ಕರ್ನಾಟಕದಲ್ಲಿ 2021ರವರೆಗೂ ಕನ್ನಡ ಕಾಯಕ ವರ್ಷ ಆಚರಣೆ
ಬೆಂಗಳೂರು, ನವೆಂಬರ್.02: ಕರ್ನಾಟಕದಲ್ಲಿ ಮುಂದಿನ ವರ್ಷದವರೆಗೂ ಕನ್ನಡ ಕಾಯಕ ವರ್ಷ ಅಥವಾ ಕನ್ನಡ ಜೀವನೋಪಾಯ ವರ್ಷವಾಗಿ ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಘೋಷಿಸಿದ್ದಾರೆ. 2021ರ ಅಕ್ಟೋಬರ್.31ರವರೆಗೂ ರಾಜ್ಯದಲ್ಲಿ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುವುದು ಎಂದು ಸಿಎಂ ಹೇಳಿದರು.
ಕೂ ಆ್ಯಪ್ ಬಗ್ಗೆ ಸಿಎಂ ಮೆಚ್ಚುಗೆ, ವಿಜೃಂಭಣೆಯಿಂದ ಕನ್ನಡ ಹಬ್ಬ
ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಕನ್ನಡದ ಭಾಷೆ ಮತ್ತು ಸಂಸ್ಕೃತಿಯ ಬಲಪಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಕನ್ನಡದ ಅಭಿವೃದ್ಧಿ ಮತ್ತು ಭಾಷಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷಗಳ ಅವಧಿಯನ್ನು ಕನ್ನಡ ಕಾಯಕ ವರ್ಷ ಎಂದು ಸರ್ಕಾರವು ಘೋಷಿಸಿದೆ.
ಪ್ರಚಾರ ಚೌಕಟ್ಟಿನ ಬಗ್ಗೆ ಘೋಷಣೆ:
ರಾಜ್ಯದಲ್ಲಿ ಕನ್ನಡ ಭಾಷೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಚೌಕಟ್ಟನ್ನು ಶೀಘ್ರದಲ್ಲಿಯೇ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕನ್ನಡವನ್ನು ಬಲಪಡಿಸುವ ಮತ್ತು ಜಾಗೃತಿ ಜೊತೆಗೆ ಭಾಷೆ ಕುರಿತು ಪ್ರಚಾರಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೇ ಈ ವರ್ಷ ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಲಾಗುತ್ತದೆ ಎಂದು ಹೇಳಿದ್ದಾರೆ.