ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃǃǃ
ಬಾಲ್ಯ ಕಳೆದುಹೋಗಿದ್ದು ಎಂಥ ಘೋರ ದುರಂತ ಅಲ್ಲವೇ? ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಒಂದೆಲ್ಲಾ ಒಂದು ಸಾರಿ ಮೂಡಿಯೇ ಇರುತ್ತದೆ. ಹಾಗೆ ಅನ್ನಿಸಿಲ್ಲ ಎಂದರೆ ಬಾಲ್ಯದ ಜೀವನ ಸ್ವಾದ ಸವಿದಿಲ್ಲ ಅಥವಾ ನಿಮಗೆ ಸ್ವಾದ ಸಿಕ್ಕಿಲ್ಲ ಎಂದೇ ಅಂದುಕೊಳ್ಳಬಹುದು. ಈ ಫೋಟೊ ನೋಡಿದರೆ ನಮ್ಮ ಬಾಲ್ಯದ ನೆನಪುಗಳ ಗೊಂಚಲು ತೆರೆದುಕೊಳ್ಳುವುದು ಖಂಡಿತ.
ವರುಣನ ಆಗಮನವೇ ಹಾಗೇ. ಎಲ್ಲರಲ್ಲೂ ಹೊಸ ಹುರುಪು, ಸಂಚಲನ ಉಂಟುಮಾಡುತ್ತದೆ. ಮಳೆಗಾಲದಲ್ಲಿ ಉದುರುವ ಒಂದೊಂದು ಹನಿಗಳು ಹಳೆಯ ನೆನಪುಗಳಿಗೆ ಮರುಜೀವ ನೀಡುತ್ತವೆ.
ರಸ್ತೆಯ ಕೆಸರು ನೀರಿನಲ್ಲಿ ಆಡಿದ ಮೊಂಡಾಟ, ಕಂಡಕಂಡಲ್ಲಿ ತೋಡಿದ ಗುಂಡಿಗಳು, ಒಗ್ಗಟ್ಟಿನಲ್ಲಿ ಬಲವಿದೆ ಎಂದು ಶಾಲಾ ಮಕ್ಕಳೆಲ್ಲ ಸೇರಿ ಚಿಕ್ಕ ಹಳ್ಳಕ್ಕೆ ಅಂದೇ ಕಟ್ಟಿದ್ದ 'ಬೃಹತ್ ಅಣೆಕಟ್ಟುಗಳು' ಛತ್ರಿ ಮುರಿದೊಂಡು ಮನೆಗೆ ಬಂದಾಗ ಅಪ್ಪ ನೀಡಿದ ಏಟು... ಹೀಗೆ ಸರಣಿಗೆ ಕೊನೆಯಿಲ್ಲ.
ಅತಿವೃಷ್ಟಿ, ಅನಾವೃಷ್ಟಿ ಎಂಬ ಎನೇನೋ ಬಡಬಡಿಕೆಗಳಿದ್ದರೂ ಮಳೆಗಾಲದ ಸವಿಯನ್ನು ಆನಂದಿಸುವುದರಲ್ಲಿ ಇರುವ ಮಜವೇ ಬೇರೆ. ಅದರಲ್ಲೂ ಮಕ್ಕಳಿಗೆ ಮಳೆಯಲ್ಲಿ ತೋಯುತ್ತಾ ನಿಂತರೆ ಈಗಿನ ಯಾವ ವಿಡೀಯೋ ಗೇಮ್ಗಳು ನೆನಪಾಗಲ್ಲ.(ಅನಂತರ - ಪ್ರಕೃತಿಯ ಮಡಲಲ್ಲಿ ಐಷಾರಾಮಿ ವಿಲ್ಲಾ)
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲಿ ಮಕ್ಕಳಿಬ್ಬರ ಸೈಕಲ್ ಸವಾರಿಯ ಚಿತ್ರ 'ನೂರೊಂದು ನೆನಪು ಎದೆಯಾಳದಿಂದ' ಎಂಬ ಹಾಡನ್ನು ಗುನುಗಿಸದೇ ಇರಲಾರದು. ಮಳೆ ಸುರಿಯುತ್ತಿರುವುದನ್ನು ಲೆಕ್ಕಿಸದೇ ಮಕ್ಕಳಿಬ್ಬರು ಶಾಲಾ ಸಮವಸ್ತ್ರದಲ್ಲಿ ಸೈಕಲ್ ಮೇಲೆ ತೆರಳುತ್ತಿರುವ ಚಿತ್ರದ ಆಳ ತಕ್ಷಣಕ್ಕೆ ಅರ್ಥವಾಗದು. ಮಕ್ಕಳು ಶಾಲೆಗೋ ಇಲ್ಲಾ ಮನೆಗೋ ತೆರಳುತ್ತಿದ್ದಾರೆ. ಮಳೆ ಬರುತ್ತಿದೆ, ಇದರಲ್ಲೇನು ವಿಶೇಷ? ಎಂಬ ಮೊಂಡುತನದ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ.
