ಲೆಕ್ಕ ಕೊಡಿ ಅಂದ್ರೆ ಹಿಂಗೇನ್ರೀ ಕೊಡೋದು? ಬಿಎಸ್ವೈ ಸರಕಾರದ ವಿರುದ್ದ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ
ಬೆಂಗಳೂರು, ಜುಲೈ 20: ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನುವ ವಿರೋಧ ಪಕ್ಷಗಳ ಆರೋಪದ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ನೀಡಿದ ಲೆಕ್ಕಪತ್ರಕ್ಕೆ, ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಸೋಮವಾರ (ಜು 20) ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಾ, "ಲೆಕ್ಕ ಕೊಡಿ ಅಂದರೆ, ಹೀಗಾ ಕೊಡೋದು. ಬಾಯಿ ಮಾತಿನಲ್ಲಿ ಲೆಕ್ಕ ಕೊಟ್ಟರೆ ಆಗುತ್ತಾ" ಎಂದು ಸಿದ್ದರಾಮಯ್ಯ, ಬಿಎಸ್ವೈ ಸರಕಾರದ ವಿರುದ್ದ ಗುಡುಗಿದರು.
ಶ್ರೀರಾಮುಲು ಲೆಕ್ಕ: ಸಿದ್ದರಾಮಯ್ಯ ಆರೋಪಗಳಿಗೆ ಪಿನ್ ಟು ಪಿನ್ ಉತ್ತರ
"ಯಾವುದಕ್ಕೆ ಎಷ್ಟು ವ್ಯಯಿಸಲಾಗಿದೆ. ವೈದ್ಯಕೀಯ ಉಪಕರಣಕ್ಕೆ, ಪಿಪಿಇ ಕಿಟ್ ಮುಂತಾದವುದಕ್ಕೆ ಖರ್ಚಾಗಿದೆಷ್ಟು ಎನ್ನುವುದರ ಬಗ್ಗೆ ದಾಖಲೆ ಸಮೇತ ಲೆಕ್ಕ ಕೊಡಬೇಕಲ್ಲವೇ"ಎಂದು ಸಿದ್ದರಾಮಯ್ಯ, ಸರಕಾರವನ್ನು ಪ್ರಶ್ನಿಸಿದರು.
"ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ನನಗೆ ಪತ್ರವನ್ನು ಬರೆದಿದ್ದಾರೆ. ರಾಜೀನಾಮೆ ನೀಡುವವರು ಯಾಕೆ ಸರಕಾರದ ಭಾಗವಾಗಿರಬೇಕಾಗಿತ್ತು"ಎಂದು ಸಿದ್ದರಾಮಯ್ಯ, ಸಚಿವ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು.
ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಆಕ್ಸಿಜನ್ ಸಿಲಿಂಡರ್, ಸ್ಯಾನಿಟೈಸರ್ ಸೇರಿದಂತೆ ಪ್ರತಿಯೊಂದರಲ್ಲೂ ಸೇರಿ ಸುಮಾರು 2200 ಕೋಟಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ಆರೋಪಗಳಿಗೆ ಪಿನ್ ಟು ಪಿನ್ ಲೆಕ್ಕವನ್ನು ಶ್ರೀರಾಮುಲು ನೀಡಿದ್ದರು.
ಡಿಸಿಎಂ ಅಶ್ವತ್ ನಾರಾಯಣ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು "ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಆರೋಪ ಎಲ್ಲವೂ ಸುಳ್ಳು, ಅವರ ಹೇಳಿರುವಷ್ಟು ನಾವು ಖರೀದಿ ಮಾಡೇ ಇಲ್ಲ. ಒಂದು ರೂಪಾಯಿ ಅಕ್ರಮ ನಡೆದಿದೆ ಎಂದು ಸಾಬೀತುಪಡಿಸಿದರೆ ಕೂಡಲೇ ರಾಜೀನಾಮೆ ಕೊಡುತ್ತೇನೆ" ಎಂದು ಸವಾಲು ಎಸೆದಿದ್ದರು.