ಆಗಸ್ಟ್ 02: ಕರ್ನಾಟಕದ ಜಿಲ್ಲೆಗಳ ಸುದ್ದಿ ಸಂಗಮ
ಕರ್ನಾಟಕ, ಆಗಸ್ಟ್ 02: ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಕೊಡಗಿನಲ್ಲಿ ಕಕ್ಕಡ ಮಾಸದ ಸಂಭ್ರಮ
ಆಟಿ ಅಥವಾ ಕಕ್ಕಡ ಮಾಸದ 18ನೇ ದಿನ ಆಗಸ್ಟ್ 3. ಕಕ್ಕಡ ಆರಂಭವಾಗಿ 18 ದಿನ ತುಂಬುತ್ತಿದ್ದಂತೆಯೇ 18 ಔಷಧೀಯ ಗುಣಗಳನ್ನು ಹೊಂದಿರುವ ಮದ್ದು (ಮಧುಬನ) ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷವಾಗಿದೆ.
ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಿಸುತ್ತದೆ. ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಹೇಗೋ, ಹಾಗೇ ಕೊಡಗಿನಲ್ಲಿ ಕಕ್ಕಡ 18 ಕೂಡ ಒಂದು ವಿಶಿಷ್ಟ ಆಚರಣೆಯಾಗಿದೆ. ಹೇಳಿ ಕೇಳಿ ಹಸಿರ ಕಾನನದ ಗೂಡಾದ ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನೂ ಕೊರತೆ ಇಲ್ಲ.
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ ಚಳಿ ಗಾಳಿಗೆ ಮಾನವನ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಹಿರಿಯರ ನಂಬಿಕೆ.
ಕಾಫಿನಾಡಿಗೆ ಪ್ರವಾಸ ಸೂಕ್ತವಲ್ಲ ಜಿಲ್ಲಾಧಿಕಾರಿ ಸಲಹೆ
"ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರವಾಸಿಗರ ಹಿತದೃಷ್ಟಿಯಿಂದ ಪ್ರಸ್ತುತ ಸನ್ನಿವೇಶದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸೂಕ್ತವಲ್ಲ,'' ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸಲಹೆ ನೀಡಿದ್ದಾರೆ.
"ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ರೀತಿಯ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯು ಪ್ರವಾಸಿಗರನ್ನು ಆಕರ್ಷಿಸುವ ತಾಣಗಳನ್ನು ಹೊಂದಿದ್ದು, ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಇತ್ತೀಚೆಗೆ ಕಂಡುಬಂದಿದೆ. ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಸೋಂಕಿನ ಹರಡುವಿಕೆ ಸಹಜವಾಗಿ ಹೆಚ್ಚಾಗುವ ಸಾಧ್ಯತೆಗಳಿವೆ,'' ಎಂದು ತಿಳಿಸಿದ್ದಾರೆ
ಬಿಎಸ್ವೈ ನೆನೆದು ರೇಣುಕಾಚಾರ್ಯ ಭಾವುಕ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ನೆನೆದು ಶಾಸಕ ಎಂ.ಪಿ ರೇಣುಕಾಚಾರ್ಯ ಭಾವುಕರಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ಸಾಮರ್ಥ್ಯ ಸೌಧದಲ್ಲಿ ನಡೆಯಿತು. ಸಭೆಯೊಂದರಲ್ಲಿ ಯಡಿಯೂರಪ್ಪ ಸಾಧನೆಯನ್ನು ಶಾಸಕ ರೇಣುಕಾಚಾರ್ಯ ಕೊಂಡಾಡಿದರು.
ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಅವಳಿ ತಾಲೂಕಿಗೆ ಯಡಿಯೂರಪ್ಪ ನೀಡಿದ ಕೊಡುಗೆಯನ್ನು ಸ್ಮರಿಸಿದ ರೇಣುಕಾಚಾರ್ಯ, ಯಡಿಯೂರಪ್ಪನವರು ಅವಳಿ ತಾಲೂಕುಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ನೀಡಿದ್ದಾರೆ. ಅವರು ನೀಡಿದ ಕೊಡುಗೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ರೇಣುಕಾಚಾರ್ಯ ಗದ್ಗದಿತರಾದರು.
ಯಡಿಯೂರಪ್ಪನವರ ಗರಡಿಯಲ್ಲಿ ನಾನು, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಶಾಸಕರು ಬೆಳೆದು ಬಂದಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಕೇರಳ- ಮೈಸೂರು ಗಡಿ ಬಿಗಿ ಬಂದೋಬಸ್ತ್
ಕೊರೊನಾ 3ನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಕಾರಣ, ಜಿಲ್ಲೆಯ ಗಡಿ ಚೆಕ್ಪೋಸ್ಟ್ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು.
