ಆಪರೇಷನ್ ಕಮಲ; ಶಾಸಕರಿಗೆ 5 ಕೋಟಿ ರೂ. ಕೊಟ್ಟ ಪ್ರಕರಣಕ್ಕೆ ಮರುಜೀವ
ಬೆಂಗಳೂರು, ಮಾ. 08: ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರಿಗೆ ಐದು ಕೋಟಿ ರೂ. ಮುಂಗಡ ಹಣ ನೀಡಿ ಆಪರೇಷನ್ ಕಮಲಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಅಶ್ವತ್ ನಾರಾಯಣ ಸೇರಿದಂತೆ ನಾಲ್ವರು ಜನ ಪ್ರತಿನಿಧಿಗಳನ್ನು ತನಿಖೆಗೆ ಒಳಪಡಿಸಲು ಅನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.
ನನಗೆ ಐದು ಕೋಟಿ ರೂ. ಮುಂಗಡ ಕೊಟ್ಟು 25 ಕೋಟಿ ರೂ. ಆಫರ್ ಕೊಟ್ಟಿದ್ದರು ಎಂದು ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದ್ದ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್, ಡಾ. ಅಶ್ವತ್ ನಾರಾಯಣ ಹಾಗೂ ಮಾಜಿ ಮಂತ್ರಿ ಸಿ.ಪಿ.ಯೋಗೀಶ್ವರ್ ಅವರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆಗೆ ಒಳಪಡಿಸಲು ಅನುಮತಿ ನೀಡುವಂತೆ ಸ್ವೀಕರ್ ಅವರಿಗೆ ಅಬ್ರಹಾಂ ಕೋರಿದ್ದಾರೆ. ಈ ಸಂಬಂಧ ಜನ ಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಪ್ರತಿ, ಹೈಕೋರ್ಟ್ ತೀರ್ಪಿನ ಪ್ರತಿ ಉಲ್ಲೇಖಿಸಿ ದೂರು ನೀಡಿದ್ದಾರೆ.
ಇದಕ್ಕೂ ಮೊದಲು ಇದೇ ನಾಲ್ವರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರಿ ಟಿ.ಜೆ. ಅಬ್ರಹಾಂ ಸ್ವೀಕರ್ ಅವರಿಗೆ ಮನವಿ ಮಾಡಿದ್ದರು. ಇದು ನನ್ನ ಕಾರ್ಯ ವ್ಯಾಪ್ತಿಗೆ ಬರಲ್ಲ ಎಂದು ಸ್ಪಷ್ಟನೆ ನೀಡಿದ್ದರು. ರಾಜ್ಯಪಾಲರ ಕಚೇರಿಯಿಂದಲೂ ಸಹ ಅನುಮತಿ ನೀಡದೇ ನಿರಾಕರಿಸಲಾಗಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಪೂರ್ವಾನುಮತಿ ನೀಡಲು ನಿಗದಿ ಮಾಡಿರುವ ಕಾಲಾವಕಾಶ ಮುಗಿದ ಹಿನ್ನೆಲೆಯಲ್ಲಿ ಡೀಮ್ಡ ಪೂರ್ವಾನುಮತಿ ಎಂದು ಪರಿಗಣಿಸಿ ಅಬ್ರಹಾಂ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಅಬ್ರಹಾಂ ದೂರನ್ನು ಅಂಗೀಕರಿಸಿದ್ದ ಜನ ಪ್ರತಿನಿಧಿಗಳ ನ್ಯಾಯಾಲಯ, ಆರೋಪಿಗಳ ವಿರುದ್ಧ ತನಿಖೆಗೆ ಆದೇಶಿಸಿತ್ತು.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿತ ಜನ ಪ್ರತಿನಿಧಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಜನ ಪ್ರತಿನಿಧಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ಆ ಬಳಿಕ ಪ್ರಕರಣದ ತನಿಖೆಗೆ ಆದೇಶಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಜನ ಪ್ರತಿನಿಧಿಗಳ ನ್ಯಾಯಾಲಯ ಸಹ ಐದು ಕೋಟಿ ರೂ. ಕಿಕ್ ಬ್ಯಾಕ್ ಪ್ರಕರಣದಲ್ಲಿ ಆರೋಪಿತರನ್ನು ಅಭಿಯೋಜನೆಗೆ ಒಳಪಡಿಸಲು ಪೂರ್ವಾನುಮತಿ ಪಡೆಯುವಂತೆ ನಿರ್ದೇಶನ ನೀಡಿದೆ.
