VIDEO: ಈ ದೀಪಾವಳಿಗೆ ಬಿಡುಗಡೆ ಆಗಬೇಕಿದ್ದ ಪುನಿತ್ ರಾಜಕುಮಾರ್ ವಿಡಿಯೋ!
ಬೆಂಗಳೂರು, ಅ. 29: ನಟ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ಅವರು ಮಾಡುತ್ತಿದ್ದ ಸಮಾಜ ಸೇವೆಯ ಕೆಲಸಗಳು ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿವೆ. ಬಲಗೈಯಿಂದ ಮಾಡಿದ ದಾನ ಎಡಗೈಗೆ ಗೊತ್ತಾಗದಂತಿರಬೇಕು ಎಂಬುದನ್ನು ಅಕ್ಷರಶಃ ಪುನಿತ್ ರಾಜಕುಮಾರ್ ಪಾಲಿಸಿದ್ದಾರೆ. ಅವರು ಮಾಡುತ್ತಿದ್ದ ಸಮಾಜಸೇವೆ ಅವರು ತೀರಿದ ಬಳಿಕ ಇದೀಗ ಬಹಿರಂಗವಾಗುತ್ತಿವೆ.
26 ಅನಾಥಾಶ್ರಮಗಳು, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಿನಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಮಾಡಿದ್ದಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಸಮಾಜಕಾರ್ಯ ಹಂಚಿಕೊಂಡಿದ್ದಾರೆ. ಜೊತೆಗೆ ಸಾವಿನ ಬಳಿಕ ಅಂಗಾಗ ದಾನ ಮಾಡುವ ಮೂಲಕ ಪುನೀತ್ ರಾಜಕುಮಾರ ಅಕಾಲಿಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತು ಮತ್ತೊಂದು ಮನಮಿಡಿಯುವ ಸಂಗತಿಯನ್ನು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ ಹಂಚಿಕೊಂಡಿದ್ದಾರೆ. ಜೊತೆಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಮಾಡಿದ್ದ ಕೊನೆಯ ವಿಡಿಯೋ ಬಿಡುಗಡೆ ಆಗಿದೆ.
ವಿದ್ಯಾರ್ಥಿಗಳನ್ನು ಸೆಳೆಯಲು ಪುನೀತ್ ಪ್ರಯತ್ನ!
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪುನೀತ್ ರಾಜಕುಮಾರ್ ಅವರು ಸರ್ಕಾರಿ ಐಟಿಐ ಸಂಸ್ಥೆಗಳ ಪ್ರಚಾರ ರಾಯಭಾರಿಯಾಗಿದ್ದರು ಎಂದು ಪುನೀತ್ ರಾಜಕುಮಾರ್ ಹಠಾತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
"ಸರಕಾರಿ ಐಟಿಐಗಳಿಗೆ ಹುಡುಗರು ಹೆಚ್ಚಿನ ಸಂಖ್ಯೆಯಲ್ಲಿ ಬರದೆ ಇದ್ದುದು ನನಗೆ ಕಳವಳ ಹುಟ್ಟಿಸಿತ್ತು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐಟಿಐ ಮಾಡಿಕೊಂಡರೆ ಒಂದು ಕೆಲಸವಾದರೂ ಸಿಗುತ್ತದೆ. ಹೀಗಾಗಿ ಅವರನ್ನು ಐ.ಟಿ.ಐ.ನತ್ತ ಸೆಳೆಯಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ಈ ಆಲೋಚನೆಯನ್ನು ಪುನೀತ್ ಅವರೊಂದಿಗೆ ಹಂಚಿಕೊಂಡಾಗ ಅವರು ನಮ್ಮ ಬೆಂಬಲಕ್ಕೆ ಬಂದಿದ್ದರು" ಎಂದು ಡಾ. ಅಶ್ವಥ್ ನಾರಾಯಣ ನೆನಪಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು!
