ಹಂಪಿಗೆ ಮೂರು ಬಾರಿ ಭೇಟಿ ನೀಡಿದರೂ, ವಿರೂಪಾಕ್ಷನ ದರ್ಶನ ಮಾಡದ ಸಿಎಂ
Recommended Video
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವ ಭಯದಿಂದ ಯಡಿಯೂರಪ್ಪ ಆದಿಯಾಗಿ ಹೆಚ್ಚಿನ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆ ಪದ್ದತಿಗೆ ಬ್ರೇಕ್ ಹಾಕಿದ್ದು ಹಾಲೀ ಸಿಎಂ ಸಿದ್ದರಾಮಯ್ಯ. ಆದರೆ, ಹಂಪಿಗೆ ಭೇಟಿ ನೀಡುವ ಸಿಎಂ ವಿರೂಪಾಕ್ಷನ ದರ್ಶನ ಯಾಕೆ ಮಾಡುತ್ತಿಲ್ಲ?
ವಿಜಯನಗರದ ಭವ್ಯ ಪರಂಪರೆಯನ್ನು ಸ್ಮರಿಸಿಕೊಳ್ಳುವ 'ಹಂಪಿ ಉತ್ಸವ'ಕ್ಕೆ ಮುಖ್ಯಮಂತ್ರಿಗಳು ಹಂಪಿಯಲ್ಲಿ ಶುಕ್ರವಾರ (ನ 3) ಸಂಜೆ ಚಾಲನೆ ನೀಡಿದ್ದಾರೆ. ಸಿಎಂ ಆದ ನಂತರ ಹಂಪಿ ಉತ್ಸವವನ್ನು ಸಿದ್ದರಾಮಯ್ಯ ಉದ್ಘಾಟಿಸುತ್ತಿರುವುದು ಇದು ಮೂರನೇ ಬಾರಿ.
ನ.3ರಿಂದ ಹಂಪಿ ಉತ್ಸವ, ಈ ಬಾರಿ ವಿಶೇಷತೆ ಏನು
ಕಷ್ಟ ಬಂದಾಗ ದೇವರನ್ನು ಸ್ಮರಿಸಿಕೊಳ್ಲುವುದು, ದೇವಾಲಯಕ್ಕೆ ಹೋಗುವುದು ಪದ್ದತಿ, ಆದರೆ ದೇವರ ದರ್ಶನ ಮಾಡಿದರೆ ಕಷ್ಟ ಎದುರಾಗುತ್ತದೆ ಎನ್ನುವುದನ್ನು ಅದ್ಯಾರು ಹುಟ್ಟುಹಾಕಿದರೋ? ಒಟ್ಟಿನಲ್ಲಿ ಪರದೆಯ ಮುಂದೆ ಎಷ್ಟೇ ಮೌಢ್ಯ, ಮೂಢನಂಬಿಕೆ ಅಂದರೂ ಪರದೆಯ ಹಿಂದೆ ಅದನ್ನು ನಂಬುವವರೂ ಅಷ್ಟೇ ಜನರಿದ್ದಾರೆ. ಅದಕ್ಕೆ ರಾಜಕಾರಣಿಗಳೂ ಹೊರತಾಗಿಲ್ಲ.
ವಿಚಾರಕ್ಕೆ ಬರುವುದಾದರೆ, ಹಂಪಿ ವಿರೂಪಾಕ್ಷನ ದರ್ಶನ ಮಾಡಿದರೆ, ಅಧಿಕಾರ ಕಳೆದುಕೊಳ್ಳುತ್ತಾರೆ, ಇಲ್ಲವೇ ಕಷ್ಟಕಾರ್ಪಣ್ಯ ಎದುರಿಸಬೇಕಾಗುತ್ತದೆ ಎನ್ಜುವ ನಂಬಿಕೆ/ಮೂಢನಂಬಿಕೆ ಇಂದಿರಾ ಗಾಂಧಿ ಕಾಲದಿಂದಲೂ ಇದೆ. ಇದಕ್ಕೆ ಪೂರಕ ಎನ್ನುವಂತೆ, ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅಧಿಕಾರ ಕಳೆದುಕೊಂಡ ಉದಾಹರಣೆಗಳೂ ಇರುವುದರಿಂದ, ದಶಕಗಳ ಈ ನಂಬಿಕೆ ಇನ್ನೂ ಜೀವಂತವಾಗಿದೆ.
ಮೂಢನಂಬಿಕೆ ಕಾನೂನನ್ನು ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ತರಲು ಮುಂದಾಗಿರುವ ಸಿದ್ದರಾಮಯ್ಯ, ಈ ಹಿಂದೆ ಎರಡು ಬಾರಿ ಹಂಪಿ ಉತ್ಸವವನ್ನು ಉದ್ಘಾಟಿಸಿದ್ದರೂ, ವಿರೂಪಕ್ಷನ ದರ್ಶನ ಪಡೆದಿರಲಿಲ್ಲ. ಈ ಬಾರಿಯಾದರೂ ದೇಗುಲ ಪ್ರವೇಶಿಸುತ್ತಾರಾ ಎನ್ನುವ ಎನ್ನುವ ಕುತೂಹಲ ಸ್ಥಳೀಯರಲ್ಲಿ ಮನೆಮಾಡಿತ್ತು.
