ಮಳೆಯಬ್ಬರಕ್ಕೆ ಗುಡ್ಡ ಕುಸಿತ: ಕಳಸ -ಮಂಗಳೂರು ಸಂಚಾರ ಬಂದ್
ಚಿಕ್ಕಮಗಳೂರು, ಆಗಸ್ಟ್.19: ಮಲೆನಾಡಿನಲ್ಲಿ ಗುಡ್ಡ ಕುಸಿತ ಹೆಚ್ಚಾಗತೊಡಗಿದೆ. ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ಗುಡ್ಡ ಕುಸಿತಗೊಂಡಿದ್ದು, ಸಂಚಾರ ಬಂದ್ ಮಾಡಲಾಗಿದೆ. ಇದೀಗ ಕಳಸ - ಮಂಗಳೂರು ಸಂಚಾರ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಕುದುರೆಮುಖ ಸಮೀಪ ಗುಡ್ಡ ರಸ್ತೆಗೆ ಕುಸಿದು ಬೀಳುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಾಹನ ಸಂಚಾರ ಮಾಡದಂತೆ ತಡೆಯುತ್ತಿದ್ದಾರೆ.
ಮಲೆನಾಡಲ್ಲಿ ಅಲ್ಲಲ್ಲಿ ಮಳೆ, ಅಪಾಯದ ಮಟ್ಟ ಮೀರಿದ ಹೊನ್ನಮ್ಮನಹಳ್ಳ ಫಾಲ್ಸ್
ಚಾರ್ಮಾಡಿ ಘಾಟ್ ನಲ್ಲಿ ಲಾರಿಗಳಿಗೆ ನಿಷೇಧ ಹಿನ್ನೆಲೆಯಲ್ಲಿ ಶನಿವಾರದಿಂದ ಲಾರಿ ಹಾಗೂ ಭಾರೀ ವಾಹನಗಳು ಈ ಮಾರ್ಗವಾಗಿ ಮಂಗಳೂರಿಗೆ ತೆರೆಳುತ್ತಿದ್ದವು. ಈಗ ಕುದುರೆಮುಖ ಮಾರ್ಗ ಕೂಡ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರಲ್ಲಿ ಆತಂಕ ಹೆಚ್ಚಿದೆ.
ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಇಂದು ಭಾನುವಾರ ಮನೆಯ ಪಕ್ಕದಲ್ಲಿಯೇ ಗುಡ್ಡ ಕುಸಿದಿದೆ. ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಎಂಬ ಮೂರು ಗ್ರಾಮಗಳಲ್ಲಿ ಮನೆ ಪಕ್ಕವೇ ಗುಡ್ಡ ಕುಸಿದಿದ್ದು, ಗುಡ್ಡದ ಮಣ್ಣು ಮನೆಗೆ ಅಪ್ಪಳಿಸಿದೆ. ಇದರಿಂದ ಮನೆಯವರಲ್ಲಿ ಆತಂಕ ಹೆಚ್ಚಿದೆ.