ನಿಧಾನಗತಿಗೂ ಒಂದಿಷ್ಟು ಪ್ರಾಶಸ್ತ್ಯ ನೀಡಿ, ಇಲ್ಲಂದ್ರೆ ಹೀಗೆ ಆಗೋದು!
ರಾಯಚೂರು, ಮೇ 24 : ಇಂದಿನ ವೇಗದ ಬದುಕಿನಲ್ಲಿ ನಿಧಾನಗತಿಗೂ ಒಂದಿಷ್ಟು ಪ್ರಾಶಸ್ತ್ಯ ಕೊಡಲೇಬೇಕು. ಎಲ್ಲವೂ ಅವಸರ ಅವಸರವಿದ್ದರೇ ಒಂದಲ್ಲ ಒಂದು ಎಡವಟ್ಟು ಆಗುವುದಂತೂ ಸತ್ಯ ಎಂಬುವುದಕ್ಕೆ ಒಂದು ನಿದರ್ಶನ ಇಲ್ಲಿದೆ.
ಕಾರ್ಯಕ್ರಮವೊಂದನ್ನು ವೀಕ್ಷಿಸಲೆಂದು ಅವಸರ ಅವಸರದಲ್ಲಿ ಹಳಿ ದಾಟುವ ವೇಳೆ ಇನ್ನು ಬಾಳಿ ಬದುಕಬೇಕಿದ್ದ ಮೂವರು ರೈಲಿನ ದವಡೆಗೆ ಸಿಲುಕಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ಘಟನೆ ಬುಧವಾರ ಸಂಜೆ ರಾಯಚೂರಿನಲ್ಲಿ ನಡೆದಿದೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಸ್ಥ ಉಜ್ಜೀವನ ಕೂಟಗಳ ಕಾರ್ಯಕ್ರಮ ವೀಕ್ಷಿಸಲು ಹೋಗುವಾಗ ರೈಲ್ವೆ ಹಳಿ ದಾಟುವ ವೇಳೆ ರಾಯಚೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ರೈಲು ಡಿಕ್ಕಿ ಹೊಡೆದಿದೆ.
ಮೃತರೆಲ್ಲಾ ನಗರದ ಕುಲಸುಂಬಿ ಕಾಲೋನಿ ನಿವಾಸಿಗಳಾದ 23 ರಿಂದ 27 ವರ್ಷದ ಆಸುಪಾಸಿನ ಯುವಕರಾಗಿರುವ ವೀರೇಶ್, ಯೇಸುರಾಜ್, ಆಂಜಿನೇಯಾ ಎಂದು ಗುರುತಿಸಲಾಗಿದೆ.
ವೀರೇಶ್ ಎಂಬವರಿಗೆ 15 ದಿನಗಳ ಹಿಂದೆ ಅಷ್ಟೇ ವಿವಾಹವಾಗಿತ್ತು ಎನ್ನುಲಾಗಿದೆ. ಈ ಸಂಬಂಧ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.