ಮೂಲ ಬಿಜೆಪಿ ಶಾಸಕರಿಗೆ ಸಚಿವರಾಗುವ 'ಯೋಗ' ತಪ್ಪಿದ್ದು ಏಕೆ?
Recommended Video
ಬೆಂಗಳೂರು, ಫೆಬ್ರವರಿ 06 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟಕ್ಕೆ ಇಂದು 10 ಶಾಸಕರು ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ, ಮೂಲ ಬಿಜೆಪಿ ಶಾಸಕರು ಸಚಿವರಾಗುತ್ತಿಲ್ಲ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವರಾಗುವ ಅವಕಾಶ ಸಿಕ್ಕಿದೆ.
ರಾಜಭವನದಲ್ಲಿ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ 10 ಶಾಸಕರು ಯಡಿಯೂರಪ್ಪ ಸಂಪುಟಕ್ಕೆ ಸೇರಲಿದ್ದಾರೆ. ಹತ್ತು ಶಾಸಕರ ಸೇರ್ಪಡೆ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ 6 ಸಚಿವ ಸ್ಥಾನಗಳು ಖಾಲಿ ಉಳಿಯಲಿವೆ.
ಸಂಪುಟ ವಿಸ್ತರಣೆ; ಕೊನೆ ಕ್ಷಣದಲ್ಲಿ ಹೈಕಮಾಂಡ್ ಕೊಟ್ಟ ಟ್ವಿಸ್ಟ್!
ಮೂವರು ಮೂಲ ಬಿಜೆಪಿ ಶಾಸಕರು ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿತ್ತು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಇದಕ್ಕೆ ತಡೆ ನೀಡಿದೆ. ಈ ಮೂಲಕ ಸಚಿವರಾಗುವ ಪೈಪೋಟಿಯಲ್ಲಿದ್ದ ಶಾಸಕರಿಗೆ ಹಿನ್ನಡೆ ಉಂಟಾಗಿದೆ.
ಸಂಪುಟ ವಿಸ್ತರಣೆ ಪಟ್ಟಿ : 10 ಶಾಸಕರಿಗೆ 'ಗುರು'ಬಲ
ಸದ್ಯ ಯಡಿಯೂರಪ್ಪ ಸಂಪುಟದಲ್ಲಿ ಖಾಲಿ ಉಳಿಯುವ 6 ಸಚಿವ ಸ್ಥಾನಗಳಲ್ಲಿ ಎರಡು ಕ್ಷೇತ್ರದ ಉಪ ಚುನಾವಣೆ ಬಾಕಿ ಇದೆ. ಉಳಿದಂತೆ 4 ಸ್ಥಾನಗಳು ಮಾತ್ರ ಖಾಲಿ ಉಳಿಯುತ್ತದೆ. ಅದಕ್ಕಾಗಿ ಡಜನ್ಗೂ ಅಧಿಕ ಮೂಲ ಬಿಜೆಪಿ ಶಾಸಕರು ಆಕಾಂಕ್ಷಿಗಳಾಗಿದ್ದಾರೆ.
ಆರಿದ್ರಾ ಲಗ್ನದಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ಅಚ್ಚರಿ
ಯಡಿಯೂರಪ್ಪ ಹೇಳಿದ್ದೇನು?
ಬುಧವಾರ ಸಂಜೆ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ನೀಡಲು ಹಿಂದೆಯೇ ತೀರ್ಮಾನಿಸಲಾಗಿದೆ. ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದೇನೆ. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ. ಅವರಿಗೆ ಬೇರೆ ಜವಾಬ್ದಾರಿ ನೀಡಲಾಗುವುದು" ಎಂದರು.
ಮೂವರಿಗೆ ಕೈ ತಪ್ಪಿದ ಸಚಿವ ಸ್ಥಾನ
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಗುರುವಾರ ಉಮೇಶ್ ಕತ್ತಿ, ಸಿ. ಪಿ. ಯೋಗೇಶ್ವರ, ಅರವಿಂದ ಲಿಂಬಾವಳಿ/ಹಾಲಪ್ಪ ಆಚಾರ್ ಯಡಿಯೂರಪ್ಪ ಸಂಪುಟವನ್ನು ಸೇರಬೇಕಿತ್ತು. ಆದರೆ, ಹೈಕಮಾಂಡ್ ಯಡಿಯೂರಪ್ಪಗೆ ಕರೆ ಮಾಡಿ 10 ಜನರನ್ನು ಮಾತ್ರ ಸೇರಿಸಿಕೊಳ್ಳಬೇಕು ಎಂದು ಸೂಚಿಸಿತು. ಈ ಬಗ್ಗೆ ಪಕ್ಷದ ವಲಯದಲ್ಲಿ ಈಗ ಚರ್ಚೆಗಳು ಆರಂಭವಾಗಿದೆ.
ಯೋಗೇಶ್ವರ ಅವರಿಂದ ಅಡ್ಡಿ?
ಚನ್ನಪಟ್ಟಣದ ಮಾಜಿ ಶಾಸಕ ಸಿ. ಪಿ. ಯೋಗೇಶ್ವರ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ನಡುವೆ ಒಮ್ಮತ ಮೂಡಿಲ್ಲ. ಇದರಿಂದಾಗಿ ಮೂಲ ಬಿಜೆಪಿ ಶಾಸಕರು ಸಂಪುಟ ಸೇರುವುದು ಬೇಡ ಎಂಬ ಸಂದೇಶವನ್ನು ಹೈಕಮಾಂಡ್ ಕಳಿಸಿದೆ.
ಲಕ್ಷ್ಮಣ ಸವದಿಗೆ ಸಂಪುಟದಲ್ಲಿ ಸ್ಥಾನ
ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಸೋತ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಅಸಮಾಧಾನ ಹೆಚ್ಚಾಗುವ ಹಿನ್ನಲೆಯಲ್ಲಿ ಮೂವರು ಸಂಪುಟ ಸೇರದಂತೆ ತಡೆ ನೀಡಲಾಗಿದೆ. ಆದರೆ, ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟು ಸಂಪುಟಕ್ಕೆ ಬಿಜೆಪಿಗೆ ಸೇರಿಸಿಕೊಂಡಿದೆ.