ಪ್ರಕರಣಗಳು ಖಚಿತವಾಗಿದ್ದಾವೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಸೇರಿದಂತೆ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಇದು ಕಡಿಮೆ ಪ್ರಮಾಣದಲ್ಲಿದೆಯೆಂದರು. ರಾಷ್ಟ್ರದ ಸೂಚ್ಯಂಕ 4.3% ಆಗಿದ್ದು, ಇದಕ್ಕಿಂತಲೂ ಕರ್ನಾಟಕದ ಸೂಚ್ಯಂಕ ಕಡಿಮೆಯಿದೆ ಎಂದರು. ಅಮೆರಿಕ ದೇಶದಲ್ಲಿ ಈ ಸೂಚ್ಯಂಕ 19% ಆಸುಪಾಸಿನಲ್ಲಿ ಇದೆಯೆಂಬ ಮಾಹಿತಿಯನ್ನ ಸಹ ಸಚಿವರು ನೀಡಿದರು.
ವೈದ್ಯಕೀಯ ತಜ್ಞರನ್ನು ಒಳಗೊಂಡ ಜಿಲ್ಲಾ ಸಮಿತಿ
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಕೋವಿಡ್ 19 ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕಿತರು ಆಸ್ಪತ್ರೆ ಅಥವಾ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದ ನಂತರದ ಫಾಲೋಅಪ್ ಕುರಿತಂತೆ ಹೊಸ ಸಲಹಾ ಸೂಚಿ ಸುತ್ತೋಲೆಯನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು ಎಲ್ಲಾ ತೀವ್ರತರ ಉಸಿರಾಟ ಸೋಂಕಿನ ಪ್ರಕರಣಗಳನ್ನು ಕೋವಿಡ್ ಕಡ್ಡಾಯ ಪರೀಕ್ಷೆಗೆ ಒಳಪಡಿಸಲು ಸರ್ಕಾರವು ನಿರ್ಣಯಿಸಿದೆ ಎಂಬ ಅಂಶವನ್ನು ಸಚಿವರು ವಿವರಿಸಿದರು.
ಅದೇ ರೀತಿ ಇನ್ನು ಮುಂದೆ ಕೋವಿಡ್ ಪ್ರಕರಣಗಳ ಪತ್ತೆ ಹಚ್ಚುವಿಕೆ, ತಡೆಗಟ್ಟುವಿಕೆ ಸೇರಿದಂತೆ ಸಲಹೆ ಸೂಚನೆಗಳನ್ನು ನೀಡಲು ರಾಜ್ಯಾದ್ಯಂತ ವೈದ್ಯಕೀಯ ತಜ್ಞರನ್ನು ಒಳಗೊಂಡ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆಯೆಂದು ಸಚಿವರು ವಿವರಿಸಿದರು.
ರಮ್ಜಾನ್ ಆಚರಣೆಗೆ ವಿಶೇಷ ಮಾರ್ಗಸೂಚಿ
ಇಮ್ರಾತ್ ಇ ಷರಿಯಾ ಕರ್ನಾಟಕ ಸಂಘಟನೆಯು ಮುಸಲ್ಮಾನ ಬಾಂಧವರಿಗೆ ಲಾಕ್ಡೌನ್ ಹಿನ್ನೆಲೆಯಲ್ಲಿ ರಮ್ಜಾನ್ ತಿಂಗಳ ಉಪವಾಸದ ಸಂದರ್ಭದಲ್ಲಿ ಅನುಸರಿಸಬೇಕಾದ ವಿಶೇಷ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಎಲ್ಲ ಮುಸಲ್ಮಾನ ಬಾಂಧವರು ತಮ್ಮ ಮನೆಗಳಲ್ಲೇ ಇದ್ದುಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಬೇಕು.
ನಿಯಮಗಳ ಅನುಷ್ಠಾನದ ವಿಷಯದಲ್ಲಿ ಅಧಿಕಾರಿಗಳಿಗೆ ಇಮ್ರಾತ್ ಇ ಷರಿಯಾ ಕರ್ನಾಟಕ ಸಂಘಟನೆಯ ಮಾರ್ಗಸೂಚಿಗಳನ್ನು ಪಾಲಿಸಿ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿರುವುದನ್ನು ಎಲ್ಲ ಮುಸಲ್ಮಾನ ಬಾಂಧವರು ಗಮನಿಸಬೇಕೆಂದು ಸಚಿವರು ಮನವಿ ಮಾಡಿದರು.
ಕೋವಿಡ್ ಪರಿಹಾರ ನಿಧಿಗೆ ದೇಣಿಗೆ
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಕಳೆದ ಎರಡು ದಿನಗಳಲ್ಲಿ ರೂ. 87 ಲಕ್ಷ ರೂ. ಸ್ವೀಕೃತವಾಗಿದ್ದು, ಒಟ್ಟಾರೆ 138.26 ಕೋಟಿ ರೂ. ಗಳು ಇಲ್ಲಿಯವರೆಗೆ ಸ್ವೀಕೃತವಾಗಿದೆ ಎಂದು ಸುರೇಶಕುಮಾರ್ ಹೇಳಿದ್ದಾರೆ.