ಲಿಂಗಾಯತ ಪ್ರತ್ಯೇಕ ಧರ್ಮದ ಸಿದ್ದು ದಾಳಕ್ಕೆ ದಂಗಾದರೇ ಅಮಿತ್ ಶಾ?
Recommended Video
ಬೆಂಗಳೂರು, ಮಾರ್ಚ್ 24: ಕರ್ನಾಟದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳೂ ಬುಡಮೇಲಾಗಿವೆಯಾ..?
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚುನಾವಣೆಗೆ ಕೆಲವು ವಾರಗಳಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಉರುಳಿಸಿದ ದಾಳ ಸ್ವತಃ ಅಮಿತ್ ಶಾರನ್ನೂ ಕಂಗಾಲು ಮಾಡಿದೆಯಾ? ಅಷ್ಟಿಲ್ಲದಿದ್ದರೆ ಹೀಗೆ ತರಾತುರಿಯಲ್ಲಿ ರಾಜ್ಯದ ಲಿಂಗಾಯತ ಮಠಗಳಿಗೆ ಭೇಟಿ ನೀಡುವುದಕ್ಕೆ ಶಾ ದೌಡಾಯಿಸುತ್ತಿದ್ದರೆ..?
ಲಿಂಗಾಯತ ಪ್ರತ್ಯೇಕ ಧರ್ಮ: SC ಗಳಿಗಂತೂ ಸಿಹಿಸುದ್ದಿಯಲ್ಲ..!
ಇಂಥ ಹಲವು ಪ್ರಶ್ನೆಗಳು ಸದ್ಯಕ್ಕೆ ರಾಜಕೀಯ ವಿಶ್ಲೇಷಕರ ಬಾಯಲ್ಲಿ ಕೇಳಿಬರುತ್ತಿವೆ. ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಪ್ರತ್ಯೇಕ ಧರ್ಮದಂಥ ಬೇಡಿಕೆಗಳು ಚುನಾವಣೆಯ ಮೇಲೆ ಬೀರು ಪರಿಣಾಮವನ್ನು ವಿವರಿಸುವುದು ಕಷ್ಟ. ಸಂಪೂರ್ಣ ಫಲಿತಾಂಶವನ್ನು ಅನೂಹ್ಯ ರೀತಿಯಲ್ಲಿ ಬುಡಮೇಲು ಮಾಡಬಲ್ಲ ತಾಕತ್ತು ಭಾರತದಲ್ಲಿ ಜಾತಿಗೆ, ಧರ್ಮಕ್ಕಿದೆ! ಅದು ಕರ್ನಾಟಕದ ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲದ್ದೇನಲ್ಲ!
ಅಮಿತ್ ಶಾ ಭೇಟಿ
ಪ್ರತ್ಯೇಕ ಲಿಂಗಾಯತ ಧರ್ಮದ ನಿರ್ಧಾರ ಮಾಡುವುದು, ಬಿಡುವುದು ಸದ್ಯಕ್ಕೆ ಕೇಂದ್ರದ ಕೈಯಲ್ಲಿದೆ. 'ಓಕೆ ಅಂದರೂ ಕಷ್ಟ, ಇಲ್ಲ ಅಂದರೂ ಕಷ್ಟ ಎಂಬ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದೆ ಕೇಂದ್ರ ಸರ್ಕಾರದ ಕತೆ. ಇಂಥ ಸಂದರ್ಭದಲ್ಲಿ ಮಾ.26 ರಂದು ಎರಡು ದಿನಗಳ ರಾಜ್ಯ ಪ್ರವಾಸಕ್ಕೆಂದು ಕರ್ನಾಟಕಕ್ಕೆ ಆಗಮಿಸಲಿರುವ ಅಮಿತ್ ಶಾ, ಎರಡು ದಿನಗಳ ಕಾಲವೂ ಪ್ರಸಿದ್ಧ ಲಿಂಗಾಯತ ಮಠಗಳಿಗೆ ಭೇಟಿ ನೀಡಲಿದ್ದಾರೆ. ಮಾರ್ಚ್ 26ರಂದು ಶಿವಮೊಗ್ಗದಲ್ಲಿ ರೋಡ್ ಶೋ. ಬೆಕ್ಕಿನ ಕಲ್ಮಠಕ್ಕೆ ಭೇಟಿ, ಮಾರ್ಚ್ 26ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ, ಮಾರ್ಚ್ 27ರಂದು ದಾವಣಗೆರೆ, ಚಿತ್ರದುರ್ಗಕ್ಕೆ ಭೇಟಿ, ಸಿರಿಗೆರೆ, ಮುರುಘಾ ಮಠ, ಮಾದರ ಚನ್ನಯ್ಯ ಗುರುಪೀಠಕ್ಕೆ ಭೇಟಿ ಇವು ಅಮಿತ್ ಶಾ ಅವರ ಕಾರ್ಯಕ್ರಮ ಪಟ್ಟಿ!
ಅಷ್ಟಕ್ಕೂ ಲಿಂಗಾಯತ ಮತಗಳು ಬಿಜೆಪಿಗೇಕೆ ಮಹತ್ವ?
