ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್
ಕರಾವಳಿ, ಕೊಡಗು ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ, ಕರಾವಳಿ ಕರ್ನಾಟಕ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇನ್ನು ಮಲೆನಾಡು ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ.
ರಾಜಧಾನಿಯಿಂದ ಕರಾವಳಿ ಕಡೆ ಹೋಗಲು ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟ್ ಸಂಚಾರಕ್ಕೆ ಬಂದ್ ಆಗಿರುವುದರಿಂದ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಕಡೆಗೆ ಪ್ರಯಾಣಿಸುವುದು ದುಸ್ತರವಾಗಿದೆ. ಇದೇ ತಿಂಗಳ 20ನೇ ತಾರೀಕಿನವರೆಗೆ ಎಲ್ಲಾ ರೀತಿಯ ವಾಹನಗಳು ಮತ್ತು 25ನೇ ತಾರೀಕಿನವರೆಗೆ ಭಾರೀ ವಾಹನ ಸಂಚಾರ ಶಿರಾಡಿ ಘಾಟ್ ನಲ್ಲಿ ನಿಷೇಧಿಸಿ ಈಗಾಗಲೇ ಹಾಸನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಶಿರಾಡಿ ಒತ್ತಡ ಚಾರ್ಮಾಡಿ ಘಾಟ್ ರಸ್ತೆ ಮೇಲೆ, ವಿಪರೀತ ಸಂಚಾರ ದಟ್ಟಣೆ
ಸಿಕ್ಕಿದ್ದೇ ಸೀರುಂಡೆ ಎಂದು ಏರ್ಲೈನ್ಸ್ ಗಳು ಬೆಂಗಳೂರು - ಮಂಗಳೂರು ವಿಮಾನಯಾನದ ಟಿಕೆಟ್ ದರವನ್ನು ಮನಬಂದಂತೇ ಏರಿಸಿವೆ. ಸೀಸನ್ ವೇಳೆ ಖಾಸಗಿ ಬಸ್ ಸಂಸ್ಥೆಗಳು ಎರಡು ಪಟ್ಟು, ಮೂರು ಪಟ್ಟು ಟಿಕೆಟ್ ದರ ಏರಿಸುವ ಪದ್ದತಿಯನ್ನು ಇಟ್ಟುಕೊಂಡಿವೆ, ಈಗ ಅವರನ್ನೇ ನಾಚಿಸುವಂತೆ ಏರ್ಲೈನ್ಸ್ ಗಳು ಟಿಕೆಟ್ ದರವನ್ನು ಏರಿಸಿವೆ.
ಬೆಂಗಳೂರಿನಿಂದ - ಮಂಗಳೂರಿಗೆ ಸಾಮಾನ್ಯ ದರ 2,500-4,000 ರೂಪಾಯಿಗಳು, ಈಗ ಪ್ರಯಾಣದ ದರವನ್ನು 14,000-18,000 ರೂಪಾಯಿವರೆಗೆ ಏರಿಸಿ, ಪ್ರಾಕೃತಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯವಾಗುವ ಬದಲು, ಏರ್ಲೈನ್ಸ್ ಗಳು ಹಗಲು ದರೋಡೆಗೆ ಇಳಿದಿವೆ. ಮೈಸೂರು ಮತ್ತು ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಹೋಗುವವರಿಗೆ ಕೆಲವೊಂದು ಮಾಹಿತಿ ಮತ್ತು ಟಿಪ್ಸ್ ಇಂತಿದೆ:
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ
> ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೇ, ಮಂಗಳೂರು, ಉಡುಪಿ, ಕುಂದಾಪುರದ ಕಡೆಗೆ ಬರುವವರು ಹಾಸನ - ಬೇಲೂರು - ಕೊಟ್ಟಿಗೆಹಾರ- ಚಾರ್ಮಾಡಿ ಘಾಟ್ ಕಡೆಯಿಂದ ಬರಬಹುದು. ಆದರೆ ಶಿರಾಡ್ ಘಾಟ್ ಬಂದ್ ಆಗಿರುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ಅಲ್ಲಲ್ಲಿ ಭೂಕುಸಿತ ಮುಂದುವರಿಯುತ್ತಿರುವುದರಿಂದ, ತಾಸುಗಟ್ಟಲೆ ಜಾಮ್ ಆಗಬಹುದು. ಹಾಗಾಗಿ, ಬಿಸ್ಕತ್, ತಿಂಡಿ, ನೀರನ್ನು ತೆಗೆದುಕೊಂಡು ಹೋಗುವುದು ಉತ್ತಮ.
> ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಬರುವ ರಸ್ತೆ ಭೂಕುಸಿತ ತೀವ್ರವಾಗಿರುವುದರಿಂದ ಬಂದ್ ಆಗಿದೆ.
> ಯಡಕುಮರಿಯಲ್ಲಿ ಮತ್ತೆ ಭೂಕುಸಿತ ಉಂಟಾಗಿರುವುದರಿಂದ, ಕಾರವಾರ-ಉಡುಪಿ-ಮಂಗಳೂರು-ಕಣ್ಣೂರು- ಬೆಂಗಳೂರು ವಯಾ ಹಾಸನ ರೈಲು ಸೇವೆ ಸದ್ಯಕ್ಕೆ ಬಂದ್ ಆಗಿದೆ.
> ಬೆಂಗಳೂರಿನಿಂದ ದಕ್ಷಿಣಕನ್ನಡ-ಉಡುಪಿ ಕಡೆಗೆ ರಾಜ್ಯ ಸಾರಿಗೆ ಸಂಸ್ಥೆಯ ಕರ್ನಾಟಕ ಸಾರಿಗೆ ಬಸ್ ಸಂಚಾರ ಮಾತ್ರ ಚಾರ್ಮಾಡಿ ಮೂಲಕ ಮುಕ್ತವಾಗಿದೆ. ರಾಜಹಂಸ, ಅಂಬಾರಿ ಮತ್ತು ಐರಾವತ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
> ಬೆಂಗಳೂರಿನಿಂದ ದಕ್ಷಿಣಕನ್ನಡ-ಉಡುಪಿ ಕಡೆಗೆ ಸಾಗುವ ಖಾಸಗಿ ಬಸ್ ಗಳು ಕೆಲವೊಂದು ಚಾರ್ಮಾಡಿ ಮೂಲಕ ಕೆಲವು ಹುಲಿಕಲ್, ಶಿವಮೊಗ್ಗ ಮೂಲಕ ಸಂಚರಿಸುತ್ತವೆ. ಇಲ್ಲೂ ಕೂಡಾ ವೊಲ್ವೋ ಬಸ್ ಸಂಚಾರ ಇರುವುದಿಲ್ಲ.
> ಕಾಸರಗೋಡಿನಿಂದ ಬೆಂಗಳೂರು/ಮೈಸೂರು ಕಡೆಗೆ ಸುಳ್ಯ ಮೂಲಕ ಹೋಗುವ ರಸ್ತೆ ಬಂದ್ ಆಗಿದೆ. ಇಲ್ಲಿಂದ ಪ್ರಯಾಣಿಸಲು ಇರುವ ಎರಡು ಆಯ್ಕೆಯೆಂದರೆ ಮಂಗಳೂರು, ಬೆಳ್ತಂಗಡಿ, ಚಾರ್ಮಾಡಿ ಅಥವಾ ಪುತ್ತೂರು, ಉಪ್ಪಿನಂಗಡಿ, ಚಾರ್ಮಾಡಿ.