ನ್ಯಾಯಾಲಯಗಳ ನಿರ್ದೇಶನ ಹಿನ್ನೆಲೆಯಲ್ಲಿ ಟಿ.ಜೆ. ಅಬ್ರಹಾಂ ಇದೀಗ ಸ್ವೀಕರ್ ವಿಶ್ವೇಶ್ವರ ಕಾಗೇರಿ ಅವರಿಗೆ ಮನವಿ ನೀಡಿದ್ದಾರೆ. ನಾಲ್ವರು ಜನ ಪ್ರತಿನಿಧಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆಗೆ ಒಳಪಡಿಸಲು ಪೂರ್ವಾನುಮತಿ ನೀಡುವಂತೆ ಕೋರಿದ್ದಾರೆ. ಸ್ವೀಕರ್ ಪೂರ್ವಾನುಮತಿ ನೀಡಿದಲ್ಲಿ ನಾಲ್ವರು ಜನ ಪ್ರತಿನಿಧಿಗಳ ವಿರುದ್ಧ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಫ್ಐಆರ್ ದಾಖಲಾಗಿ ತನಿಖೆ ನಡೆಯಲಿದೆ. ಕೋಲಾರ ಶಾಸಕ ನೀಡಿದ್ದ ಹೇಳಿಕೆ ಸತ್ಯ ಎಂದು ಸಾಬೀತಾದಲ್ಲಿ ಹಾಲಿ ಉನ್ನತ ಉನ್ನತ ಶಿಕ್ಷಣ ಸಚಿವ ಹಾಗೂ ಆಪರೇಷನ್ ಕಮಲದ ರೂವಾರಿ ಎನ್ನಲಾದ ಸಿ.ಎನ್.ಅಶ್ವತ್ ನಾರಾಯಣ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ಕಂಟಕ ಎದುರಾಗಲಿದೆ. ಕೋಲಾರ ಶಾಸಕ ಕೆ. ಶ್ರೀನಿವಾಸ್ ಗೌಡ ಸಹ ತನಿಖೆ ಎದುರಿಸಬೇಕಾಗುತ್ತದೆ.
ಏನಿದು ಪ್ರಕರಣ:
2019 ಫೆ. 10 ರಂದು ಕೋಲಾರ ಶಾಸಕ ಕೆ. ಶ್ರೀನಿವಾಸ್ ಗೌಡ ಮಾಧ್ಯಮಗಳ ಮುಂದೆ ಆಪರೇಷನ್ ಕಮಲದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. " ನನ್ನನ್ನು ಬಿಜೆಪಿ ಪಕ್ಷ ಸೇರುವಂತೆ ಇಬ್ಬರು ಬಿಜೆಪಿ ನಾಯಕರು ನಮ್ಮ ಮನೆಗೆ ಬಂದು ಆಫರ್ ಕೊಟ್ಟಿದ್ದರು. ಐದು ಕೋಟಿ ರೂ. ಇದ್ದ ಬ್ಯಾಗ್ನ್ನು ನನ್ನ ಮನೆಯಲ್ಲಿಟ್ಟಿದ್ದರು. ತಾವು ಬಿಜೆಪಿ ಪಕ್ಷ ಸೇರಿದರೆ, ಮುಂಗಡ ಐದು ಕೋಟಿ ಅಡ್ವಾನ್ಸ್ ಕೊಡ್ತೇವೆ. ಆ ಬಳಿಕ 25 ಕೋಟಿ ರೂ. ಕೊಡುವ ಜತೆಗೆ ಸಚಿವ ಸ್ಥಾನ ಕೊಡುವ ಅಮಿಷೆ ಒಡ್ಡಿದ್ದರು. ಐದು ಕೋಟಿ ರೂ. ಹಣವನ್ನು ಬ್ಯಾಗಿನಲ್ಲಿ ತಂದು ಮನೆಯಲ್ಲಿಟ್ಟಿದ್ದರು. ಎರಡು ತಿಂಗಳು ಹಣ ನನ್ನ ಮನೆಯಲ್ಲಿತ್ತು. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಅದನ್ನು ಹಿಂತಿರುಗಿಸಿದೆ ಎಂದು ಶಾಸಕ ಶ್ರೀನಿವಾಸ್ ಗೌಡ ಸ್ಫೋಟಕ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಈ ವಿಚಾರ ಸದನದಲ್ಲೂ ಕೂಡ ಚರ್ಚೆಯಾಗಿತ್ತು.
