ಜಯಾ ಪ್ರಕರಣ: ವಕೀಲರಿಗಾಗಿ ಕರ್ನಾಟಕ ಖರ್ಚು ಮಾಡಿದ್ದು ಕೋಟ್ಯಂತರ ರುಪಾಯಿ
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯನ್ನು ಕರ್ನಾಟಕದಲ್ಲಿ ನಡೆಸುವಂತೆ ಸೂಚಿಸಿದ ನಂತರ ವಕೀಲರಿಗಾಗಿ ರಾಜ್ಯ ಖರ್ಚು ಮಾಡಿದ ಹಣ ಎಷ್ಟು ಗೊತ್ತೆ? ಕೋಟ್ಯಂತರ ರುಪಾಯಿ. ಇದೀಗ ಮಾಹಿತಿ ಬಹಿರಂಗವಾಗಿದ್ದು, ವಿವರಕ್ಕಾಗಿ ಈ ವರದಿ ಓದಿ
ಬೆಂಗಳೂರು, ಏಪ್ರಿಲ್ 5: ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರಿಗೆ ರಾಜ್ಯ ಸರಕಾರದಿಂದ ಪಾವತಿಸಿರುವ ಶುಲ್ಕ ಎಷ್ಟು ಗೊತ್ತೆ? 1,06,86,018 ರುಪಾಯಿ (ಒಂದು ಕೋಟಿಯ ಆರು ಲಕ್ಷದ ಎಂಬತ್ತಾರು ಸಾವಿರ ರುಪಾಯಿ).
ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರಿಗೆ ಪಾವತಿಸಿರುವುದು 95,16,500 ರುಪಾಯಿ (ತೊಂಬತ್ತೈದು ಲಕ್ಷದ ಹದಿನಾರು ಸಾವಿರದ ಐನೂರು). ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅಡ್ವೋಕೇಟ್ ಜನರಲ್ ಟಿ.ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.[ಜಯಾ ಫೋಟೋ ತೆಗೆಸಿ, ಯಾವ ಯೋಜನೆಗೂ ಆಕೆ ಹೆಸರು ಬೇಡ]
ಈ ಮಾಹಿತಿಯಿಂದ ಗೊತ್ತಾಗಿರುವ ಅಂಶ ಏನೆಂದರೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಕೋರ್ಟ್ ನಲ್ಲಿ ಬಡಿದಾಡುವುದಕ್ಕೆ ವಕೀಲರಿಗಾಗಿ ಕರ್ನಾಟಕ ಸರಕಾರ ಮಾಡಿರುವ ಒಟ್ಟು ವೆಚ್ಚ 2,78,70,888 ರುಪಾಯಿ (ಎರಡು ಕೋಟಿ ಎಪ್ಪತ್ತೆಂಟು ಲಕ್ಷದ ಎಪ್ಪತ್ತು ಸಾವಿರದ ಎಂಟು ನೂರಾ ಎಂಬತ್ತೆಂಟು).
ಜಯಲಲಿತಾ, ಶಶಿಕಲಾ ನಟರಾಜನ್ ಮತ್ತಿಬ್ಬರನ್ನು ಅಪರಾಧಿಗಳು ಎಂದು ಘೋಷಿಸಿ, ವಿಚಾರಣಾ ಕೋರ್ಟ್ ನೀಡಿದ್ದ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಆದರೆ ಜಯಲಲಿತಾ ಅವರು ನಿಧನರಾಗಿದ್ದರಿಂದ ಅವರ ಹೆಸರು ಕೈ ಬಿಡಲಾಯಿತು. ಈ ಬಗ್ಗೆ ಪುನರ್ ಪರಿಶೀಲನೆಗೆ ಕರ್ನಾಟಕ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.[66 ಕೋಟಿ ಅಕ್ರಮ ಆಸ್ತಿ ಕೇಸಿನ ದೋಷಿಗೆ ದಿನಕ್ಕೆ 50 ರು. ಸಂಬಳ]
ಅಂದಹಾಗೆ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ನೀಡಿರುವ ಮಾಹಿತಿಯಲ್ಲಿ ವಕೀಲರಾದ ಜೋಸೆಫ್ ಅರಿಸ್ಟಾಟಲ್, ಸಂತೋಷ್ ಚೌಟ ಅವರಿಗೆ ಕ್ರಮವಾಗಿ 32,01,070, 42,23,643 ರುಪಾಯಿ ಮತ್ತು ಕರ್ನಾಟಕದ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್ ನಾಯಕ್ ಗೆ 2,43,657 ರುಪಾಯಿ ನೀದಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕವು ವಕೀಲರಿಗೆ ಪಾವತಿಸಿದ ಮೊತ್ತವನ್ನು ತಮಿಳುನಾಡು ಬಳಿ ಕೇಳಲಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಈ ಮೊತ್ತವನ್ನು ತಮಿಳುನಾಡು ಭರಿಸಬೇಕು. ಅಕ್ರಮ ಆಸ್ತಿ ಗಳಿಕೆ ಪ್ರಕರಣವು ತಮಿಳುನಾಡಿನಲ್ಲಿ ಅಧಿಕಾರದಲ್ಲಿದವರ ವಿರುದ್ಧ ಇದ್ದದ್ದರಿಂದ ನ್ಯಾಯೋಚಿತ ಪ್ರಕ್ರಿಯೆ ನಡೆಯುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕರ್ನಾಟಕದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಲಾಗಿತ್ತು.