ಕೇರಳದಿಂದ ಮೈಸೂರು ಗಡಿ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ. 72 ಗಂಟೆ ಒಳಗಿನ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹಾಜರುಪಡಿಸಬೇಕು. ಪ್ರತಿನಿತ್ಯ ಎಚ್.ಡಿ. ಕೋಟೆ ತಾಲೂಕಿನ ಬಾವಲಿ ಚೆಕ್ಪೋಸ್ಟ್ನಲ್ಲಿ 50 ಲಾರಿ, 100 ಕಾರು, ಬೈಕ್ ಹಾಗೂ 5 ದಿನಸಿಯನ್ನೊಳಗೊಂಡ ಲಾರಿಗಳು ಸಂಚರಿಸುತ್ತಿವೆ. ಇವುಗಳ ಪರಿಶೀಲನೆಯನ್ನು ಡಿಎಸ್ಪಿ, ಸಬ್ ಇನ್ಸ್ಪೆಕ್ಟರ್, ಆರೋಗ್ಯ, ಕಂದಾಯ ಅಧಿಕಾರಿಗಳ ನಡೆಸುತ್ತಿದೆ. ಜಿಲ್ಲೆಯಲ್ಲಿ ನೈಟ್ ಬೀಟ್ ಪೊಲೀಸ್ ವ್ಯವಸ್ಥೆ ಚುರುಕಾಗಿದೆ ಎಂದು ಹೇಳಿದರು.
ಸಿ.ಟಿ. ರವಿ ಬಾಗಿನ ಅರ್ಪಣೆ
ಚಿಕ್ಕಮಗಳೂರು ನಗರದ ಹಲವು ವಾರ್ಡ್ಗಳಿಗೆ ಕುಡಿಯುವ ನೀರು ಒದಗಿಸುವ ಹಿರೇಮಗಳೂರು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ. ರವಿ ದಂಪತಿ ಸಮೇತರಾಗಿ ಸೋಮವಾರ ಕೆರೆಗೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳನ್ನು ಎಸೆದು ಪರಿಸರಕ್ಕೆ ಹಾನಿಯುಂಟಾಗುವಂತೆ ನಡೆದುಕೊಳ್ಳಬಾರದು ಎಂದು ವಿನಂತಿಸಿದರು. ಪ್ರವಾಸಿಗರು ಅತಿಥಿಗಳಿದ್ದಂತೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಯಾವುದೇ ಸಮಸ್ಯೆ ಇಲ್ಲ. ಆದರೆ ಸ್ಥಳೀಯ ಆಡಳಿತದೊಟ್ಟಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.
ಧಾರವಾಡಕ್ಕೆ ಸಚಿವ ಸ್ಥಾನ ನೀಡುವಂತೆ ಶೆಟ್ಟರ್ ಒತ್ತಾಯ
ಧಾರವಾಡ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು. ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಬೇಡ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ವಿನಂತಿಸಿದ್ದೇನೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ವಿವಿಧ ಇಲಾಖೆಯ ಸಚಿವನಾಗಿ ಅಧಿಕಾರದಲ್ಲಿ ಇದ್ದುದ್ದು ಕೆಲವೇ ತಿಂಗಳು ಮಾತ್ರ. 10 ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದೆ. ಪೂರ್ಣಾವಧಿ ಅಧಿಕಾರದಲ್ಲಿ ಇದ್ದಿದ್ದರೆ ಸಂಬಂಧಪಟ್ಟ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆ ಎಂದರು.
ಬೀದರ್ನಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದವರ ಬಂಧನ
500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಬೀದರ್ ಪೊಲೀಸರು ಭೇದಿಸಿದ್ದು, ರಾಕೇಶ್ ಹಾಗೂ ಶರತ್ಕುಮಾರ ಬಂಧಿತ ಆರೋಪಿಗಳಾಗಿದ್ದಾರೆ.
500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಈ ಹಿಂದೆ ನಾಲ್ಕು ಜನ ಆರೋಪಿಗಳಾದ ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ್, ಜವದ ಬಂಧನವಾಗಿತ್ತು. ಇಂದು ಇಬ್ಬರನ್ನು ಬಂಧನ ಮಾಡುವ ಮೂಲಕ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಡಿಸಿಎಂ ಕೊಟ್ಟರೂ ಓಕೆ ಎಂದ ಕತ್ತಿ
ಸಿಎಂ ಸ್ಥಾನ ಬಿಟ್ಟು ಈಗ ಡಿಸಿಎಂ ಆಗುವ ಆಶಯವನ್ನು ಹುಕ್ಕೇರಿ ಬಿಜೆಪಿ ಶಾಸಕ, ಮಾಜಿ ಸಚಿವ ಉಮೇಶ್ ಕತ್ತಿ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಆಗಬೇಕೆಂದು ಬಯಸಿಲ್ಲ, ಅದರೆ ಅವಕಾಶ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಆದರೆ ಸಚಿವನಾಗುವುದು ನಿಶ್ಚಿತ ಎಂದು ಹೇಳಿದ್ದಾರೆ.
Recommended Video
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ತಿ, ನೂರಕ್ಕೆ ನೂರರಷ್ಟು ನಾನು ಸಚಿವನಾಗುತ್ತೇನೆ ಎಂಬ ವಿಶ್ವಾಸವಿದೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರು ಜಗಳವಾಡುವುದು ಸ್ವಾಭಾವಿಕ. ಪೂರ್ಣ ಅವಧಿಯನ್ನು ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಕೊಡುತ್ತಾರೆ. ಮುಂದೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.