ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮೂರು ಹೆಸರು ಶಿಫಾರಸು; ಯಾರವರು?
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಯಾರು?. 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಳಿಕ ಈ ಪ್ರಶ್ನೆ ಎದ್ದಿದೆ. ಮೂಲ ಕಾಂಗ್ರೆಸ್ ಮತ್ತು ವಲಸಿಗರಲ್ಲಿ ಯಾರಿಗೆ ಹುದ್ದೆ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಉಪ ಚುನಾವಣೆ ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಮುನ್ನಡೆಸುವವರು ಯಾರು? ಎಂಬ ಚರ್ಚೆಗಳು ಆರಂಭವಾದವು.
ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮಧುಸೂದನ್ ಮಿಸ್ತ್ರೀ ನೇತೃತ್ವದ ಹೈಕಮಾಂಡ್ ನಾಯಕರ ನಿಯೋಗ ರಾಜ್ಯಕ್ಕೆ ಬಂದು ವಿವಿಧ ನಾಯಕರ ಅಭಿಪ್ರಾಯವನ್ನು ಸಂಗ್ರಹ ಮಾಡಿತ್ತು.
ಹೈಕಮಾಂಡ್ ನಾಯಕರ ನಿಯೋಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮೂವರು ನಾಯಕರ ಹೆಸರು ಶಿಫಾರಸು ಮಾಡಲಾಗಿದೆ. ಮೂವರಲ್ಲಿ ಯಾರಿಗೆ ಪಟ್ಟ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸೋನಿಯಾ ಗಾಂಧಿಗೆ ಶಿಫಾರಸು
ಮಧುಸೂದನ್ ಮಿಸ್ತ್ರಿ, ಭಕ್ತ ಚರಣದಾಸ್ ಎಐಸಿಸಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಕುರಿತು ವರದಿ ನೀಡಿದ್ದಾರೆ. ಮೂವರು ನಾಯಕರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಯಾರನ್ನು ಆಯ್ಕೆ ಮಾಡಲಾಗುತ್ತದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಸೋನಿಯಾ ಗಾಂಧಿ ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.
ಮೂವರು ನಾಯಕರು ಯಾರು?
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೆ. ಎಚ್. ಮುನಿಯಪ್ಪ, ಡಿ. ಕೆ. ಶಿವಕುಮಾರ್ ಮತ್ತು ಬಿ. ಕೆ. ಹರಿಪ್ರಸಾದ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಕಳೆದ ವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮಧುಸೂದನ್ ಮಿಸ್ತ್ರಿ, ಭಕ್ತ ಚರಣದಾಸ್ ವಿವಿಧ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಈ ಶಿಫಾರಸು ಮಾಡಿದ್ದಾರೆ.
ಡಿ. ಕೆ. ಶಿವಕುಮಾರ್ ಹೆಸರು
ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಹಲವು ದಿನಗಳಿಂದ ಡಿ. ಕೆ. ಶಿವಕುಮಾರ್ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ. ಹೈಕಮಾಂಡ್ ಈ ಬಾರಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಕನಕಪುರದ ಬಂಡೆಗೆ ವಹಿಸಲಿದೆಯೇ? ಕಾದು ನೋಡಬೇಕು.
ಬಿ. ಕೆ. ಹರಿಪ್ರಸಾದ್
ರಾಜ್ಯಸಭಾ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಹರಿಪ್ರಸಾದ್ ಹೆಸರನ್ನು ಸಹ ಶಿಫಾರಸು ಮಾಡಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲು ಕಂಡಿರುವ ಹರಿಪ್ರಸಾದ್ ಎಐಸಿಸಿ ವಲಯದಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ. ವಿವಿಧ ರಾಜ್ಯಗಳ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅವರು ಅಪರಿಚಿತರು.
ಕೆ. ಎಚ್. ಮುನಿಯಪ್ಪ ಹೆಸರು
2019ರ ಲೋಕಸಭಾ ಚುನಾವಣೆಯಲ್ಲಿ ಸೋತ ಕೆ. ಎಚ್. ಮುನಿಯಪ್ಪ ಹೆಸರು ಸಹ ಶಿಫಾರಸು ಮಾಡಲಾಗಿದೆ. ಕೇಂದ್ರದ ಮಾಜಿ ಸಚಿವರಾದ ಮುನಿಯಪ್ಪ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಲು ಪ್ರಯತ್ನವನ್ನು ನಡೆಸುತ್ತಿದ್ದಾರೆ.