"ಗ್ರಾಮೀಣ ಭಾಗದ ಯುವಜನರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು ಎನ್ನುವುದು ಅವರ ಕಳಕಳಿಯಾಗಿತ್ತು. ಅವರ ಬದುಕು ಹಸನಾಗಬೇಕೆಂದು ಸದಾ ಹೇಳುತ್ತಿದ್ದರು. ಇದಕ್ಕೆ ತಕ್ಕಂತೆ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಿಡರ್) ಆದರು. ಇದಕ್ಕೆ ಸಂಬಂಧಿಸಿದ ಚಿತ್ರೀಕರಣದಲ್ಲಿ ಪುನೀತ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ಸಮಾಜಮುಖಿ ಪ್ರಜ್ಞೆ ಅವರ ಅಂತರಂಗದಲ್ಲಿ ಮನೆಮಾಡಿತ್ತು" ಎಂದು ಡಾ. ಅಶ್ವಥ್ ನಾರಾಯಣ ನೋವಿನಲ್ಲಿ ಪುನೀತ್ ಅವರ ಒಳ್ಳೆಯ ಗುಣಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದೀಪಾವಳಿಗಾಗಿ ಪುನೀತ್ ಭಾಗಿಯಾಗಿ ಮನವಿ ಮಾಡಿಕೊಂಡಿದ್ದ ವಿಡಿಯೋವನ್ನು ಡಾ. ಅಶ್ವಥ್ ನಾರಾಯಣ ಬಿಡುಗಡೆ ಮಾಡಿದ್ದಾರೆ.
ಸಮಾಪುನೀತ್ ರಾಜಕುಮಾರ್ ಕೊನೆಯ ವಿಡಿಯೋ!
"ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳು, ದೀಪಾವಳಿ ಸಲುವಾಗಿ ತಯಾರಿಸಿರುವ ಮಣ್ಣಿನ ದೀಪಗಳ ಮಾರಾಟಕ್ಕೂ ಪುನೀತ್ ರಾಜಕುಮಾರ್ ಸಹಕರಿಸಿದ್ದರು. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದ ಪುನೀತ್, 'ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕು ಅಂದರೆ ಜ್ಞಾನ ಹಾಗೂ ಸಮೃದ್ಧಿಯ ಸಂಕೇತ. ಈ ಹಬ್ಬದ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ದೀಪ ಸಂಜೀವಿನಿ ಹಣತೆಗಳನ್ನು ಖರೀದಿಸುವುದು. ಈ ಮೂಲಕ ಅವರ ಸ್ವಾಭೀಮಾನಕ್ಕೆ ಹಾಗೂ ಶ್ರಮಕ್ಕೆ ನಾವೆಲ್ಲರೂ ಸೇರಿ ಗೌರವ ಸಲ್ಲಿಸೋಣ. ಪ್ರಕೃತಿ ಸ್ನೇಹಿ ದೀಪಾವಳಿ ಆಚರಿಸೋಣ. Let us save the envirmnent' ಎಂಬ ಸಂದೇಶ ನೀಡಿದ್ದರು. ಗ್ರಾಮೀಣ ಮಹಿಳೆಯರಿಗೆ ನನ್ನ ಬೆಂಬಲ ಸದಾ ಇರುತ್ತೆ ಎಂದೂ ಪುನೀತ್ ಹೇಳಿದ್ದರು" ಅಂತಾ ಡಾ. ಅಶ್ವಥ್ ನಾರಾಯಣ ನೆನಪು ಹಂಚಿಕೊಂಡಿದ್ದಾರೆ.
ಯುವಜನರ ಪಾಲಿಗೆ ನಿಜವಾದ ಐಕಾನ್ ಪುನೀತ್!
"ರಚನಾತ್ಮಕ ಕಾರ್ಯಕ್ರಮಗಳಿಗೆ ನಮ್ಮೊಂದಿಗೆ ಹೆಗಲು ಕೊಡುತ್ತಿದ್ದ ಪುನೀತ್ ಈಗ ಇಲ್ಲವೆಂದರೆ ನಂಬಲಾಗುತ್ತಿಲ್ಲ. ಯುವಜನರ ಪಾಲಿಗೆ ನಿಜವಾದ ಐಕಾನ್ ಆಗಿದ್ದ ಅವರ ನಿಧನದಿಂದ ಕನ್ನಡ ನಾಡು-ನುಡಿ ಬಡವಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ಶೂನ್ಯ ಸೃಷ್ಟಿಯಾಗಿದೆ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ತುಂಬುವುದು ಸಾಧ್ಯವಿಲ್ಲ. ಮಲ್ಲೇಶ್ವರ ಕ್ಷೇತ್ರದ ನಿವಾಸಿಯೂ ಆಗಿದ್ದ ಅವರ ಮತ್ತು ನಮ್ಮ ಕುಟುಂಬಗಳ ನಡುವೆ ಆತ್ಮೀಯ ಮತ್ತು ನಿಕಟ ಒಡನಾಟವಿತ್ತು. ಅವರು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ಒಂದಾಗುತ್ತಿದ್ದರು" ಎಂದು ಡಾ. ಅಶ್ವಥ್ ನಾರಾಯಣ ಕಂಬನಿ ಮಿಡಿದಿದ್ದಾರೆ.