ಬಿಜೆಪಿಯ ಎಲ್ಲಾ ಶಾಸಕರ ಒತ್ತಾಸೆಯನ್ನು ಬಹಿರಂಗ ಪಡಿಸಿದ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು, ನ 30: ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎನ್ನುವ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿಚಾರ ಪಕ್ಷದಲ್ಲಿ ಪ್ರಸ್ತುತವೇ ಇಲ್ಲ ಎಂದು ವರಿಷ್ಠರು ಸ್ಪಷ್ಟ ಪಡಿಸಿದ್ದರೂ, ಕೆಲವು ನಾಯಕರು ಇದನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ.
ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದು, ಸದ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ.ಸುಧಾಕರ್ ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಿ, ಬಿಜೆಪಿಗೆ ಬಂದ ಮೇಲೆ, ಅವರು ನಮ್ಮ ಪಕ್ಷದವರು ಎನ್ನುವ ಸಂದೇಶವನ್ನು ವರಿಷ್ಠರು ನೀಡಿದ್ದರು.
ಸಿ.ಪಿ.ಯೋಗೇಶ್ವರ್ ಪರ ಮತ್ತೋರ್ವ ಬಲಾಢ್ಯ ಸಚಿವರ ಲಾಬಿ
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಚುನಾವಣಾ ಉಪಪ್ರಭಾರಿಯನ್ನು ಜೆ.ಪಿ.ನಡ್ಡಾ ನೇಮಿಸಿದ್ದರು. ಜೊತೆಗೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ, ವಲಸೆ ಮೂಲ ಬಿಜೆಪಿಗರು ವಿಚಾರಕ್ಕೆ ಸೊಪ್ಪು ಹಾಕಿರಲಿಲ್ಲ.
ಸದ್ಯ, ರಾಜ್ಯ ಬಿಜೆಪಿ ಘಟಕ ಒಡೆದ ಮನೆಯಂತಾಗಲು ಕಾರಣ, ಸಂಪುಟ ವಿಸ್ತರಣೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಗೆ ಅನುಮತಿ ನೀಡದೇ, ವರಿಷ್ಠರು ಸತಾಯಿಸುತ್ತಿರುವುದು, ದಿನಕ್ಕೊಂದು ಬೆಳವಣಿಗೆ ನಡೆಯಲು ಕಾರಣವಾಗಿದೆ. ಈ ನಡುವೆ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ, ಎಲ್ಲಾ ಬಿಜೆಪಿಗರ ಒತ್ತಾಸೆಯನ್ನು ಬಹಿರಂಗಗೊಳಿಸಿದ್ದಾರೆ.
ಯೋಗೇಶ್ವರ್ ಗೆ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಹಠ ಸಾಧಿಸುತ್ತಿರುವುದಕ್ಕೆ ಇದೊಂದೇ ಕಾರಣ
ರಮೇಶ್ ಜಾರಕಿಹೊಳಿ ಹೇಳಿಕೆ
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ, ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. "ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಯೋಗೇಶ್ವರ್ ಅವರ ಪ್ರಯತ್ನ ತುಂಬಾ ಇದೆ. ಅವರಿಗೆ, ಸಚಿವ ಸ್ಥಾನ ಸಿಗಲು ನನ್ನ ಕೈಯಲ್ಲಾದ ಪ್ರಯತ್ನ ಮಾಡುತ್ತಿದ್ದೇನೆ"ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ
ಇದಲ್ಲದೇ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಕೂಡಾ ಯೋಗೇಶ್ವರ್ ಪರವಾಗಿ ಬ್ಯಾಟ್ ಬೀಸಿದ್ದರು. "ನಮ್ಮ ಸರಕಾರ ಅಧಿಕಾರಕ್ಕೆ ಬರುವಲ್ಲಿ, ಯೋಗೇಶ್ವರ್ ಅವರ ಕೊಡುಗೆ ಅಪಾರ. ಹಾಗಾಗಿ, ಅವರಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ನನ್ನ ನಿಲುವು ಕೂಡಾ. ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ಸಿಗಬೇಕು ಎನ್ನುವ ಅಪೇಕ್ಷೆಯಿದೆ. ಸಿಎಂ ಮತ್ತು ವರಿಷ್ಠರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ಡಿಸಿಎಂ ಹೇಳಿದ್ದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
ಇವರಿಬ್ಬರ ಹೇಳಿಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಸಿಟ್ಟಾಗಿಸಿದೆ. "ಯಾರು ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸುತ್ತಿದ್ದಾರೋ, ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸುವುದು ನಮ್ಮ ಮೊದಲ ಗುರಿ ಎಂದು ಹೇಳುತ್ತಿದ್ದಾರೋ, ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅವರಿಗೆ ಅವಕಾಶವನ್ನು ನೀಡಲಿ"ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಶಾಸಕರ ಭಾವನೆಗಳನ್ನು ಸಿಎಂ, ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇವೆ
ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮತ್ತು ಡಾ.ಅಶ್ವಥ್ ನಾರಾಯಣ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ ರೇಣುಕಾಚಾರ್ಯ, "ಕೆಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಅದು ಬಿಟ್ಟು, ನಮ್ಮ ಶಾಸಕರಿಗೆ ಸಿಗಬಹುದಾದ ಅವಕಾಶವನ್ನು ಅವರು ಹಾಳು ಮಾಡಬಾರದು. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಇಡೀ ಬಿಜೆಪಿ ಶಾಸಕರ ಅಭಿಪ್ರಾಯ. ನಮ್ಮ ಶಾಸಕರ ಭಾವನೆಗಳನ್ನು ಸಿಎಂ, ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇವೆ. ಇದಲ್ಲದೇ, ಸದ್ಯದಲ್ಲೇ ದೆಹಲಿಗೆ ತೆರಳಿ, ವರಿಷ್ಠರಿಗೂ ನಮ್ಮ ಭಾವನೆಯನ್ನು ಹೇಳಲಿದ್ದೇವೆ"ಎಂದು ರೇಣುಕಾಚಾರ್ಯ ಹೇಳಿದ್ದಾರೆ.