ಲಿಂಗಾಯತವೋ ವೀರಶೈವವೋ? ಹೋರಾಟದ ಆರಂಭದಲ್ಲೇ ಭಿನ್ನಾಭಿಪ್ರಾಯ
ಗದಗ, ಆಗಸ್ಟ್ 4 : ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಅಂತ ಒಂದು ಕಡೆ, ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ ಆಗಬೇಕು ಎಂದು ಮತ್ತೊಂದು ಕಡೆ. ಈ ತಿಕ್ಕಾಟದಲ್ಲಿ ತೋಂಟದ ಸ್ವಾಮೀಜಿ ಮನವೊಲಿಸಲು ಗುರುವಾರ ತೆರಳಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಎನ್.ತಿಪ್ಪಣ್ಣ ಬರಿಗೈಲಿ ವಾಪಸ್ ಆಗಿದ್ದಾರೆ.
'ವೀರಶೈವ-ಲಿಂಗಾಯತ' ಧರ್ಮಕ್ಕಾಗಿಯೇ ಹೋರಾಟ: 'ಮಹಾಸಭೆ' ಘೋಷಣೆ
ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬುದು ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ನಿಲುವು. ವೀರಶೈವ ಲಿಂಗಾಯತ ಧರ್ಮಕ್ಕೆ ಬೇಡಿಕೆ ಸಲ್ಲಿಸುವ ಕುರಿತು ಇವರಿಬ್ಬರು ಬೆಂಬಲ ಕೇಳುವುದಕ್ಕೆ ಬಂದಿದ್ದು ಫಲ ನೀಡಿಲ್ಲ. ಈ ಇಬ್ಬರು ನಾಯಕರ ಮಾತುಗಳನ್ನು ಕೇಳಿಸಿಕೊಳ್ಳಲು ಸುತಾರಾಂ ಒಪ್ಪದ ಸ್ವಾಮೀಜಿ, 'ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ' ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಮೊದಲು ಮಾತು ಆರಂಭಿಸಿದ ಶಾಮನೂರು ಶಿವಶಂಕರಪ್ಪ, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ತೀರ್ಮಾನಕ್ಕೆ ಬೆಂಬಲಿಸಿ. ಸಮುದಾಯದಲ್ಲಿ ಗೊಂದಲದ ಹೇಳಿಕೆಗಳು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ
ಶಾಮನೂರು ಅವರ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಸ್ವಾಮೀಜಿ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ. ಶರಣರ ಮೂಲ ವಚನಗಳನ್ನು ಪುರೋಹಿತಶಾಹಿಗಳು ತಮ್ಮ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹಲವು ಖೊಟ್ಟಿ ವಚನಗಳನ್ನು ಸೇರಿಸಿದ್ದಾರೆ ಎಂದಿದ್ದಾರೆ.
ಯಾವುದೇ ಕಾಲಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ
ಹೀಗೆ ಮಾಡಿ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂದು ಗೊಂದಲ ಸೃಷ್ಟಿಸಿದ್ದಾರೆ. ಇದನ್ನು ಯಾವುದೇ ಕಾಲಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಕೆಲ ಸ್ವಾಮೀಜಿಗಳ ಹಿತ ಕಾಪಾಡುತ್ತಿದೆ
'ಆಗಮ, ವೇದ-ಉಪನಿಷತ್ತುಗಳಿಂದ ಕೂಡಿದ ವೀರಶೈವ ಧರ್ಮ ಯಾವತ್ತೂ ಬಸವಣ್ಣನವರನ್ನು ಒಪ್ಪುವುದಿಲ್ಲ. ಅಲ್ಲದೆ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತರ ಹಿತ ಕಾಪಾಡುವ ಬದಲು ಕೆಲವು ಸ್ವಾಮೀಜಿಗಳ ಹಿತ ಕಾಯಲು ಮಾತ್ರ ಶ್ರಮಿಸುತ್ತಿದೆ' ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಭೇಟಿ ನಂತರ ಹೊರ ಬಂದ ಶಾಮನೂರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೆ, ಎಲ್ಲರನ್ನೂ ಭೇಟಿ ಮಾಡಿ ಮನವೊಲಿಸುತ್ತೇವೆ ಎಂದಷ್ಟೇ ಹೇಳಿದರು.
ರಾಜ್ಯ ಸರಕಾರಕ್ಕೆ ಬಸವ ತತ್ವದ ಮೇಲೆ ನಂಬಿಕೆ
ಈ ಬೆಳವಣಿಗೆಯ ಮಧ್ಯೆಯೇ ಸಚಿವ ವಿನಯ್ ಕುಲಕರ್ಣಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹಾಗೂ ಹೋರಾಟದ ಕುರಿತು ಸ್ವಾಮೀಜಿ ಜತೆ ಸುದೀರ್ಘವಾಗಿ ಚರ್ಚಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಬಸವ ತತ್ವದ ಮೇಲೆ ನಂಬಿಕೆ ಇದೆ. ಈ ಕಾರಣದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸಲಾಗುವುದು. ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.