ಶ್ರೀನಿವಾಸ್
ಗೌಡ
ಅವರ
ಮಾಧ್ಯಮ
ಹೇಳಿಕೆ
ಆಧರಿಸಿ
ಆಪರೇಷನ್
ಕಮಲದ
ಡೀಲಿಂಗ್
ಬಗ್ಗೆ
ತನಿಖೆ
ನಡೆಸುವಂತೆ
ಟಿ.ಜೆ.
ಅಬ್ರಹಾಂ
ಎಸಿಬಿಗೆ
ದೂರು
ನೀಡಿದ್ದರು.
ಈ
ದೂರನ್ನು
ಎಸಿಬಿ
ತನಿಖೆ
ನಡೆಸಿ
ರದ್ದು
ಮಾಡಿತ್ತು.
ಇದನ್ನ
ಪ್ರಶ್ನಿಸಿ
ಅಬ್ರಹಾಂ
ಜನ
ಪ್ರತಿನಿಧಿಗಳ
ವಿಶೇಷ
ನ್ಯಾಯಾಲಯದಲ್ಲಿ
ಖಾಸಗಿ
ದೂರು
ಸಲ್ಲಿಸಿದ್ದರು.
ಈ
ದೂರನ್ನು
ಅಂಗೀಕರಿಸಿದ್ದ
ಜನ
ಪ್ರತಿನಿಧಿಗಳ
ವಿಶೇಷ
ನ್ಯಾಯಾಲಯ
ಎಫ್ಐಆರ್
ದಾಖಲಿಸಿ
ತನಿಖೆಗೆ
ಆದೇಶಿಸಿತ್ತು.
ಆಪರೇಷನ್ ಕಮಲ ಐದು ಕೋಟಿ ಕೇಸ್ :
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿತ ಜನ ನಾಯಕರು ಹೈಕೋರ್ಟ್ನಲ್ಲಿ ರಿಟ್ ದಾಖಲಿಸಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಐದು ಕೋಟಿ ಲಂಚ ಆಫರ್ ಕೊಟ್ಟ ಪ್ರಕರಣದಲ್ಲಿ ಆರೋಪಿತ ಜನ ಪ್ರತಿನಿಧಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವಂತೆ ದೂರುದಾರರಿಗೆ ನಿರ್ದೇಶನ ನೀಡುವಂತೆ ಆದೇಶಿಸಿದೆ. ಜನ ಪ್ರತಿನಿಧಿಗಳ ನ್ಯಾಯಾಲಯ ಇದೀಗ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುನಃ ಆಪರೇಷನ್ ಕಮಲ ಐದು ಕೋಟಿ ರೂ. ಆಫರ್ ಕೇಸಲ್ಲಿ ಪೂರ್ವಾನುಮತಿ ನೀಡುವಂತೆ ದೂರುದಾರ ಟಿ.ಜೆ. ಅಬ್ರಹಾಂ ಸ್ವೀಕರ್ ಅವರಿಗೆ ದಾಖಲೆಗಳ ಸಮೇತ ಮನವಿ ನೀಡಿದ್ದಾರೆ. ಸ್ವೀಕರ್ ಅವರು ಅನುಮತಿ ನೀಡಿದ ಬಳಿಕ ಆಪರೇಷನ್ ಕಮಲ 5 ಕೋಟಿ ರೂ. ಪ್ರಕರಣದ ತನಿಖೆ ಆರಂಭವಾಗಲಿದೆ.
ಅಬ್ರಹಾಂ ಹೇಳಿಕೆ
" ಶ್ರೀನಿವಾಸ್ ಗೌಡ ಅವರಿಗೆ 5 ಕೋಟಿ ರೂ. ಕೊಟ್ಟ ಪ್ರಕರಣದಲ್ಲಿ ಈ ಮೊದಲು ಪೂರ್ವಾನುಮತಿ ನಿಡುವಂತೆ ಸ್ವೀಕರ್ ಅವರಿಗೆ ಮನವಿ ಮಾಡಿದ್ದೆ. ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ್ದರು. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕಾಲಮಿತಿ ಮುಗಿದ ಹಿನ್ನೆಲೆಯಲ್ಲಿ ಡೀಮ್ಡ್ ಪೂರ್ವಾನುಮತಿ ಎಂದು ಅಂಗೀಕರಿಸಿ ನಾನು ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆ. ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಪುನಃ ನಾನು ಆರೋಪಿತರನ್ನು ಅಭಿಯೋಜನೆಗೆ ಒಳಪಡಿಸಲು ಅನುಮತಿ ನೀಡುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಸ್ವೀಕರ್ ಗೆ ಮನವಿ ಮಾಡಿದ್ದೇನೆ ಎಂದು ಅಬ್ರಹಾಂ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.