34 ದಿನದಲ್ಲಿ 57,135 ಕಿ.ಮೀ ಸಂಚರಿಸಿ ಗೆಲುವು ತಂದುಕೊಟ್ಟ ಅಮಿತ್ ಶಾ
ಬೆಂಗಳೂರು, ಮೇ 17 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಅಮಿತ್ ಶಾ ಅವರ ಪಾತ್ರವೂ ಮುಖ್ಯವಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂಬುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತೀರ್ಮಾನವಾಗಿತ್ತು. ಆದ್ದರಿಂದ, ಯಾವುದೇ ಕಾರಣಕ್ಕೂ ಕರ್ನಾಟಕ ಕೈ ತಪ್ಪಬಾರದು ಎಂದು ಅವರು ತಂತ್ರ ರೂಪಿಸಿದ್ದರು.
24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಹೊಣೆಯನ್ನು ಬಿ.ಎಸ್.ಯಡಿಯೂರಪ್ಪ ಹೊತ್ತುಕೊಂಡಿದ್ದರು. ನವ ಕರ್ನಾಟಕ ಪರಿವರ್ತನಾ ಯಾತ್ರೆ ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದರು. ಈಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಮಿತ್ ಶಾ ಅವರ ಯಡಿಯೂರಪ್ಪ ಬೆನ್ನಿಗೆ ನಿಂತು ಪಕ್ಷವನ್ನು ಗೆಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಗೆ 5 ಕಾರಣಗಳು!
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 34 ದಿನಗಳ ಕಾಲ ಕರ್ನಾಟಕದಲ್ಲಿ ಸಂಚಾರ ನಡೆಸಿದರು. 57,135 ಕಿ.ಮೀ.ಗಳನ್ನು ಸುತ್ತಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದರು. ಅಮಿತ್ ಶಾ ಮಾಡಿದ ತಂತ್ರವೇನು? ಇಲ್ಲಿದೆ ವಿವರಗಳು...
59 ಸಮಾವೇಶ ಉದ್ದೇಶಿಸಿ ಭಾಷಣ
ಒಟ್ಟು 34ದಿನಗಳ ಕಾಲ ಅಮಿತ್ ಶಾ ಅವರು ಕರ್ನಾಟಕದಲ್ಲಿ ಪ್ರವಾಸ ಮಾಡಿದರು. ಅವರು ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. 34 ದಿನಗಳಲ್ಲಿ 59 ಕಡೆ ಸಮಾವೇಶಗಳನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.
28 ಜಿಲ್ಲೆಗಳಲ್ಲಿ ಸಂಚಾರ ನಡೆಸಿದ ಅಮಿತ್ ಶಾ ಅವರು 57,135 ಕಿ.ಮೀ.ಗಳನ್ನು ಪ್ರಯಾಣಿಸಿದ್ದಾರೆ. ರಾಜ್ಯದ ತುಂಬಾ ಸಂಚಾರ ನಡೆಸಿ, ಕಾರ್ಯಕರ್ತರಿಗೆ ಹುರುಪು ತುಂಬಿ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಮಾಡಿದರು.
ಮಠ, ದೇವಾಲಯಕ್ಕೆ ಭೇಟಿ
ಉತ್ತರ ಪ್ರದೇಶದಲ್ಲಿ ನಡೆದ ಎರಡು ಉಪ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿತ್ತು. ಆದ್ದರಿಂದ, ಕರ್ನಾಟಕದಲ್ಲಿ ಅಮಿತ್ ಶಾ ಟೆಂಪಲ್ ರನ್ ನಡೆಸಿದರು. ವಿವಿಧ ಮಠ, ದೇವಾಲಯಗಳಿಗೆ ಭೇಟಿ ನೀಡಿದರು. ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಜೊತೆ ಚರ್ಚೆ ನಡೆಸಿದರು.
ಅಮಿತ್ ಶಾ ತುಮಕೂರಿನ ಸಿದ್ದಗಂಗಾ ಮಠ, ಶೃಂಗೇರಿ ಮಠ, ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು. ಕೂಡಲಸಂಗಮಕ್ಕೆ ಭೇಟಿ ನೀಡಿದ್ದರು. ದಾವಣಗೆರೆಯ ದುರ್ಗಾಂಬ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು.
ಬೂತ್ ಮಟ್ಟಕ್ಕೆ ಹೋಗಿ
ಅಮಿತ್ ಶಾ ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯದ ಚುನಾವಣಾ ಪ್ರಚಾರದ ಹಿಡಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಬೂತ್ ಮಟ್ಟಕ್ಕೆ ಹೋಗಿ ಪ್ರಚಾರ ನಡೆಸಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಗೆಲ್ಲುವುದು ಅಮಿತ್ ಶಾ ಅವರು ಹಳೆಯ ತಂತ್ರಗಾರಿಕೆ. ಅದನ್ನು ಅವರು ಕರ್ನಾಟಕದಲ್ಲಿಯೂ ಅನುಸರಿಸಿದರು. ಪೇಜ್ ಪ್ರಮುಖ್ಗಳನ್ನು ನೇಮಿಸಿ ಪ್ರತಿ ಬೂತ್ನಲ್ಲಿಯೂ ಪಕ್ಷಕ್ಕೆ ಮತ ಬರುವಂತೆ ಮಾಡಿದರು.
ಕ್ಷೇತ್ರಕ್ಕೊಂದು ಪ್ರಣಾಳಿಕೆ
ಬಿಜೆಪಿ ಗೆಲುವಿನಲ್ಲಿ ಚುನಾವಣಾ ಪ್ರಣಾಳಿಕೆಗಳ ಪಾತ್ರವೂ ಮುಖ್ಯವಾದದ್ದು. ರಾಜ್ಯಕ್ಕೆ ಒಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷ, ಕ್ಷೇತ್ರಕ್ಕೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಜನರಿಗೆ ಹಲವಾರು ಭರವಸೆಗಳನ್ನು ನೀಡಿತು.
ಅಮಿತ್ ಶಾ ಅವರು ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದೇವೆ ಎಂದು ಸಮಾವೇಶಗಳಲ್ಲಿ ಜನರಿಗೆ ತಿಳಿಸಿದರು. ಪ್ರಣಾಳಿಕೆಯೂ ಪಕ್ಷದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.