ಟಿಪ್ಪು ಜಯಂತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ: ಮೋಹನ್ ದಾಸ್ ಪೈ
ಬೆಂಗಳೂರು, ನವೆಂಬರ್ 2: ಕರ್ನಾಟಕ ಸರಕಾರ ಟಿಪ್ಪು ಜಯಂತಿ ಆಚರಿಸಲು ಯೋಚಿಸುತ್ತಿರೋದು ಕೇಂದ್ರ ಸರಕಾರ ಔರಂಗ್ ಜೇಬ್ ಜಯಂತಿ ಆಚರಿಸಿದಂತೆ ಇದೆ ಎಂದು ಪದ್ಮಶ್ರೀ ಪುರಸ್ಕೃತ ಹಾಗೂ ತಾಂತ್ರಿಕ ಹೂಡಿಕೆದಾರ ಟಿ.ಎ.ಮೋಹನ್ ದಾಸ್ ಪೈ ಬೆಂಗಳೂರಿನಲ್ಲಿ ಹೇಳಿದ್ದಾರೆ. ಸರಕಾರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತೀವ್ರ ವಿರೋಧದ ಮಧ್ಯೆಯೂ ಕರ್ನಾಟಕ ಸರಕಾರ ನವೆಂಬರ್ 10ರಂದು ಟಿಪ್ಪು ಜಯಂತಿ ಅಚರಣೆಗೆ ಮುಂದಾಗಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಈ ಕಾರ್ಯಕ್ರಮವನ್ನು ವಿರೋಧಿಸಿದ್ದು, ಆ ದಿನ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಟಿಪ್ಪು ಜಯಂತಿ ಆಚರಣೆ ಬಗ್ಗೆ ಮಾತನಾಡಿರುವ ಪೈ, ಟಿಪ್ಪು ಬದಲಿಗೆ ಮೈಸೂರಿನ ಒಡೆಯರ್, ಮಿರ್ಜಾ ಇಸ್ಮಾಯಿಲ್ ಅಂಥವರ ಜಯಂತಿ ಮಾಡಲಿ ಎಂದಿದ್ದಾರೆ.[ಇತಿಹಾಸ ಅರಿಯದವರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಖಾದರ್]
ಈ ವಿಚಾರದಲ್ಲಿ ಸರಕಾರ ರಾಜಕೀಯ ಮಾಡೋದು ಬೇಡ ಅಂತ ಕೇಳಿಕೊಳ್ತೀನಿ ಎಂದಿರುವ ಮೋಹನ್ ದಾಸ್ ಪೈ, ಸರಕಾರ ಇರೋದು ಆಡಳಿತ ಮಾಡುವುದಕ್ಕೆ. ಅದನ್ನು ಬಿಟ್ಟು ರಾಜ್ಯವನ್ನು ಒಡೆಯುವಂಥ ಕೆಲಸ ಮಾಡಬಾರದು. ನಾನೊಬ್ಬ ಕೊಂಕಣಿಯಾಗಿ ಹೇಳ್ತಿದೀನಿ, ಈ ಜಯಂತಿ ಮಾಡುವುದರಿಂದ ಬಹಳ ಜನರಿಗೆ ನೋವಾಗುತ್ತದೆ. ಟಿಪ್ಪುವಿಗೆ ಮತ್ತೊಂದು ಮುಖ ಸಹ ಇದೆ ಎಂದಿದ್ದಾರೆ.[ಕೊಡವ ಸಮಾಜ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಬಾರದು: ಎಕೆ ಸುಬ್ಬಯ್ಯ]
ಆತ ಹಲವಾರು ಜನರನ್ನು ಕೊಂದಿದ್ದಾನೆ. ಕತ್ತಿ ತೋರಿಸಿ ಮತಾಂತರ ಮಾಡಿದ್ದಾನೆ. ಕೊಡವರಿಗೆ ಆತನ ಮೇಲೆ ವಿಪರೀತ ಸಿಟ್ಟಿದೆ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರಲ್ಲೂ ಅಂಥದೇ ಸಿಟ್ಟಿದೆ. ಏಕೆಂದರೆ ಆತ ಇಪ್ಪತ್ತಾರು ಸಾವಿರ ಕ್ಯಾಥೋಲಿಕ್ಕರನ್ನು ಬಂಧಿಸಿಟ್ಟಿದ್ದ. ಕಾಸರಗೋಡು ಹಾಗೂ ಸುಲ್ತಾನ್ ಬತೇರಿಯಲ್ಲಿ ಕೊಂಕಣಿಗರ ದೇವಾಲಯಗಳನ್ನು ಧ್ವಂಸ ಮಾಡಿದ ಎಂದು ಟಿ.ಎ.ಮೋಹನ್ ದಾಸ್ ಪೈ ಹೇಳಿದ್ದಾರೆ.