ಇದು ಕನ್ನಡ ಶಾಲೆ, ಮಕ್ಕಳಿಲ್ಲದಿದ್ದರೂ ಮೇಷ್ಟ್ರು ಮಾತ್ರ ಪ್ರತಿದಿನ ಬರ್ತಾರೆ!
ಉತ್ತರ ಕನ್ನಡ, ಜೂನ್ 11: ಸರಕಾರಿ ಶಾಲೆಗಳನ್ನು ಮುಚ್ಚದೇ ಅವುಗಳನ್ನು ಉಳಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಜನರ ವಿರೋಧ ಕಟ್ಟಿಕೊಳ್ಳಲು ಹಿಂದೇಟು ಹಾಕಿರುವ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇದರ ಪರಿಣಾಮ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಇದಕ್ಕೊಂದು ನಿದರ್ಶನ ಎಂದರೆ ಅಂಕೋಲಾ ತಾಲೂಕಿನ ಹಿಲ್ಲೂರಬೈಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಶತಮಾನದ ಹೊಸ್ತಿಲಲ್ಲಿ ಇರುವ ಈ ಶಾಲೆಗೆ ಕಟ್ಟಡ, ಶಿಕ್ಷಕ ಹಾಗೂ ಬಿಸಿಯೂಟ, ಅಡುಗೆ ಸಿಬ್ಬಂದಿ ಎಲ್ಲವೂ ಇದೆ. ಆದರೆ ಒಬ್ಬನೇ ಒಬ್ಬ ವಿದ್ಯಾರ್ಥಿ ಶಾಲೆಗೆ ಬರುವುದಿಲ್ಲ.
ಮೈಸೂರು: ಉದ್ಘಾಟನೆಗೆ ಮುನ್ನವೇ ಸೋರುತಿಹುದು ಶಾಲೆಯ ಮಾಳಿಗೆ!
ತಾಲೂಕು ಕೇಂದ್ರದಿಂದ ನಲವತ್ತೈದು ಕಿಮೀ ದೂರ ಇರುವ ಹಿಲ್ಲೂರಬೈಲ್ ಪಶ್ವಿಮ ಘಟ್ಟದ ತಪ್ಪಲಿನಲ್ಲಿ ಸೌಂದರ್ಯವನ್ನು ಹೊದ್ದುಕೊಂಡಿರುವ ಪುಟ್ಟ ಗ್ರಾಮ. ಕಳೆದ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂರು ವಿದ್ಯಾರ್ಥಿಗಳ ಪೈಕಿ ಒಬ್ಬ ಪಕ್ಕದ ಹಿಲ್ಲೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾನೆ. ಉಳಿದ ಇಬ್ಬರು ವಿದ್ಯಾರ್ಥಿಗಳು ಸಹಪಾಠಿಗಳ್ಯಾರು ಇಲ್ಲದ ಕಾರಣ ಶಾಲೆ ಮೆಟ್ಟಿಲು ತುಳಿಯಲು ಮನಸ್ಸು ಮಾಡುತ್ತಿಲ್ಲ.
ಶಿಕ್ಷಕ ಏಕಾಂಗಿ
ಈ ಎಲ್ಲ ಕಾರಣಗಳಿಂದಾಗಿ ಶಾಲೆಯ ಶಿಕ್ಷಕ ನಾರಾಯಣ ಹರಿಕಂತ್ರ ಏಕಾಂಗಿಯಾಗಿದ್ದು, ಶಾಲೆಯ ಬೀಗ ತೆರೆದು ಬೆಳಗಿನಿಂದ ಸಂಜೆ ವರೆಗೆ ಕಾಲ ಕಳೆಯುವಂತಾಗಿದೆ. ಈ ಮಧ್ಯೆ ಬಿಸಿಯೂಟ ಅಡುಗೆ ಸಿಬ್ಬಂದಿಯೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರಕಾರಿ ಆದೇಶದ ಪ್ರಕಾರ ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆಯನ್ನು ಮುಚ್ಚುವಂತಿಲ್ಲ. ಆದರೆ ವಿದ್ಯಾರ್ಥಿಗಳೇ ಇಲ್ಲದಿರುವ ಕಾರಣ ಕಳೆದ ಒಂದು ಶತಮಾನದಿಂದ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಉಣ ಬಡಿಸಿದ ಹಿಲ್ಲೂರಬೈಲ್ ಸರಕಾರಿ ಶಾಲೆಯ ಪ್ರಯಾಣವೊಂದು ಅಂತ್ಯಗೊಳ್ಳುವ ಆತಂಕ ಎದುರಾಗಿದೆ.