ಕರ್ನಾಟಕ ವಿಧಾನಸಭೆ ಚುನಾವಣೆಯ ಇತಿಹಾಸ ನೋಡಿದರೆ ಯಶಸ್ವೀ ಅಭ್ಯರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯವರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರು. ಅದರಲ್ಲೂ ಉತ್ತರ ಕರ್ನಾಟಕದ ಗದಗ, ಹಾವೇರಿ, ರಾಯಚೂರು ಮತ್ತು ದಾವಣಗೆರೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಅಭ್ಯರ್ಥಿಗಳು ಹೆಚ್ಚಿನ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿಗೆ ಈ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಅತ್ಯಂತ ದೊಡ್ಡ ಹಿನ್ನೆಡೆಯಾದರೆ ಅಚ್ಚರಿಯಿಲ್ಲ. ಹಲವು ವರ್ಷಗಳಿಂದ ಎದ್ದಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಮತ್ತು ನಮ್ಮನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ, ಸಿಗಬೇಕಾದ ಎಲ್ಲ ಸೌಲಭ್ಯಗಳನ್ನೂ ಕಾಂಗ್ರೆಸ್ ಸರ್ಕಾರ ನೀಡುತ್ತದೆ ಎಂಬ ವಿಶ್ವಾಸ ಲಿಂಗಾಯತ ಸಮುದಾಯದಲ್ಲಿ ಸೃಷ್ಟಿಯಾದರೆ ಬಿಜೆಪಿಯ ಬಹುಮುಖ್ಯ ಮತಬ್ಯಾಂಕ್ ಆಗಿದ್ದ ಲಿಂಗಾಯತ ಸಮುದಾಯ ಬಿಜೆಪಿಯತ್ತ ಬೆನ್ನು ಮಾಡಿದರೆ ಅಚ್ಚರಿಯಿಲ್ಲ!
ಅಧಿಸೂಚನೆ ಹೊರಡಿಸಿದ ಕಾಂಗ್ರೆಸ್
ಲಿಂಗಾಯತರು ಮತ್ತು ಬಸವ ತತ್ತ್ವ ಅನುಸರಿಸುವ ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಇಲ್ಲಿ ಗಮನಾರ್ಹ ವಿಚಾರ. ಸಾಮಾನ್ಯವಾಗಿ ಸರ್ಕಾರಿ ಕೆಲಸಗಳೆಂದರೆ ವಿಳಂಬವಾಗುವುದೇ ಹೆಚ್ಚು. ಆದರೆ ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಷಯದಲ್ಲಿ ಮಾತ್ರ ರಾಜ್ಯ ಸರ್ಕಾರ ತರಾತುರಿಯ ನಿರ್ಣಯ ತೆಗೆದುಕೊಂದು, ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಹಿಂದೆ 'ಕಣ್ಮುಂದೆ ಇರುವ ವಿಧಾನಸಭಾ ಚುನಾವಣೆ'ಯಲ್ಲಿ ಲಾಭ ಗಳಿಸುವ ಉದ್ದೇಶ ಇಲ್ಲದೇ ಇದ್ದೀತೆ? ಸರ್ಕಾರ ಹೊರಡಿಸಿದ ಈ ಅಧಿಸೂಚನೆ ಕೇಂದ್ರ ಸರ್ಕಾರ ಲಿಂಗಾಯತ ಸಮುದಾಯದವರು ಪ್ರತ್ಯೇಕ ಧರ್ಮ ಎಂದು ಒಪ್ಪಿಗೆ ನೀಡಿದ ನಂತರ ಮಾನ್ಯತೆ ಪಡೆಯುತ್ತದೆ.
ರಾಜಕೀಯ ಚಾಣಕ್ಯನ ಮುಂದಿನ ನಡೆಯೇನು?
ರಾಜಕೀಯ ಚಾಣಕ್ಯ ಎಂದೇ ಖ್ಯಾತಿ ಪಡೆದ ಅಮಿತ್ ಶಾ ಅವರ ಮುಂದಿನ ನಡೆ ಏನು? ಇದ್ದಕ್ಕಿದ್ದಂತೆ ಲಿಂಗಾಯತ ಮಠಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಲಿಂಗಾಯತ ಮತಗಳು ಬಿಜೆಪಿ ತೆಕ್ಕೆಗೆ ಬಂದುಬಿಡುತ್ತವಾ..? ಗೊತ್ತಿಲ್ಲ. ಆದರೆ ಬಿಜೆಪಿಗೆ ಮುಳುವಾಗುತ್ತದೆ ಎಂಬ ವಿಷಯವನ್ನೇ, ತಮ್ಮ ಪಕ್ಷಕ್ಕೆ ಲಾಭವಾಗುವಂತೆ ಮಾರ್ಪಾಡು ಮಾಡುವುದು ಹೇಗೆ ಎಂಬ ಚಾಣಾಕ್ಷತೆ ಅಮಿತ್ ಶಾಗೆ ಇಲ್ಲದಿಲ್ಲ. ಬಿಜೆಪಿಯ ಸದ್ದೇ ಇಲ್ಲದ ಈಶಾನ್ಯ ರಾಜ್ಯದಲ್ಲೇ ಕಮಲದ ಕಂಪು ಪಸರಿಸಿದ ಅಮಿತ್ ಶಾ ಕರ್ನಾಟಕಕ್ಕೂ ತಂತ್ರ ರೂಪಿಸುವುದಿಲ್ಲವೇ? ಲಿಂಗಾಯತ ಮಠಗಳ ಭೇಟಿಯ ಹಿಂದೆಯೂ ಅಂಥ ತಂತ್ರಗಳು ಇಲ್ಲದಿದ್ದೀತೇ?! ಒಟ್ಟಿನಲ್ಲಿ ಸಿದ್ದರಾಮಯ್ಯ ನೀಡಿದ 'ಚೆಕ್' ನಿಂದ ತಪ್ಪಿಸಿಕೊಳ್ಳೋದಕ್ಕೆ ಬಿಜೆಪಿ ಹರಸಾಹಸ ಪಡುತ್ತಿರುವುದಂತೂ ಸತ್ಯ.