ಆದರೆ, ಈ ಬಾರಿಯೂ ಸಿಎಂ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗದೆ, ಹಂಪಿ ಉತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮುಂದೆ ಓದಿ..
ಆಸ್ತಿಕನೋ, ನಾಸ್ತಿಕನೋ ಎನ್ನುವುದನ್ನು ಸ್ಪಷ್ಟ ಪಡಿಸಬೇಕಾಗಿ ಬಂದಿದೆ
ತಮ್ಮ ಇದುವರೆಗಿನ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಗಳು ತಮ್ಮನ್ನು ಜನತೆಯ ಮುಂದೆ ತೋರಿಸಿಕೊಂಡ ರೀತಿಯಿಂದಾಗಿ, ತಾನು ಆಸ್ತಿಕನೋ ಅಥವಾ ನಾಸ್ತಿಕನೋ ಎನ್ನುವುದನ್ನು ಹಲವು ಬಾರಿ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು. ನಾನು ನಾಸ್ತಿಕನಲ್ಲ ಎಂದು ಹಲವು ಬಾರಿ ಸಿಎಂ ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇ ಲೇಟೆಸ್ಟ್ ಉದಾಹರಣೆ.
ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ಭಯ
ರಾಜಕಾರಣಿಗಳು ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆಂದು ಅಂದೆಂದೋ ಯಾರೋ ಹುಟ್ಟುಹಾಕಿದ ಸುದ್ದಿಗೆ ಈಗಲೂ ಮಹತ್ವವಿದೆ. ಅದಕ್ಕೆ ಪೂರಕ ಎನ್ನುವಂತೆ ಈ ಹಿಂದೆ ಎರಡು ಬಾರಿ ಮತ್ತು ಶುಕ್ರವಾರ (ನ 3) ಕೂಡಾ ಸಿಎಂ ದೇವಸ್ಥಾನಕ್ಕೆ ಭೇಟಿಯಾಗದೇ ಇದ್ದದ್ದು (ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ) ಮತ್ತೆ ಮೌಢ್ಯ/ಮೂಢನಂಬಿಕೆ ವಿಚಾರ ಚರ್ಚೆಗೆ ಬರುವಂತಾಗಿದೆ.
ಸಿಎಂ ಆಗಿದ್ದ ಯಡಿಯೂರಪ್ಪ ಕೂಡಾ ಬಂದಿದ್ದರು
ವಿಜಯನಗರ ಸಾಮ್ರಾಜ್ಯದ ಒಡೆಯ ಶ್ರೀಕೃಷ್ಣದೇವರಾಯನ ಐನೂರನೇ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಕೆಲವು ವರ್ಷದ ಹಿಂದೆ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮವನ್ನು ಅಂದಿನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದರು. ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ಧನ ರೆಡ್ಡಿ ಕಾರ್ಯಕ್ರಮ ಆಯೋಜಿಸಿ, ವಿರೂಪಾಕ್ಷನ ದರ್ಶನ ಮಾಡಿದ್ದರು. ಆ ನಂತರ, ಈ ಇಬ್ಬರಿಗೂ ರಾಜಕೀಯ ಜೀವನದಲ್ಲಿ ಹಿನ್ನಡೆಯಾಗಿತ್ತು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ,ಎಲ್ ಕೆ ಅಡ್ವಾಣಿ,
ಇಂದಿರಾ ಗಾಂಧಿ, ರಾಜೀವ್ ಗಾಂಧಿ,ಎಲ್ ಕೆ ಅಡ್ವಾಣಿ, ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಮುಂತಾದವರು ಹಂಪಿಗೆ ವಿರೂಪಾಕ್ಷನ ದರ್ಶನ ಪಡೆದಿದ್ದರು. ಇದಾದ ನಂತರ ಇವರೆಲ್ಲಾ ಒಂದಲ್ಲಾ ಒಂದು ತೊಂದರೆ ಎದುರಿಸುವಂತಾಯಿತು ಎನ್ನುವುದು ಇಲ್ಲಿ ಕೇಳಿಬರುತ್ತಿರುವ ಮಾತು.
ಮೂರು ಬಾರಿ ಹೋದರೂ ದೇವಸ್ಥಾನಕ್ಕೆ ಹೋಗಿಲ್ಲ
ಒಟ್ಟಿನಲ್ಲಿ ಸಿಎಂ ಆಗಿ ಮೂರು ಬಾರಿ ಹಂಪಿಗೆ ಭೇಟಿ ನೀಡಿದರೂ, ವಿರೂಪಾಕ್ಷನ ದರ್ಶನ ಮಾಡದೇ ಸಿದ್ದರಾಮಯ್ಯ ವಾಪಸ್ ಬಂದಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ಜನರು ನೋಡುವ ಮತ್ತು ಮಾತಾನಾಡಿಕೊಳ್ಲುವ ರೀತಿ ಬೇರೆಯದ್ದೇ ಇರುತ್ತೆ. ಈ ಹಿಂದೆ ಎಂ ಪಿ ಪ್ರಕಾಶ್ ಜೊತೆ ವಿರೂಪಾಕ್ಷನ ದರ್ಶನ ಮಾಡಿದ್ದೆ ಎಂದು ಸಿಎಂ ಶುಕ್ರವಾರ ಹೇಳಿಕೆ ನೀಡಿ, ಬೆಂಗಳೂರಿಗೆ ಹೆಲಿಕಾಪ್ಟರ್ ಹತ್ತಿದರು.