ಮಿ. ಕಟೀಲ್, ನಿಮ್ಮ ಊರಿನ 8 ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡಿಸಲಾಗಲಿಲ್ಲವೇ?
ಬಿಜೆಪಿಗೆ ವಲಸೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯಾವ ಜಿಲ್ಲೆಗಳಿಗೆ ಸಿಂಹಪಾಲು ಹೋಗಿದೆ ಎಂದರೆ, ಮೊದಲೆರಡು ಸ್ಥಾನ ಬೆಂಗಳೂರು (7) ಮತ್ತು ಬೆಳಗಾವಿಗೆ (4).
ಹಾಗಾಂತ, ಬೇರೆ ಜಿಲ್ಲೆಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ ಎಂದಲ್ಲ. ಆದರೆ, ತೀವ್ರ ಲಾಬಿ ನಡೆಸಿ, ಪಕ್ಷಕ್ಕೆ ಮುಜುಗರತಂದೊಡ್ಡುವ ಕೆಲಸವನ್ನು ಮಾಡಿದವರಲ್ಲ(ಕೆಲವೊಂದು ಅಪವಾದ ಹೊರತು ಪಡಿಸಿ). ಅದರಲ್ಲೂ, ಪ್ರಮುಖವಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರು. ಸಂಘ ಪರಿವಾರದ ಜೊತೆ ಉತ್ತಮ ಒಡನಾಟ ಹೊಂದಿರುವ ಕಟೀಲ್, ದೆಹಲಿ ಮಟ್ಟದಲ್ಲಿ ಪ್ರಭಾವೀ ಮುಖಂಡರು ಬೇರೆ.
ತನಗೂ ಇಲ್ಲ, ಇನ್ನೊಬ್ಬರಿಗೂ 'ಮಂತ್ರಿಗಿರಿ' ಇಲ್ಲದಂತೆ ಮಾಡಿದ ಸೈನಿಕ ಯೋಗೀಶ್ವರ್
ಇವರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳು ಎಂಟು. ಅದರಲ್ಲಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಏಳು ಕ್ಷೇತ್ರವನ್ನು. ಕಾಂಗ್ರೆಸ್ಸಿನ ಯು.ಟಿ.ಖಾದರ್ ಬಿಟ್ಟರೆ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ ಸೋಲುಂಡಿತ್ತು.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳು ಐದು
ಇನ್ನು ಪಕ್ಕದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳು ಐದು. ಬಿಜೆಪಿ ಇಲ್ಲಿ ಕಳೆದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧನೆಗೈದಿತ್ತು. ಇದರಲ್ಲಿ ಕಾರ್ಕಳದಿಂದ ಸುನಿಲ್ ಕುಮಾರ್, ಕುಂದಾಪುರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಲವು ಬಾರಿ ಚುನಾವಣೆಯನ್ನು ಗೆದ್ದವರು. ಆದರೆ, ಪರಿಷತ್ ಸದಸ್ಯರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಬಿಟ್ಟರೆ, ಜಿಲ್ಲೆಯ ಯಾವ ಶಾಸಕರಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿ
ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿನ ಸುಳ್ಯ ಅಸೆಂಬ್ಲಿ ಕ್ಷೇತ್ರದಿಂದ ಬಿಜೆಪಿಯ ಎಸ್. ಅಂಗಾರ ಸತತವಾಗಿ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಮೀಸಲು ಕ್ಷೇತ್ರವಾದ ಇಲ್ಲಿ, ದಶಕಗಳಿಂದ ಮತದಾರ ಬಿಜೆಪಿ ಮೇಲೆ ತನ್ನ ನಿಷ್ಠೆಯನ್ನು ತೋರುತ್ತಿದ್ದಾನೆ. ಅರ್ಹತೆ ಆಧಾರದಲ್ಲಿ ಅಂಗಾರ ಅವರಿಗೆ ಸಚಿವ ಸ್ಥಾನ ದಕ್ಕಬೇಕಾಗಿದ್ದರೂ, ಅದೃಷ್ಟ ಅವರಿಗೆ ಕೂಡಿಬಂದಿಲ್ಲ.
ಕುಮಟಳ್ಳಿ ಅದೇನು ಪಾಪ ಮಾಡಿದ್ರೋ, ಬಿಜೆಪಿ ಕಚೇರಿ ಕಸ ಗುಡ್ಸೋದೆ ಪಕ್ಕಾ ಆಯ್ತಾ?
ಸಚಿವ ಸ್ಥಾನಕ್ಕೆ ಲಾಬಿ ನಡೆಸುವವನಲ್ಲ, ಅಂಗಾರ
"ನಾನು ಸಚಿವ ಸ್ಥಾನಕ್ಕೆ ಲಾಬಿ ನಡೆಸುವವನಲ್ಲ. ನನ್ನ ಕೆಲಸವನ್ನು ಗುರುತಿಸಿ ಆ ಜವಾಬ್ದಾರಿಯನ್ನು ನೀಡಿದರೆ, ಅದನ್ನು ನಿಭಾಯಿಸುತ್ತೇನೆ. ಸಚಿವ ಸ್ಥಾನ ಸಿಗಲಿಲ್ಲವೆಂದು, ಪಕ್ಷ ವಿರೋಧಿ ಚಟುವಟಿಕೆ ನಡೆಸುವವನು ನಾನಲ್ಲ" ಇದು ಶಾಸಕ ಅಂಗಾರ ನೀಡಿದ್ದ ಪಕ್ಷದ ಮೇಲಿನ ನಿಯತ್ತಿನ ಹೇಳಿಕೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಉತ್ತಮ ಬಾಂಧವ್ಯ
ನಳಿನ್ ಕಟೀಲ್ ಕೂಡಾ ಸತತವಾಗಿ ಸಂಸತ್ತಿಗೆ ಆಯ್ಕೆಯಾಗುತ್ತಿರುವವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ (ಸಂಘಟನೆ) ಜೊತೆಗೂ, ಒಡನಾಟವನ್ನು ಹೊಂದಿರುವವರು. ಆದರೂ, ದಕ್ಷಿಣಕನ್ನಡ ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ಒಲಿಯಲಿಲ್ಲ.
ಜಿಲ್ಲೆಯ ಯಾವ ಶಾಸಕರೂ ಅದಕ್ಕೆ ಮುಂದಾಗುವುದು ಸಂಶಯ
ಜಿಲ್ಲೆಯ ಏಳು ಬಿಜೆಪಿ ಶಾಸಕರ ಪೈಕಿ, ಹೆಚ್ಚಿನವರು ಮೊದಲ ಬಾರಿಗೆ ಆಯ್ಕೆಯಾದವರು. ಆದರೂ, ಅನುಭವಿಯಾಗಿರುವ ಅಂಗಾರ ಅವರಿಗೆ ಸಚಿವ ಸ್ಥಾನಕ್ಕಾಗಿ ಕಟೀಲ್ ಪ್ರಯತ್ನ ನಡೆಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ, ಸಚಿವ ಸ್ಥಾನಕ್ಕಾಗಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದರೆನೇ ಸ್ಥಾನ ಸಿಗುವುದೆಂದಾರೆ, ಜಿಲ್ಲೆಯ ಯಾವ ಶಾಸಕರೂ ಅದಕ್ಕೆ ಮುಂದಾಗುವುದು ಡೌಟು.