ನಾಯಿ ಕಂಡರೆ ನಿಮಗೆ ಪ್ರೀತಿಯಾ? ಹಾಗಿದ್ದಲ್ಲಿ ತಪ್ಪದೇ ಇದನ್ನು ನೀವು ತಿಳಿದಿರಬೇಕು!
ಬೆಂಗಳೂರು, ಸೆ. 27: ವಿಶ್ವದಲ್ಲಿ ರೇಬಿಸ್ ರೋಗಕ್ಕೆ ಪ್ರತಿ ವರ್ಷ 55 ಸಾವಿರ ಜನರು ಬಲಿಯಾಗುತ್ತಾರೆ. ನಮ್ಮ ದೇಶದಲ್ಲಿ ರೇಬಿಸ್ ರೋಗಕ್ಕೆ ಪ್ರತಿ ವರ್ಷ ಬಲಿಯಾಗುವವರ ಸಂಖ್ಯೆ 22 ಸಾವಿರ ಮಂದಿ ಎಂಬುದು ಅಘಾತಕಾರಿ ಅಂಶ. ಆದರೂ ಸಕಾಲದಲ್ಲಿ ಜಾಗೃತಿ ವಹಿಸಿದಲ್ಲಿ ರೇಬಿಸ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆ. ಸೆಪ್ಟಂಬರ್ 28ರಂದು ಜಗತ್ತಿನಾದ್ಯಂತ 'ವಿಶ್ವ ರೇಬೀಸ್ ದಿನ'ವನ್ನು ಆಚರಿಸಲಾಗುತ್ತದೆ. ಸೆ. 28 ರೇಬಿಸ್ ರೋಗಕ್ಕೆ ಲಸಿಕೆ ಕಂಡು ಹಿಡಿದ ವಿಜ್ಞಾನಿ ಸರ್ ಲೂಯಿ ಪ್ಯಾಶ್ಚರ್ ಮರಣ ಹೊಂದಿದ ದಿನ. ಅವರ ನೆನಪಿಗಾಗಿ 'ವಿಶ್ವ ರೇಬಿಸ್ ದಿನ'ವನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶ್ವಾನ ಪ್ರೀಯರಿಗೆ ಸಮಾಧಾನ ಕೊಡುವ ಸುದ್ದಿಯನ್ನು ಕೊಟ್ಟಿದೆ.
ವಿಶ್ವ ರೇಬಿಸ್ ದಿನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಉಚಿತವಾಗಿ ನಾಯಿಗಳಿಗೆ ಲಸಿಕೆ ಹಾಕಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ. ಜಾಗತಿಕವಾಗಿ ರೇಬೀಸ್ ರೋಗದ ನಿರ್ಮೂಲನೆಗಾಗಿ ಜಾಗೃತಿ ಮೂಡಿಸಲು, ಪ್ರತಿ ವರ್ಷ ಸೆಪ್ಟಂಬರ್ 28 ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ರೇಬಿಸ್ ರೋಗದ ಕುರಿತು ಅರಿವು ಮೂಡಿಸುವ ಹಾಗೂ ಉಚಿತ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಇಷ್ಟೇ ಅಲ್ಲ ರೇಬಿಸ್ ರೋಗದ ಕುರಿತು ಮತ್ತಷ್ಟು ಮುಂಜಾಗ್ರತೆ ವಹಿಸುವುದು ಹೇಗೆ? ಮುಂದಿದೆ ಮಾಹಿತಿ.
ನಾಳೆ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ!
ಬೀದರ್ನ ಪಾಲಿಕ್ಲಿನಿಕ್ನಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಮಂಗಳವಾರ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ 28ರಿಂದ 30ರ ವರೆಗೆ 3 ದಿನಗಳ ಕಾಲ ಉಚಿತ ಲಸಿಕೆ ನೀಡಲಾಗುತ್ತದೆ. ಮನೆಯಲ್ಲಿನ ಮುದ್ದು ಪ್ರಾಣಿಗಳ ಎಂದು ಪರಿಗಣಿಸ್ಪಡುವ ನಾಯಿಗಳ ಆರೋಗ್ಯದ ದೃಷ್ಟಿಯಿಂದ ನಿಮ್ಮ ಹತ್ತಿರದ ಪಶು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿ ಎಂದು ಸಚಿವ ಚೌಹಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರೇಬಿಸ್ ಮನುಷ್ಯರಿಗೆ ಹೇಗೆ ಹರಡುತ್ತದೆ?
ರೇಬೀಸ್ನಿಂದ ನರಳುತ್ತಿರುವ ಪ್ರಾಣಿಯು ನಮ್ಮನ್ನು ಕಚ್ಚಿದಾಗ ಅಥವಾ ನೆಕ್ಕಿದಾಗ ಶರೀರದೊಳಗೆ ರೇಬಿಸ್ ವೈರಾಣು ಪ್ರವೇಶಿಸುತ್ತದೆ. ಬಳಿಕ ಅದು ರೇಬೀಸ್ ರೋಗವನ್ನುಂಟು ಮಾಡುತ್ತದೆ. ರೇಬೀಸ್ನಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ರೇಬಿಸ್ ವೈರಾಣು ಇತರೆ ಪ್ರಾಣಿಗಳಿಗೆ ಹರಡುತ್ತದೆ. ನಾಯಿ, ಬೆಕ್ಕು, ಕುರಿ, ಮೇಕೆ, ಹಸು, ಎಮ್ಮೆ, ಕೋತಿ, ತೋಳ, ನರಿ, ಕರಡಿ, ಮುಂಗುಸಿ, ಹಂದಿ, ಕತ್ತೆ, ಕುದುರೆ ಮತ್ತು ಒಂಟೆಗಳಿಂದ ರೇಬೀಸ್ ಹರಡುತ್ತದೆ. ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚುನಾಯಿ ಕಡಿತದಿಂದ ರೇಬೀಸ್ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ನಾಯಿಗಳಲ್ಲಿ ರೇಬಿಸ್ ರೋಗದ ಲಕ್ಷಣಗಳು!
