ಸೋಮಣ್ಣ vs ನಿರಂಜನ್ ಕುಮಾರ್! ಗುಂಡ್ಲುಪೇಟೆ ಬಿಜೆಪಿಯಲ್ಲಿ ಜಂಗಿಕುಸ್ತಿ!
ಚಾಮರಾಜನಗರ, ಮಾರ್ಚ್ 29: ಅದ್ಯಾಕೋ ಗೊತ್ತಿಲ್ಲ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣರವರು ಚಾಮರಾಜನಗರದಿಂದ ಅದರಲ್ಲೂ ಗುಂಡ್ಲುಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆನ್ನುವ ಹಠಕ್ಕೆ ಬಿದ್ದಿದ್ದಾರೆ. ಇಲ್ಲಿ ತನಕ ಸ್ಪರ್ಧಿಸಿ ಸೋತು ಸುಣ್ಣವಾಗಿರುವ ಸಿ.ಎಸ್.ನಿರಂಜನಕುಮಾರ್ ಈ ಬಾರಿಯಾದರೂ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿರುವಾಗಲೇ ಸೋಮಣ್ಣ ಅವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಹಿಂದೆಯೇ ಸೋಮಣ್ಣ ಅವರು ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಡಿದಾಗ ಸಿ.ಎಸ್.ನಿರಂಜನಕುಮಾರ್ ಬೆಂಬಲಿಗರು ಆಕ್ರೋಶಗೊಂಡಿದ್ದರಲ್ಲದೆ, ಈ ಸಂಬಂಧ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಆ ರೀತಿಯ ಯಾವುದೇ ಆಲೋಚನೆಗಳಿಲ್ಲ ಆರಾಮಾಗಿರಿ ಎಂದು ನಿರಂಜನಕುಮಾರ್ ಮತ್ತು ಬೆಂಬಲಿಗರಿಗೆ ಸಮಾಧಾನ ಹೇಳಿಕಳಿಸಿದ್ದರು.
ಗುಂಡ್ಲುಪೇಟೆಯಲ್ಲಿ ಸ್ಫೋಟಗೊಂಡ ಸುದ್ದಿ ದಿಟವಾದರೆ ಬಿಜೆಪಿಗೆ ಕಷ್ಟಕಷ್ಟ
ಇದರಿಂದ ನಿಟ್ಟುಸಿರು ಬಿಟ್ಟ ನಿರಂಜನಕುಮಾರ್ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದರು.
ಸೋಮಣ್ಣ ಅವರಿಗೆ ಗುಂಡ್ಲುಪೇಟೆ ಟಿಕೇಟ್?
ಆದರೆ ಮಾ.27ರಂದು ಸೋಮಣ್ಣ ಅವರು ಬಿ.ಎಸ್.ಯಡಿಯೂರಪ್ಪರವರ ಮನೆಗೆ ತೆರಳಿ ಗುಂಡ್ಲುಪೇಟೆಯಿಂದ ಸ್ಪರ್ಧಿಸಲು ಅನುವು ಮಾಡಿಕೊಂಡುವಂತೆ ಒತ್ತಾಯಿಸಿದ್ದು, ಇದಕ್ಕೆ ಬಿಎಸ್ ವೈ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ವದಂತಿಗಳು ಹರಡಿದ್ದು ಮತ್ತೆ ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಗುಂಡ್ಲುಪೇಟೆ ಕ್ಷೇತ್ರದ ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ರವರು ಇರುವ ತನಕ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅವರು ನಿಧನರಾಗಿ ಮತ್ತೆ ಉಪಚುನಾವಣೆ ನಡೆದಾಗ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಸ್ಪರ್ಧಿಸಿ ಗೆಲುವು ಪಡೆದಿದ್ದು ಮಾತ್ರವಲ್ಲದೆ ಸಚಿವರೂ ಆದರು.
ಗೆಲ್ಲುವ ವಿಶ್ವಾಸದಲ್ಲಿ ನಿರಂಜನ್ ಕುಮಾರ್
ಉಪಚುನಾವಣೆಯಾಗಿದ್ದರಿಂದ ಮತದಾರರ ಅನುಕಂಪ, ಆಡಳಿತ ಯಂತ್ರದ ಸಹಕಾರದಿಂದ ಗೀತಾ ಮಹದೇವಪ್ರಸಾದ್ ಗೆದ್ದಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಹಾಗಾಗುವುದಿಲ್ಲ. ಕ್ಷೇತ್ರದಲ್ಲಿ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಜನರ ಒಡನಾಟದಲ್ಲಿದ್ದೇನೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. ಈಗಾಗಲೇ ಸೋತು ಬಹಳಷ್ಟು ಕಳೆದುಕೊಂಡಿದ್ದೇನೆ. ಆದ್ದರಿಂದ ಈ ಬಾರಿ ನಾನು ಗೆಲ್ಲುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಟಿಕೆಟ್ ನನಗೆ ಕೊಡಿ ಎನ್ನುವುದು ನಿರಂಜನ್ ಕುಮಾರ್ ಅವರ ಮನವಿಯಾಗಿದೆ.