ಚಿತ್ರಗಳ ತಾಕತ್ತೇ ಹಾಗೆ. ಒಂದು ಉತ್ತಮ ಚಿತ್ರ ಸಾವಿರ ಪದಕ್ಕೆ ಸಮಾನ ಎಂಬ ಮಾತಿದೆ. ಘಟನೆಯ ನೈಜ ಪರಿಸ್ಥಿತಿಯನ್ನು ಚಿತ್ರಗಳು ನಮ್ಮ ಮುಂದಿಟ್ಟರೂ ಕೆಲವೊಮ್ಮೆ ಕಲ್ಪನಾತೀತ ಲೋಕಕ್ಕೂ ಕರೆದೊಯ್ಯುತ್ತವೆ.(ಯಡಿಯೂರು ಕರೆ ಮೇಲೊಂದು ಪಕ್ಷಿನೋಟ)
ಮಕ್ಕಳು ಬೆಳೆದಂತೆ ಮಳೆಯೊಂದಿಗಿನ ನಂಟು ಮಾಯವಾಗುತ್ತದೆ. ಇಲ್ಲಿ ಮಳೆಯದ್ದು ಯಾವ ತಪ್ಪಿಲ್ಲ. ಮಕ್ಕಳು ಬೆಳೆದು ದೊಡ್ಡವರಾಗಿದ್ದೇ ತಪ್ಪು! ಆದರೆ ಹುಡುಗೀಯರ ವಿಷಯಕ್ಕೆ ಬಂದರೆ ಈ ಸಂಗತಿ ಕೆಲವೊಮ್ಮೆ ಉಲ್ಟಾ ಹೊಡೆಯುತ್ತದೆ. ನಾಲ್ಕೇ-ನಾಲ್ಕು ಹನಿ ಮಳೆ ಬಂದ್ರೆ ಸಾಕು ಹುಡುಗರು ಅಡಗಿಕೊಳ್ಳಲು ಜಾಗ ಹುಡುಕಿಕೊಳ್ಳುತ್ತಾರೆ. ಆದರೆ, ಹುಡುಗಿಯರು ಹುಚ್ಚೆದ್ದು ಕುಣಿಯುತ್ತಾರೆ, ತೊಪ್ಪೆಯಾದ್ರೂ ಸರಿ ಮಳೆಯಲ್ಲೇ ನೆನೆಯಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣವೇನು? ಉತ್ತರ ಹುಡುಕಲು ಮನಶಾಸ್ತ್ರಜ್ಞರ ಬಳಿಗೆ ಹೋಗಬೇಕು, ಇಲ್ಲಾ ನೆನೆದವರನ್ನೇ ಕೇಳಬೇಕು!
ಇಷ್ಟಕ್ಕೂ ಬಾಲ್ಯದಲ್ಲಿ ತಾರತಮ್ಯವಿಲ್ಲದೇ ನೆನೆಯುತ್ತಿದ್ದ ಹುಡುಗರು ನಿವೃತ್ತಿ ಘೋಷಿಸಿದ್ದು ಯಾಕೆ? ಹುಡುಗಿಯರು ಮೇಕಪ್ ಹಾಳಾಗುತ್ತದೆ ಎಂಬ ಯೋಚನೆಯನ್ನು ಬಿಟ್ಟು ಮಳೆಗೆ ಮಾರು ಹೋಗುವುದು ಯಾಕೆ? ಇದಕ್ಕೆಲ್ಲ ಉತ್ತರ ಹೇಳಲು ಸಾಧ್ಯವಿಲ್ಲ ಬಿಡಿ. ಆದರೆ ಹುಡುಗಿಯರ ಮಳೆ ಆಟ ನೋಡಿ ಎಲ್ಲರೂ ಆನಂದಿಸಬಹುದು!
ಆಕಾಶ ನೋಡಲು ಅವಸರವೇಕೆ ಎಂಬ ಗಾದೆ ನಿಜಕ್ಕೂ ನಗರವಾಸಿಗಳಿಗೆ ಅನ್ವಯಿಸಲ್ಲ. ಎತ್ತರದ ಕಟ್ಟಡಗಳು ಸೂರ್ಯನನ್ನೂ ಮರೆ ಮಾಚಿ ನಿಂತಿವೆ. ಇನ್ನೂ ಮಳೆ ಬಂದರೆ ಕತೆ ಮುಗಿದಂತಯೇ, ರಸ್ತೆಯ ಮೇಲೆ ಮೊಣಕಾಲುದ್ದ ನೀರು. ಮನೆ ಸೇರುವುದು ಹೇಗೆ ಎಂಬ ಭಯವೇ ಕಾಡುತ್ತಿರುವಾಗ ಮಳೆಯ ಸವಿಯನ್ನು ಅನುಭವಿಸುವುದಾದರೂ ಹೇಗೆ ಸಾಧ್ಯ. ಈ ವಿಷಯದಲ್ಲಿ ಗ್ರಾಮೀಣ ಜನರೇ ಪುಣ್ಯವಂತರು ಬಿಡಿ...