ಶ್ವಾನಕ್ಕೆ ಉಗ್ರವಾದ ಹುಚ್ಚು ಇದ್ದಲ್ಲಿ, ಜೊಲ್ಲು ಸುರಿಸುವಿಕೆ, ಎಲ್ಲರ ಮೇಲೆ ಏರಿಹೋಗಿ ಕಚ್ಚಲು ಪ್ರಯತ್ನಿಸುವುದು, ಕರೆಗೆ ಪ್ರತಿಕ್ರಿಯೆ ನೀಡದಿರುವುದು, ಕ್ರಮೇಣ ಧ್ವನಿಯಲ್ಲಿ ವ್ಯತ್ಯಾಸ, ಗೊಂದಲ ಪಡುವುದು, ನಂತರ ಪಾರ್ಶ್ವವಾಯು ಕಾಣಿಸಿಕೊಂಡ 8 ರಿಂದ 10 ದಿನಗಳಲ್ಲಿ ನಾಯಿ ಸಾಯುತ್ತದೆ. ನಾಯಿಗೆ ಮಂದ ಹುಚ್ಚು ಇದ್ದಲ್ಲಿ ಮೂಲೆಯಲ್ಲಿ ಮುದುಡಿ ಕೂತಿರುವುದು, ಊಟ ಮಾಡದಿರುವುದು, ಗಂಟಲು ಊದುವಿಕೆ, ತೆರೆದ ಬಾಯಿಯನ್ನು ಮುಚ್ಚಲಾಗದೆ ಅಂತಹ ನಾಯಿ ಸಾವನ್ನಪ್ಪುತ್ತದೆ. ಹೀಗಾಗಿ ಮನುಷ್ಯರಿಗೆ ಹೆಚ್ಚಾಗಿ ಹುಚ್ಚುನಾಯಿಗಳಿಂದಲೇ ರೇಬಿಸ್ ತಗಲುತ್ತದೆ ಎಂಬ ವರದಿಯಿದೆ.
Recommended Video
ರೇಬಿಸ್ ರೋಗದಿಂದ ರಕ್ಷಣೆ ಹೇಗೆ?
ಒಂದೊಮ್ಮೆ ಹುಚ್ಚು ನಾಯಿ ಕಚ್ಚಿದಲ್ಲಿ ತಕ್ಷಣ ಭಯಪಡುವ ಅಗತ್ಯವಿಲ್ಲ. ಆದರೆ ಸ್ವಲ್ಪ ನಿರ್ಲಕ್ಷ ತೋರಿದರೂ ಜೀವಕ್ಕೆ ಅಪಾಯ ನಿಶ್ಚಿತ. ಹೀಗಾಗಿ ಮನುಷ್ಯ ಅಥವಾ ಪ್ರಾಣಿಗಳಿಗೆ ನಾಯಿ ಕಚ್ಚಿದ ತಕ್ಷಣ ಆ ಗಾಯವನ್ನು ಸಾಬೂನು ಹಾಗೂ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕಚ್ಚಿದ ಗಾಯಕ್ಕೆ ಡೆಟಾಲ್, ಸಾವಲಾನ್, ಪೊವೀಡೀನ್ ಐಯೋಡೀನ್ನಂತಹ ರೋಗ ನಿರೋಧಕ ಔಷಧಿಯನ್ನು ಹಚ್ಚಬೇಕು. ಯಾವುದೇ ಕಾರಣಕ್ಕೂ ಗಾಯದ ಭಾಗವನ್ನು ಬ್ಯಾಂಡೇಜ್ ಅಥವಾ ಬಟ್ಟೆಯಿಂದ ಕಟ್ಟಲೇಬಾರದು.
ಜೊತೆಗೆ ರಕ್ತ ಬಂದಂತಹ ಗಾಯವಾದರೆ, ಕೂಡಲೇ ರೇಬಿಸ್ ಇಮ್ಯೂನೋಗ್ಲೋಬುಲಿನ್ ಚುಚ್ಚುಮದ್ದನ್ನು ಕೊಡಿಸಬೇಕು. ಹುಚ್ಚು ನಾಯಿ ಕಡಿತಕ್ಕೊಳಗಾದ ಮನುಷ್ಯ ಅಥವಾ ಜಾನುವಾರುಗಳಿಗೆ 0, 3, 7, 14 ಹಾಗೂ 28ನೇ ದಿನಗಳಂದು ತಪ್ಪದೇ ರೇಬಿಸ್ ಲಸಿಕೆಯನ್ನು ಕೊಡಿಸಬೇಕು.