'ಹರ್ ಘರ್ ತಿರಂಗಾ': ಬಿಜೆಪಿ ನಾಯಕರ ಮನೆ ಮೇಲೆ ಧ್ವಜ
ಬೆಂಗಳೂರು ಆಗಸ್ಟ್ 13: 75ನೇ ಸ್ವಾತಂತ್ರ್ಯೋತ್ಸವದ ಅಮೃತಹ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರ ಮನೆ ಮೇಲೆ ರಾಷ್ಟ್ರ ಧ್ವಜಗಳು ಹಾರಾಡಿವೆ.
ಆಗಸ್ಟ್ 13ರಿಂದ ಆಗಸ್ಟ್ 15ರವರೆಗೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂಬ ಕೇಂದ್ರ ಸರ್ಕಾರದ ಕರೆಯ ಮೇರೆಗೆ ಕರ್ನಾಟಕದಲ್ಲಿ ಶನಿವಾರ ಅಭಿಯಾನ ಆರಂಭವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಿರ್ಮಲಾ ಸೀತಾರಾಮ್ ಅವರು ಬೆಂಗಳೂರಿನ ತಮ್ಮ ಮನೆಯ ಭಾರತದ ಸಂಕೇತವಾದ ಕೇಸರಿ, ಬಿಳಿ ಹಸಿರಿನ ಬಣ್ಣದ ರಾಷ್ಟ್ರ ಧಜ್ವ ಹಾರಿಸಿದರು. ಈ ಮೂಲಕ ದೇಶಪ್ರೇಮ, ಅಮೃತ ಮಹೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು. ಬೊಮ್ಮಾಯಿ ಅವರೊಂದಿಗೆ ಆರೋಗ್ಯ ಸಚಿವ ಸುಧಾಕರ್ ಪಾಲ್ಗೊಂಡಿದ್ದರು. ಈ ಕುರಿತ ಫೋಟೋಗಳನ್ನು ಆಜಾದಿಕಾ ಅಮೃತ ಮಹೋತ್ಸವ ಎಂಬ ಹ್ಯಾಶ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನಾಯಕರು ಹಾಗೂ ಕರ್ನಾಟಕ ಬಿಜೆಪಿ ಟ್ವಿಟ್ಟರ್ ಹಂಚಿಕೊಳ್ಳಲಾಗಿದೆ.
ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಬೆಳಗ್ಗೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಸಚಿವರ ಕುಟುಂಬ ಸರ್ವ ಸದಸ್ಯರು ಮತ್ತು ಅಭಿಮಾನಿಗಳು ಕೂಡ ಭಾಗಿಯಾಗಿದ್ದರು.
ಯುವಕರಲ್ಲಿ ದೇಶಪ್ರೇಮ ಬೆಳೆಯಲಿದೆ
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ ನಾರಾಯಣ್, 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವು ದೇಶಾಭಿಮಾನದ ಪುನರುತ್ಥಾನಕ್ಕೆ ಕಾರಣವಾಗುತ್ತಿದೆ. ಇದು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದು, ಅದಕ್ಕೆ ನಾವೆಲ್ಲರು ಸಾಕ್ಷಿಯಾಗಲಿದ್ದೇವೆ. ಯುವ ಪೀಳಿಗೆಯಲ್ಲಿ ನಾವು ಭಾರತದ ಬಗ್ಗೆ ಕಳಕಳಿ ಮತ್ತು ಕಾಳಜಿಗಳನ್ನು ಬೆಳೆಸಲು ಪ್ರಧಾನಿ ಮೋದಿ ಅವರ ಕಾರ್ಯಕ್ರಮವಾದ ಹರ್ ಘರ್ ತಿರಂಗಾ ನೆರವಾಗಲಿದೆ ಎಂದು ಹೇಳಿದರು.
ಅಭಿಯಾನಕ್ಕೆ ಭರಪೂರ ಸ್ಪಂದನೆ
ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಕಂದಾಯ ಸಚಿವ ಆರ್ ಅಶೋಕ್ ಅವರ ತಮ್ಮ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರು. ಪ್ರಧಾನಿ ಮೋದಿ ಅವರು ಕರೆ ನೀಡಿದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ದೇಶಾದ್ಯಂತ ಭರಪೂರ ಸ್ಪಂದನೆ ದೊರೆತಿದೆ ಎಂದು ಆರ್. ಅಶೋಕ್ ಹೇಳಿದರು.
ಗ್ರಾಮೀಣ ಪ್ರದೇಶದಲ್ಲೂ ಹಾರಾಡಿದ ತ್ರಿವರ್ಣ ಧ್ವಜ
ರಾಜಕೀಯ ಗಣ್ಯರು, ಸಚಿವರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಅಭಿಯಾನಕ್ಕೆ ಸ್ಪಂದಿಸಿದ್ದಾರೆ. ತಮ್ಮ ಮನೆಗಳ ಮೇಲೆ ರಾಷ್ಟ್ರಧಜ ಹಾರಿಸಿ ಫೋಟೊ, ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ದೇಶಪ್ರೇಮ ಮೆರೆದಿದ್ದಾರೆ. ಈ ಅಭಿಯಾನ ಕರ್ನಾಟಕದ ಹಳ್ಳಿಗಳಿಗೂ ವಿಸ್ತರಿಸಿದ್ದು, ಮನೆಗಳ ಮೇಲೆ ಹಾಗೂ ಬೈಕ್, ಸ್ವಂತ ವಾಹನಗಳ ಮೇಲೂ ರಾಷ್ಟ್ರ ಭಾವುಟ ಹಾರಾಡಿದ್ದು ಕಂಡು ಬಂದಿದೆ.
ಅಭಿಯಾನಕ್ಕೆ ಸಿದ್ಧತೆ: ತಿರಂಗಾ ಯಾತ್ರೆ
ಇದಲ್ಲದೇ ಕಳೆದ ಎರಡು ದಿನಗಳಿಂದ ಅಭಿಯಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕೇಂದ್ರ ಸಚಿವ ಪಹ್ಲಾದ್ ಜೋಶಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ನಾಯಕರು ತಿರಂಗಾ ಯಾತ್ರೆಗಳಲ್ಲಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಭಾವುಟ ಹಿಡಿದು ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರ ಜತೆ ಮೆರವಣಿಗೆ ನಡೆಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಹ ಸ್ವಾತಂತ್ರ್ಯೋತ್ಸವದ ಪೂರ್ವ ಸಿದ್ಧತೆ, ತಿರಂಗಾ ಯಾತ್ರೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ಕ್ಕೆ ಮೆರಗು ನೀಡಿದರು. ಈ ಹರ್ ಘರ್ ತಿರಂಗಾ ಅಭಿಯಾನವು ಆಗಸ್ಟ್ 15ರಂದು ಅದ್ಧೂರಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ.
Recommended Video