ಗುಂಡ್ಲುಪೇಟೆಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್!
ಬಿಜೆಪಿಯಲ್ಲೇ ಗೊಂದಲ
ಇದೀಗ ಇದ್ದಕ್ಕಿದ್ದಂತೆ ಸೋಮಣ್ಣ ಅವರು ಗುಂಡ್ಲುಪೇಟೆಯತ್ತ ಮುಖ ಮಾಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿರುವುದರಿಂದ ಬಿಜೆಪಿಯಲ್ಲೇ ಗೊಂದಲ ಸೃಷ್ಟಿಯಾಗುವ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಎರಡು ಬಣಗಳಾಗುವ ಸಾಧ್ಯತೆಯೂ ಇದೆ. ಇನ್ನು ಸೋಮಣ್ಣ ಅವರು ಸ್ಪರ್ಧಿಸಿದರೆ ಬಿಜೆಪಿಯ ಗೆಲುವಿಗೆ ಅನುಕೂಲವಾದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಇದರ ಲಾಭ ಕಾಂಗ್ರೆಸ್ ಗೆ ಜಾಸ್ತಿ. ಏಕೆಂದರೆ ಬಿಜೆಪಿ ಒಡೆದ ಮನೆಯಾಗಲಿದ್ದು, ನಿರಂಜನಕುಮಾರ್ ಬಣ ತಟಸ್ಥವಾಗಲೂಬಹುದು ಇದರಿಂದ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸುವ ಅವಕಾಶಗಳಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿಗೆ ಸಂಕಷ್ಟ ತಪ್ಪಿದ್ದಲ್ಲ
ಇನ್ನೊಂದೆಡೆ ಸತತ ಮೂರು ಸೋಲುಗಳನ್ನು ಕಂಡಿರುವ ಸಿ.ಎಸ್.ನಿರಂಜನಕುಮಾರ್ ಕಾಂಗ್ರೆಸ್ ಅಭ್ಯರ್ಥಿಗೆ ಸಮನಾಗಿ ಹಣ ಖರ್ಚು ಮಾಡಲು ಸಾಧ್ಯವಿಲ್ಲದ್ದರಿಂದ ಮತ್ತೊಮ್ಮೆ ಮುಖಭಂಗವಾಗುವುದನ್ನು ತಪ್ಪಿಸಲು ಬಿಜೆಪಿ ವರಿಷ್ಟರು ಸೋಮಣ್ಣನವರಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ, ನಿರಂಜನಕುಮಾರ್ ಅವರ ಮನವೊಲಿಸಿ ಅವರಿಗೆ ಬೇರೆ ಯಾವುದಾದರೂ ಹುದ್ದೆ ನೀಡುವ ಅಮಿಷವೊಡ್ಡಿ ಅವರನ್ನು ಸೋಮಣ್ಣ ಪರವಾಗಿ ಕೆಲಸ ಮಾಡುವಂತೆ ಮಾಡಿದರೆ ಬಹುಶಃ ಬಿಜೆಪಿಗೆ ಒಳಿತಾಗಲಿದೆ. ಇಲ್ಲದೆ ಹೋದರೆ ಇದರ ಲಾಭ ಕಾಂಗ್ರೆಸ್ ಆಗಲಿದೆ. ಇಲ್ಲಿ ಬಿಎಸ್ ಪಿ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿರುವ ಕಾರಣ ಮತಗಳು ಹಂಚಿಹೋಗಿ ಯಾರಿಗೆ ಗೆಲುವು ಸಾಧ್ಯವಾಗಲಿದೆಯೋ ಗೊತ್ತಿಲ್ಲ. ಬಿಜೆಪಿ ಶೀಘ್ರವೇ ಅಭ್ಯರ್ಥಿಗಳ ವಿಚಾರದಲ್ಲಿರುವ ಗೊಂದಲವನ್ನು ಪರಿಹರಿಸದೆ ಹೋದರೆ ಸಂಕಷ್ಟ ತಪ್ಪಿದಲ್ಲ.
ಚಾಮರಾಜನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು