ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟನೆ ವಿಫಲತೆಗೆ 5 ಕಾರಣ
ಬೆಂಗಳೂರು, ನವೆಂಬರ್ 3 : ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ' ತುಮಕೂರು ತಲುಪಿದೆ. ಬೆಂಗಳೂರಲ್ಲಿ ಗುರುವಾರ ನಡೆದ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಜನ ಸೇರಲಿಲ್ಲ ಎಂಬುವುದು ಒಂದು ಕಡೆ, ಸಮಾವೇಶ ಸಂಘಟನೆಯಲ್ಲಿಯೇ ಲೋದೋಷಗಳಿತ್ತು ಎಂಬ ವಾದ ಮತ್ತೊಂದು ಕಡೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಗುರುವಾರ ಚಾಲನೆ ಕೊಟ್ಟಿದ್ದಾರೆ. ಬಿಜೆಪಿಯ ನಿರೀಕ್ಷೆಯಂತೆ 114 ವಿಧಾನಸಭಾ ಕ್ಷೇತ್ರಗಳಿಂದ 1 ಲಕ್ಷ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಸುಮಾರು 3 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳಬೇಕಿತ್ತು.
ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು?
ಪಕ್ಷದ ವಲಯದಲ್ಲಿಯೇ ಸಮಾವೇಶ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮತ್ತೊಂದು ಕಡೆ ಅಮಿತ್ ಶಾ, ಕರ್ನಾಟಕ ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯೆಲ್ ಅವರು ಕಾರ್ಯಕ್ರಮ ಸಂಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ಸರ್ವ ದಾಖಲೆ ಮುರಿದ ಸಿದ್ದರಾಮಯ್ಯ : ಅಮಿತ್ ಶಾ ವಾಗ್ದಾಳಿ
ಮಾಜಿ ಸಚಿವ ಆರ್.ಅಶೋಕ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಮಾವೇಶ ಸಂಘಟನೆಯ ಹೊಣೆ ವಹಿಸಲಾಗಿತ್ತು. ಈ ಇಬ್ಬರು ನಾಯಕರ ಸಮನ್ವಯದ ಕರತೆಯಿಂದಾಗಿ ಸಮಾವೇಶ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ...
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಕಾರ್ಯಕರ್ತರು ಬರದಂತೆ ಅಡ್ಡಿ ಪಡಿಸಿದರು
ತುರುವೆಕೆರೆಯಲ್ಲಿ ಶುಕ್ರವಾರ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಸಮಾವೇಶಕ್ಕೆ ಜನರು ಬರದಂತೆ ವಿವಿಧ ಜಿಲ್ಲೆಗಳಲ್ಲಿ ತಡೆಯಲಾಯಿತು. ಇಲ್ಲಿಗೆ ಆಗಮಿಸಿದ ಜನರ ಬಿಸಿಲಿನ ಕಾರಣ ಮರದ ನೆರಳಿನಲ್ಲಿ ಕುಳಿತಿದ್ದರು. ಸಮಾವೇಶ ವಿಫಲವಾಗಿಲ್ಲ' ಎಂದು ಹೇಳಿದರು.
ಉಸ್ತುವಾರಿ ವಹಿಸಿದ ಬಗ್ಗೆಯೇ ಅಸಮಾಧಾನವಿತ್ತು
ಸಮಾವೇಶ ಸಂಘಟನೆಯ ಉಸ್ತುವಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಿದ ಬಗ್ಗೆಯೇ ಕೆಲವು ನಾಯಕರಲ್ಲಿ ಅಸಮಾಧಾನವಿತ್ತು. ಆದ್ದರಿಂದ, ನಾಯಕರು ಸಮಾವೇಶಕ್ಕೆ ತಮ್ಮ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತರಲಿಲ್ಲ. ಸ್ವತಃ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಹೆಚ್ಚಿನ ಕಾರ್ಯಕರ್ತರು ಆಗಮಿಸಲಿಲ್ಲ ಎಂಬ ಆರೋಪವೂ ಇದೆ.
12 ಶಾಸಕರು, 100 ಸದಸ್ಯರು
ಬೆಂಗಳೂರು ನಗರದಲ್ಲಿ 12 ಬಿಜೆಪಿ ಶಾಸಕರು, 100 ಬಿಬಿಎಂಪಿ ಸದಸ್ಯರಿದ್ದಾರೆ. ಆದರೆ, ನಗರದ ವ್ಯಾಪ್ತಿಯಿಂದಲೇ ನಿರೀಕ್ಷಿತ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಲಿಲ್ಲ. ಸ್ವತಃ ಆರ್.ಅಶೋಕ್ ಅವರ ಕ್ಷೇತ್ರ ಪದ್ಮನಾಭ ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿಲ್ಲ ಎಂಬುದು ಆರೋಪವಾಗಿದೆ.
ಸಮಾವೇಶದಿಂದ ದೂರವಿಟ್ಟರು
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಂಘಟನಾ ಚತುರ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ಸಮಾವೇಶದ ಸಂಘಟನೆಯಿಂದ ಅವರನ್ನು ದೂರವಿಡಲಾಗಿತ್ತು. ಆದ್ದರಿಂದ, ಸಮಾವೇಶ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ ಎಂಬ ಮಾತುಗಳಿವೆ.
ಹಲವಾರು ಅವ್ಯವಸ್ಥೆಗಳು
ಸಮಾವೇಶಕ್ಕೆ ಆಗಮಿಸಿದ ಹಲವು ಕಾರ್ಯಕರ್ತರು ವಾಪಸ್ ಹೋದರು. ಕಾರ್ಯಕರ್ತರನ್ನು ಅಮಿತ್ ಶಾ ಅವರು ಆಗಮಿಸುವ ತನಕ ಹಿಡಿದಿಟ್ಟುಕೊಳ್ಳಲು ನಾಯಕರು ವಿಫಲರಾದರು. ಕಾರ್ಯಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿರಲಿಲ್ಲ ಎಂಬ ಆರೋಪಗಳು ಇವೆ.