ಶಾಲೆ ಉಳಿಸಿಕೊಳ್ಳುವ ಪ್ರಯತ್ನ
'ಗ್ರಾಮದ ಹಲವು ಪ್ರತಿಭೆಗಳನ್ನು ತಯಾರು ಮಾಡಿದ ಶಾಲೆ ನಮ್ಮ ಒಡನಾಡಿಯಾಗಿದೆ. ಮಕ್ಕಳಿಲ್ಲದೆ ಈಗ ಇದರ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಗ್ರಾಮದ ಪಾಲಕರ ಮನವೊಲಿಸುವ ಮೂಲಕ ಮಕ್ಕಳನ್ನ ಶಾಲೆಗೆ ದಾಖಲಿಸಲಾಗುವುದು. ಈ ಮೂಲಕ ಶಾಲೆಯ ಉಳಿವಿಗೆ ಎಲ್ಲ ರೀತಿಯ ಶ್ರಮ ಹಾಕಲಾಗುವುದು' ಎಂದು ಗ್ರಾಮದ ಮುಖಂಡ ವೆಂಕಟರಮಣ ಸುಬ್ರಾಯ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಎಂಟು ಶಾಲೆಗಳಿಗೆ ಬೀಗ
ಅಂಕೋಲಾ ತಾಲೂಕಿನಲ್ಲಿ ಒಟ್ಟು ನೂರಾ ಐವತ್ತಾರು ಪ್ರಾಥಮಿಕ ಶಾಲೆಗಳಿವೆ. ಎಂಬತ್ತೆರಡು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಎಪ್ಪತ್ನಾಲ್ಕು ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಾರ ಎಂಟಕ್ಕಿಂತ ಹೆಚ್ಚು ಶಾಲೆಗಳಲ್ಲಿ ಆರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ತಾಲೂಕಿನಲ್ಲಿ ಐನೂರಾ ಹನ್ನೆರಡು ಶಿಕ್ಷಕರು ಕರ್ತವ್ಯದಲ್ಲಿದ್ದು, ಹನ್ನೆರಡು ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ಈಗಾಗಲೇ ಸೂರ್ವೆ, ರಾಜನಗುಳಿ, ಬೆಣದಹಳ್ಳಿ, ಕೋಟೆಬಾವಿ ಸೇರಿದಂತೆ ಎಂಟಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಬೀಗ ಹಾಕಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹಿಲ್ಲೂರಬೈಲ ಶಾಲೆಯು ಇದೇ ಹಾದಿ ಹಿಡಿದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಶಿವಾನಂದ ಮಲ್ಲಾಡ, ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿ
ಹಿಲ್ಲೂರಬೈಲ್ ಶಾಲೆಯಲ್ಲಿ ಸ್ಥಿತಿ ಇಲಾಖೆ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಶಾಲಾ ದಾಖಲಾತಿ ವಯೋಮಿತಿಯನ್ನು ಸಡಿಲಗೊಳಿಸಿದ್ದು, ಈ ಮೊದಲಿನಂತೆ ಐದು ವರ್ಷ ಆರು ತಿಂಗಳಿಗೆ ನಿಗದಿಗೊಳಿಸಿದೆ. ಅಲ್ಲದೆ ವಿದ್ಯಾರ್ಥಿಗಳ ಪ್ರವೇಶ ದಾಖಲಿಸಲು ಜೂನ್ ಮೂವತ್ತು ಕೊನೆಯ ದಿನವಾಗಿದ್ದು, ಅಷ್ಟರಲ್ಲಿ ಒಬ್ಬನೇ ವಿದ್ಯಾರ್ಥಿ ಶಾಲೆಗೆ ದಾಖಲಾದರೂ ಶಾಲೆ ಮುಚ್ಚುವುದಿಲ್ಲ. ಈ ಬಗ್ಗೆ ಶಾಲೆ ಶಿಕ್ಷಕರಿಗೆ ಈಗಾಗಲೇ ಸೂಚಿಸಲಾಗಿದೆ.
ನಾರಾಯಣ ಹರಿಕಂತ್ರ, ಹಿಲ್ಲೂರಬೈಲ್ ಶಿಕ್ಷಕ
ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣಕ್ಕೆ ನಾನು ಏಕಾಂಗಿಯಾಗಿದ್ದೇನೆ. ಮೇಲಧಿಕಾರಿಗಳು ಜೂನ್ ಮೂವತ್ತರ ಒಳಗಾಗಿ ವಿದ್ಯಾರ್ಥಿಗಳನ್ನು ದಾಖಲಿಸುವಂತೆ ಸೂಚಿಸಿದ್ದು, ಅದರಂತೆ ಗ್ರಾಮದ ಪಾಲಕರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.